ಶಿರಾಡಿ: ಚರ್ಚ್‌ನಿಂದ 1.08 ಲಕ್ಷ ರೂ.ಮೌಲ್ಯದ ಚಿನ್ನ,ಬೆಳ್ಳಿ, ಕಾಣಿಕೆ ಡಬ್ಬಿ ಕಳ್ಳತನ

ಶೇರ್ ಮಾಡಿ

ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಸೈಂಟ್ ಪೀಟರ್ಸ್ ಮತ್ತು ಪೌಲ್ಸ್ ಚಾಕೋಬೈಟ್ ಸಿರಿಯನ್ ಚರ್ಚ್‌ನಿಂದ ಹರಕೆಯ ರೂಪದಲ್ಲಿ ಬಂದಿದ್ದ ಸುಮಾರು 1.08 ಲಕ್ಷ ರೂ.ಮೌಲ್ಯದ ಚಿನ್ನ, ಬೆಳ್ಳಿ, ಕಾಣಿಕೆ ಡಬ್ಬಿಯಲ್ಲಿನ ನಗದು ಹಾಗೂ ಡೀಸೆಲ್ ಸೇರಿ ಸೊತ್ತು ಕಳವುಗೊಂಡಿರುವ ಘಟನೆ ನಡೆದಿದೆ.

ಎ.30ರ ಸಂಜೆ 3 ಗಂಟೆಯಿಂದ ಮೇ 1ರ ರಾತ್ರಿ 7 ಗಂಟೆ ಮಧ್ಯದ ಅವಧಿಯಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ. ಚರ್ಚ್‌ನ ಕಛೇರಿ ಕೊಠಡಿಯ ಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಕಚೇರಿಯೊಳಗೆ ಕಬ್ಬಿಣದ ಕಪಾಟನಲ್ಲಿ ಬಿಳಿ ಪ್ಲಾಸ್ಟಿಕ್ ಡಬ್ಬದಲ್ಲಿದ್ದ 12 ಗ್ರಾಂ.ತೂಕದ ಹರಕೆಯ ಚಿನ್ನ ಹಾಗೂ ಅಂದಾಜು 250 ಗ್ರಾಂ.ತೂಕದ ಹರಕೆಯ ಬೆಳ್ಳಿ, ಮೇಜಿನ ಡ್ರವರ್‌ನಲ್ಲಿದ್ದ ಕಾಣಿಕೆ ಡಬ್ಬದಲ್ಲಿದ್ದ 15,880 ನಗದು, ಮರದ ಕಪಾಟನಲ್ಲಿದ್ದ ದಾಖಲಾತಿಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಜನರೇಟರ್‌ನ ಶೆಡ್‌ನ ಬೀಗವನ್ನು ಮುರಿದು ಅದರಲ್ಲಿ ಕಪ್ಪು ಬಣ್ಣದ ಕ್ಯಾನ್‌ನಲ್ಲಿದ್ದ 35 ಲೀಟರ್ ಡೀಸೆಲ್
ಕಳ್ಳತನ ಮಾಡಲಾಗಿದೆ. ಚರ್ಚ್‌ನ ಒಂದು ಬಾಗಿಲಿನ ಲಾಕರ್‌ನ್ನು ಬಲವಂತವಾಗಿ ಮೀಟಿ ತೆಗೆದು 3,500 ನಗದು ಇರುವ ಪ್ಲಾಸ್ಟಿಕ್ ಕಾಣಿಕೆ ಡಬ್ಬಿಯನ್ನು ಕಳ್ಳತನ ಮಾಡಲಾಗಿದೆ. ಚಿನ್ನ,ಬೆಳ್ಳಿ, ಡೀಸೆಲ್ ಹಾಗೂ ನಗದು ಸೇರಿ 1,08,455 ರೂ.,ಮೌಲ್ಯದ ಸೊತ್ತು ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ.

ಎಂದಿನಂತೆ ಎ.30ರಂದು ಬೆಳಿಗ್ಗೆ ಚರ್ಚ್‌ನಲ್ಲಿ ಪ್ರಾರ್ಥನೆ ನಡೆದ ಬಳಿಕ ಬಂದ ಕಾಣಿಕೆಯ ಹಣ ಲೆಕ್ಕಾಚಾರ ಮಾಡಿ ಸಂಜೆ 3.00 ಗಂಟೆಗೆ ಚರ್ಚ್‌ನ ಸದಸ್ಯರು ಚರ್ಚ್‌ನ ಬಾಗಿಲು ಭದ್ರಪಡಿಸಿ ಹೋಗಿದ್ದರು. ಮೇ 1 ರಂದು ಸಂಜೆ ಸುಮಾರು 7.00 ಗಂಟೆಗೆ ಚರ್ಚ್‌ನ ಸಹಾಯಕರ ರೂಮ್‌ನ ಲೈಟ್ ಉರಿಯುತ್ತಿರುವುದನ್ನು ಜೇನ್ ಜೋನ್ ಎಂಬವರು ಗಮನಿಸಿ ರೂಮ್‌ನ ಬಳಿ ಹೋಗಿ ನೋಡಿದಾಗ ಬಾಗಿಲಿನ ಕೊಂಡಿಯನ್ನು ಬಲವಂತವಾಗಿ ಮೀಟಿ ತೆಗೆದಿರುವುದನ್ನು ನೋಡಿ ಶ್ಯಾಮ್ ಮ್ಯಾಥ್ಯೂ ಎಂಬವರಿಗೆ ಮಾಹಿತಿ ನೀಡಿದ್ದರು. ಬಳಿಕ ಅವರು ಚರ್ಚ್‌ನ ಆಡಳಿತ ಮಂಡಳಿ ಕಾರ್ಯದರ್ಶಿ ಮನೋಜ್ ಜೋಯಿಸ್ ಎಂಬವರನ್ನು ಬರಲು ಹೇಳಿ ಅವರೊಂದಿಗೆ ಸಹಾಯಕರ ರೂಮಿನ ಒಳಗೆ ಹೋಗಿ ನೋಡಿದಾಗ ಎರಡೂ ಕಪಾಟುಗಳಲ್ಲಿನ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದು, ಫಾದರ್ ನ ಕೊಠಡಿಯ ಬಾಗಿಲಿನ ಚಿಲಕವನ್ನು ಬಲವಂತವಾಗಿ ಮೀಟಿ ತೆಗೆದಿದ್ದು, ಕೊಠಡಿಯಲ್ಲಿದ್ದ ಕಬ್ಬಿಣದ ಕಪಾಟನ್ನು ಮೇಜಿನ ಡ್ರವರ್‌ನಲ್ಲೂ ಹುಡುಕಾಡಿ ಸೊತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡಬಂದಿದೆ. ಬಳಿಕ ಘಟನೆ ಕುರಿತು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಮೇ 2ರಂದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್, ಚರ್ಚ್‌ನ ಆಡಳಿತ ಮಂಡಳಿ ಕಾರ್ಯದರ್ಶಿ ಮನೋಜ್ ಜೋಯಿಸ್, ಕೋಶಾಧಿಕಾರಿ ರಾಜೇಶ್ ಕೆ.ಕೆ., ಸದಸ್ಯರಾದ ಎಂ.ಕೆ.ಪೌಲೋಸ್, ಸನ್ನಿಜಾನ್ ಮತ್ತಿತರರು ಪೊಲೀಸರಿಗೆ ಮಾಹಿತಿ ನೀಡಿದರು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!