ಗ್ಯಾರಂಟಿ; 200 ಯೂನಿಟ್ ವಿದ್ಯುತ್ ಫ್ರೀ, ಗೃಹ ಲಕ್ಷ್ಮೀ ಜಾರಿ; ಸಂಪೂರ್ಣ ವಿವರ ಇಲ್ಲಿದೆ

ಶೇರ್ ಮಾಡಿ

ಬೆಂಗಳೂರು: ಚುನಾವಣ ಪೂರ್ವದಲ್ಲಿ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲು ತೀರ್ಮಾನಿಸಿದ್ದು, ಎಲ್ಲ ಜಾತಿ, ಧರ್ಮದವರಿಗೆ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಶುಕ್ರವಾರ ನಡೆದ ಅತ್ಯಂತ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಾತನಾಡಿದರು. ಸಂಪುಟ ಸಚಿವರು ಈ ವೇಳೆ ಹಾಜರಿದ್ದರು.
ಮೊದಲನೆಯ ಗೃಹ ಜ್ಯೋತಿ ಯೋಜನೆಯಲ್ಲಿ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ನೀಡಲು ತೀರ್ಮಾನಿಸಿದ್ದೇವೆ. 12 ತಿಂಗಳಲ್ಲಿ ಎಷ್ಟು ವಿದ್ಯುತ್ ಉಪಯೋಗಿಸಿದ್ದಾರೆ ಅದರ ಸರಾಸರಿ ಪಡೆಯುತ್ತೇವೆ, ಎಷ್ಟು ಬಳಸಿದ್ದಾರೆ ಆ ವಿದ್ಯುತ್ ಗೆ ಇನ್ನು ಮುಂದೆ ಬಿಲ್ ಕೊಡಬೇಕಾಗಿಲ್ಲ. 12 ತಿಂಗಳ ಆಧಾರದಲ್ಲಿ ಬಿಲ್ ನೀಡಲಾಗುತ್ತದೆ. ಜುಲೈ 1 ರಿಂದ ಎಲ್ಲರಿಗೂ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಎಂದರು.

ಗೃಹ ಲಕ್ಷ್ಮೀ ಯೋಜನೆ ಫಲಾನುಭವಿ ಮನೆಯ ಯಜಮಾನಿ ಆಗಿದ್ದು ಬ್ಯಾಂಕ್ ಮತ್ತು ಆಧಾರ್ ದಾಖಲೆ ನೀಡಬೇಕಾಗುತ್ತದೆ. ಅರ್ಜಿ ಕೊಡಬೇಕು. ಜೂನ್ 15 ರಿಂದ ಜುಲೈ 15 ರ ವರೆಗೆ ಆನ್ಲೈನ್ ಅರ್ಜಿ ಸಲ್ಲಿಸಬೇಕು. ಪರಿಶೀಲನೆ ಮಾಡಿ ಆಗಸ್ಟ್ 15 ರಂದು ಖಾತೆಗೆ ಹಣ ಹಾಕುತ್ತೇವೆ. ಎಪಿಎಲ್ ಮತ್ತು ಬಿಪಿಎಲ್ ನವರಿಗೂ ಯೋಜನೆಯ ಲಾಭ ಸಿಗಲಿದೆ. ವೃದ್ದಾಪ್ಯ ವೇತನ, ಇತರ ಪಿಂಚಣಿ ಫಲಾನುಭವಿಗಳಿಗೂ ಯೋಜನೆ ಅನ್ವಯವಾಗಲಿದೆ ಎಂದು ಸಿಎಂ ಸ್ಪಷ್ಟ ಪಡಿಸಿದರು.

ಅನ್ನಭಾಗ್ಯ ಯೋಜನೆ
ಜುಲೈ 01 ರಿಂದ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡು ದಾರರಿಗೆ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು. ಈಗ ನಮ್ಮಲ್ಲಿ ಎಲ್ಲರಿಗೂ 10 ಕೆಜಿ ಕೊಡುವಷ್ಟು ದಾಸ್ತಾನು ಇಲ್ಲ ಎಂದು ಸಿಎಂ ಹೇಳಿದರು.
ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರನ್ನೊಳಗೊಂಡಂತೆ ಬಸ್ ನಲ್ಲಿ ಉಚಿತ ಪ್ರಯಾಣ ಜೂನ್ 11 ರಿಂದ ಜಾರಿ ಮಾಡುತ್ತೇವೆ. ಕರ್ನಾಟಕದೊಳಗೆ ಪ್ರಯಾಣಿಸಲು ಅನ್ವಯ. ರಾಜ್ಯದ ಒಳಗಡೆ ಎಸಿ, ರಾಜಹಂಸ ಬಸ್ ಹೊರತುಪಡಿಸಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ನಲ್ಲೂ ಫ್ರೀ ಆಗಿ ಪ್ರಯಾಣ ಮಾಡಬಹುದು. ಬೆಂಗಳೂರಿನಿಂದ ತಿರುಪತಿಯಾಗಲಿ, ಹೊರ ರಾಜ್ಯಕ್ಕಾಗಲಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು. ಕೆಎಸ್ ಆರ್ ಟಿಸಿ ಯಲ್ಲಿ ಪುರುಷರಿಗೆ 50% ಮೀಸಲಿಡುತ್ತೇವೆ, ಇದು ಬಿಎಂಟಿಸಿ ಬಸ್ ನಲ್ಲಿ ಅನ್ವಯವಾಗುವುದಿಲ್ಲ ಎಂದರು.

ಯುವನಿಧಿ ಯೋಜನೆಯಡಿ 2022-2023 ರಲ್ಲಿ ಉತ್ತೀರ್ಣರಾದ ಎಲ್ಲಾ ಪದವೀಧರ ನಿರುದ್ಯೋಗಿಗಳಿಗೆ 24 ತಿಂಗಳವರೆಗೆ 3000 ರೂಪಾಯಿ ಮತ್ತು ಡಿಪ್ಲೋಮಾ ಮಾಡಿದವರಿಗೆ 1500 ರೂಪಾಯಿ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರ ಖಾತೆಗಳಿಗೆ 15 ಲಕ್ಷ ರೂ. ಹಾಕಿದರೆ? ಅಚ್ಛೆದಿನ್ ತಂದರೆ? ರೈತರ ಆದಾಯ ದುಪ್ಪಟ್ಟು ಮಾಡಿದರೇ? 2 ಕೋಟಿ ಮಂದಿಗೆ ಉದ್ಯೋಗ ಸೃಷ್ಟಿ ಮಾಡಿದರೇ? ನಾವು ಮಾಡಿದ್ದೇವೆ ಮತ್ತು ಮಾಡುತ್ತೇವೆ ಎಂದು ಬಿಜೆಪಿ ಟೀಕೆಗಳಿಗೆ ತಿರುಗೇಟು ನೀಡಿದರು.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮಹತ್ವದ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.

ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮಹತ್ವದ ನಿರ್ಧಾರವನ್ನು ಇಂದು ಪ್ರಕಟಿಸುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Leave a Reply

error: Content is protected !!