ನಾಳೆ ಅಥವಾ ಸೋಮವಾರ ಪ್ರಮಾಣ ಸ್ವೀಕರಿಸಲಿರುವ 24 ಸಚಿವರ ಅಂತಿಮ ಪಟ್ಟಿ

ಶೇರ್ ಮಾಡಿ

ಬೆಂಗಳೂರು: ಪೂರ್ಣ ಪ್ರಮಾಣದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಸುವುದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಿಗೆ ನೀಡಿದೆ. ಶನಿವಾರ ಅಥವಾ ಸೋಮವಾರ 24 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆ ವಿಚಾರವನ್ನು ಒಂದೇ ಕಂತಿನಲ್ಲಿ ಬಗೆಹರಿಸುವ ನಿರ್ಧಾರವನ್ನು ಕಾಂಗ್ರೆಸ್‌ ವರಿಷ್ಠರು ನಡೆಸಿದ್ದಾರೆ.

ಎರಡು ದಿನಗಳಿಂದ ಹೊಸ ದಿಲ್ಲಿಯಲ್ಲಿಯೇ ಬೀಡುಬಿಟ್ಟಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ವರಿಷ್ಠರ ಜತೆಗೆ ನಡೆಸಿದ ಸರಣಿ ಸಭೆಗಳ ಬಳಿಕ ಪಟ್ಟಿ ಅಂತಿಮಗೊಂಡಿದೆ. ಸಂಪುಟ ವಿಸ್ತರಣೆಯಲ್ಲೂ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ. ಹೊಸಮುಖ- ಹಳೆಮುಖಗಳ ಸಮತೋಲನದ ವಿಚಾರದಲ್ಲಿ ಉಭಯ ನಾಯಕರ ಮಧ್ಯೆ ಹೊಂದಾಣಿಕೆ ಸುಸೂತ್ರವಾಗದೆ ಇದ್ದುದರಿಂದ ತತ್‌ಕ್ಷಣದ ನಿರ್ಧಾರಕ್ಕೆ ಹೈಕಮಾಂಡ್‌ ಹಿಂದೇಟು ಹಾಕಿತು ಎನ್ನಲಾಗಿದೆ.
ಅದಾಗಿಯೂ ಜಾತಿ ಹಾಗೂ ಪ್ರದೇಶದ ಆಧಾರದ ಮೇಲೆ ಸಮತೂಕದ ಸಂಪುಟ ರಚನೆ ಮಾಡಲಾಗಿದೆ. ಶನಿವಾರದ ಕಾರ್ಯಕ್ರಮದ ಬಗ್ಗೆ ರಾಜ ಭವನದಿಂದಲೂ ಹಸುರು ನಿಶಾನೆ ಲಭಿಸಿದೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರಿಗಿಂತ ಮುಂಚಿತವಾಗಿ ಹೊಸದಿಲ್ಲಿಗೆ ತೆರಳಿದ್ದ ಉಪ ಮುಖ್ಯಮಂತ್ರಿ ಶಿವಕುಮಾರ್‌ ಬುಧವಾರ ರಾತ್ರಿಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಅರ್ಧ ತಾಸು ಪ್ರತ್ಯೇಕ ಸಭೆ ನಡೆಸಿದರು. ಗುರುವಾರ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಜತೆಗೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಸಾಯಂಕಾಲದ ವರೆಗೂ ಎರಡು ಸುತ್ತು ಸಭೆ ನಡೆಸಿದ ಬಳಿಕ ಪಟ್ಟಿ ಅಂತಿಮಗೊಂಡಿದೆ. ಇದರ ಜತೆಗೆ ಖಾತೆ ಹಂಚಿಕೆ ಬಹುಪಾಲು ಅಂತಿಮಗೊಂಡಿದ್ದು, ಯಾರಿಗೆ ಯಾವ ಖಾತೆ ಎಂಬ ಗುಟ್ಟು ಬಿಟ್ಟುಕೊಡಲು ಕಾಂಗ್ರೆಸ್‌ ಮೂಲಗಳು ನಿರಾಕರಿಸಿವೆ.
ಶನಿವಾರ ಬೆಳಗ್ಗೆ 11.45ಕ್ಕೆ ಸಚಿವರ ಪ್ರಮಾಣವಚನ ನಡೆಯಲಿದೆ ಎಂಬ ಮಾಹಿತಿ ಕಾಂಗ್ರೆಸ್‌ ಪಾಳಯದಲ್ಲಿ ಹಬ್ಬಿತ್ತು. ಆದರೆ ಪಟ್ಟಿಯನ್ನು ರಾಹುಲ್‌ ಗಾಂಧಿಯವರ ಪರಿಶೀಲನೆಗೆ ರವಾನೆ ಮಾಡಿರುವುದರಿಂದ ಸೋಮವಾರಕ್ಕೆ ಮುಂದೂಡಿಕೆಯಾದರೂ ಆಗಬಹುದು. ಸಿದ್ದರಾಮಯ್ಯ ಅವರು ಶುಕ್ರವಾರ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಬೆಂಗಳೂರಿಗೆ ವಾಪಸಾಗುವರು.

