ಹಾಲುಮಡ್ಡಿ ಮರದ ರೆಂಬೆ ಬಿದ್ದು ಸ್ಥಳದಲ್ಲಿಯೇ ಮಹಿಳೆ ಸಾವು

ಶೇರ್ ಮಾಡಿ

ಕೊಕ್ಕಡ : ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಸಮೀಪದ ಕ್ವಾಟ್ರಸ್ ಎಂಬಲ್ಲಿ ಮನೆ ಎದುರಿನ ಮರದ ರೆಂಬೆ ಕಡಿಯುವ ಸಂದರ್ಭ ಆಕಸ್ಮಿಕವಾಗಿ ಮನೆಯೊಡತಿ ತಲೆಗೆ ಬಿದ್ದು ಆಕೆ ಸ್ಥಳದಲ್ಲಿಯೇ ಮೃತ ಪಟ್ಟ ದಾರುಣ ಘಟನೆ ಶುಕ್ರವಾರ (ಮಾ.28) ಬೆಳಗ್ಗೆ ನಡೆದಿದೆ. ಕ್ವಾಟ್ರಸ್ ನಿವಾಸಿ ದಾಮೋದರ ಆಚಾರ್ಯ ಎಂಬವರ ಪತ್ನಿ ಗಾಯತ್ರಿ ಆಚಾರ್ಯ ಮೃತಪಟ್ಟ ದುರ್ದೈವಿ.

ಮನೆಯ ಮುಂದೆ ಇರುವ ಹಾಲುಮಡ್ಡಿ ಮರವು ಎತ್ತರಕ್ಕೆ ಹೋಗಿದ್ದು, ಮುಂದೆ ಮನೆಗೆ ಅಪಾಯವೆಂಬ ನಿಟ್ಟಿನಲ್ಲಿ ಅದರ ಗೆಲ್ಲುಗಳನ್ನು (ಕೊಂಬೆಗಳು) ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಗೆಲ್ಲುಗಳ ತೆರವಿನ ಬಳಿಕ ಮರವು ಅರ್ಧದಿಂದ ತುಂಡಾಗಿ ನೇರವಾಗಿ ಮನೆಯ ಶೀಟಿನ ಸಮೀಪ ಬಿದ್ದಿದೆ. ಈ ಸಂದರ್ಭ ಮನೆಯೊಡತಿ ಸ್ಥಳದಲ್ಲಿ ನಿಂತಿದ್ದು ಮರದ ಕೊಂಬೆ ರಭಸದಿಂದ ಇವರ ಕಾಲಿಗೆ ಬಡಿದು ಕಾಲು ಮುರಿದು ಆಕೆ ನೆಲಕ್ಕೆ ಬಿದ್ದಿದ್ದಾರೆ.

ಬಿದ್ದ ತಕ್ಷಣ ತಲೆಗೆ ತೀವ್ರ ಏಟು ಬಿದ್ದು ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾರೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕಸ್ಮಿಕ ಸಾವು ಎಂದು ಪ್ರಕರಣವನ್ನು ದಾಖಲಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಗಾಯತ್ರಿ ಹಾಗೂ ದಾಮೋದರ ದಂಪತಿಗಳು ಬಡ ಕುಟುಂಬದಲ್ಲಿ ವಾಸಿಸುತ್ತಿದ್ದು ಮಗ ಮರದ ಕೆತ್ತನೆಯನ್ನು ಮಾಡುತ್ತಿದ್ದು ಜೀವನ ಸಾಗಿಸುತ್ತಿದ್ದರು.
ಗ್ರಾಮೀಣ ಭಾಗದಲ್ಲಿ ಮಳೆಗಾಲಕ್ಕೂ ಮುನ್ನ ಮನೆ ಸಮೀಪದ ಬೃಹದಾಕಾರದ ಮರಗಳ ಗೆಲ್ಲುಗಳನ್ನು ಕಡಿಯುವ ಪ್ರಕ್ರಿಯೆ ಸಾಮಾನ್ಯವಾಗಿದ್ದು ಮಳೆಗಾಲದಲ್ಲಿ ಉಂಟಾಗುವ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಈ ರೀತಿಯ ಗೆಲ್ಲು ಕಡಿಯುವ ಕಾರ್ಯವನ್ನು ನಡೆಸಲಾಗುತ್ತದೆ. ಆದರೆ ಈ ಸಂದರ್ಭ ಈ ರೀತಿಯ ದಾರುಣ ಸಾವು ನಡೆದಿರುವುದು ಮಾತ್ರ ವಿಷಾದನೀಯ.

Leave a Reply

error: Content is protected !!