ಸಂಭಾವ್ಯ ಸಚಿವರ ಪಟ್ಟಿ
– ಲಕ್ಷ್ಮೀ ಹೆಬ್ಟಾಳ್ಕರ್‌ – ಬೆಳಗಾವಿ
– ಶಿವಾನಂದ ಪಾಟೀಲ್‌- ವಿಜಯಪುರ
– ವಿಜಯಾನಂದ ಕಾಶಪ್ಪನವರ್‌ – ಬಾಗಲಕೋಟೆ
– ಡಾ| ಅಜಯ್‌ಸಿಂಗ್‌, ಶರಣ ಪ್ರಕಾಶ್‌ ಪಾಟೀಲ್‌- ಕಲಬುರಗಿ
– ಶರಣಬಸಪ್ಪ ದರ್ಶನಾಪುರ್‌, ರಾಜಾ ವೆಂಕಟಪ್ಪ ನಾಯಕ: ಯಾದಗಿರಿ
– ಈಶ್ವರ ಖಂಡ್ರೆ/ ರಹೀಂ ಖಾನ್‌ : ಬೀದರ್‌
– ಶಿವರಾಜ್‌ ತಂಗಡಗಿ/ ಬಸವರಾಜ್‌ ರಾಯರೆಡ್ಡಿ : ಕೊಪ್ಪಳ
– ಎಚ್‌.ಕೆ. ಪಾಟೀಲ್‌ / ಜಿ.ಎಸ್‌. ಪಾಟೀಲ್‌ : ಗದಗ
– ಸಂತೋಷ್‌ ಲಾಡ್‌ : ಧಾರವಾಡ
– ಆರ್‌.ವಿ. ದೇಶಪಾಂಡೆ : ಉತ್ತರ ಕನ್ನಡ
– ನಾಗೇಂದ್ರ/ ಇ. ತುಕಾರಾಂ : ಬಳ್ಳಾರಿ
– ಸುಧಾಕರ್‌/ ರಘುಮೂರ್ತಿ : ಚಿತ್ರದುರ್ಗ
– ಮಧು ಬಂಗಾರಪ್ಪ/ ಸಂಗಮೇಶ್‌ : ಶಿವಮೊಗ್ಗ
– ಪುಟ್ಟರಂಗಶೆಟ್ಟಿ : ಚಾಮರಾಜನಗರ
– ಕೃಷ್ಣ ಭೈರೇಗೌಡ : ಬೆಂಗಳೂರು
– ನರೇಂದ್ರಸ್ವಾಮಿ/ಚಲುವರಾಯಸ್ವಾಮಿ : ಮಂಡ್ಯ
– ಎಸ್‌.ಎಸ್‌. ಮಲ್ಲಿಕಾರ್ಜುನ : ದಾವಣಗೆರೆ
– ಪಿರಿಯಾಪಟ್ಟಣ ವೆಂಕಟೇಶ್‌ : ಮೈಸೂರು
– ಶಿವಲಿಂಗೇಗೌಡ/ ರಾಜೇಗೌಡ : ಹಾಸನ/ಚಿಕ್ಕಮಗಳೂರು
– ಜಯಚಂದ್ರ/ ಕೆ.ಎನ್‌.ರಾಜಣ್ಣ : ತುಮಕೂರು
– ಎಂ.ಸಿ. ಸುಧಾಕರ್‌ : ಚಿಕ್ಕಬಳ್ಳಾಪುರ
– ಡಾ| ಎಚ್‌.ಸಿ. ಮಹದೇವಪ್ಪ ಮೈಸೂರು
ಬೆಳಗಾವಿಗೆ ಲಕ್ಷ್ಮೀ ಮಾತ್ರ ಲಕ್ಷ್ಮಣ ಸವದಿಗೆ ನಿರಾಸೆ
ಕಾಂಗ್ರೆಸ್‌ ಮೂಲಗಳ ಪ್ರಕಾರ ಲಕ್ಷ್ಮೀ ಹೆಬ್ಟಾಳ್ಕರ್‌ ಮಾತ್ರ ಬೆಳಗಾವಿ ಹಾಗೂ ಮಹಿಳಾ ಕೋಟಾದಲ್ಲಿ ಸಚಿವ ಸಂಪುಟ ಸೇರ್ಪಡೆಯಾಗಲಿದ್ದಾರೆ. ಹೀಗಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಈ ಬಾರಿ ನಿರಾಸೆ ನಿಶ್ಚಿತ ಎಂದು ತಿಳಿದು ಬಂದಿದೆ. ಜತೆಗೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಐದಾರು ಮಂದಿ ಹಿರಿಯ ತಲೆಗಳಿಗೂ ಅವಕಾಶ ಕೈತಪ್ಪಿದೆ.

Leave a Reply

Your email address will not be published. Required fields are marked *

error: Content is protected !!