ಕಡಬ: ಪಟ್ಟಣ ಪಂಚಾಯಿತಿನ ವಿರುದ್ಧ ನಾಗರಿಕ ಹೋರಾಟ ಸಮಿತಿ ಪ್ರತಿಭಟನೆ

ಶೇರ್ ಮಾಡಿ

ನೇಸರ ಜ.11: ಕಡಬ ಪಟ್ಟಣ ಪಂಚಾಯಿಂದ ಇಷ್ಟೊಂದು ಅನ್ಯಾಯವಾಗುತ್ತಿದ್ದರೂ,ಇಂತಹ ಜ್ವಲಂತ ಸಮಸ್ಯೆ ಇದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡಬ ಪಟ್ಟಣ ಪಂಚಾಯಿತಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸದೆ ಅನಗತ್ಯ ತೆರಿಗೆ ಏರಿಕೆ ಮಾಡಿ ಸಾರ್ವಜನಿಕರಿಗೆ ಅನ್ಯಾಯ ಎಸಗುತ್ತಿರುವ ವಿರುದ್ಧ ಇಲ್ಲಿನ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಜ.11 ಮಂಗಳವಾರ ಪ್ರತಿಭಟನೆ ನಡೆಯಿತು.
ಕಡಬ ಪೇಟೆಯಿಂದ ಮೆರವಣಿಗೆಯಲ್ಲಿ ತೆರಳಿ ಪಟ್ಟಣ ಪಂಚಾಯ್ತಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಾಗರೀಕ ಹೊರಾಟ ಸಮಿತಿಯ ಸಂಚಾಲಕ,ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ,ರಾಜ್ಯದಲ್ಲಿ ಎಲ್ಲೂ ಇಲ್ಲದ ಕಾನೂನು ಕಡಬ ಪಟ್ಟಣ ಪಂಚಾಯಿತಿಯಲ್ಲಿದೆ. ತೆರಿಗೆಯನ್ನು ಕಾನೂನು ರೀತಿಯಲ್ಲಿ ಏರಿಸದೇ ಮನಬಂದಂತೆ ಏರಿಸಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
9/11 ಮಾಡಿರುವುದನ್ನು ಈಗ ಪುನರ್‌ ರೂಪಿ (ನಮೂನೆ-3) ರಲ್ಲಿ ಮಾರ್ಪಡಿಸಿ ಹೆಚ್ಚಿನ ಮೊಬಲಗನ್ನು ವಸೂಲಿ ಮಾಡಲಾಗುತ್ತಿದೆ.ವ್ಯಾಪಾರ ಲೈಸನ್ಸ್ ನವೀಕರಣ ಮಾಡಲು ಹೆಚ್ಚಿನ ದರ ವಿಧಿಸಲಾಗುತ್ತಿದೆ.ಸ್ವಂತ ಮನೆ, ಅಂಗಡಿ ಕಟ್ಟಡ ನಿರ್ಮಾಣಕ್ಕೆ ಕಾನೂನು ಬದ್ಧವಾಗಿ ಇರುವ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ದರವನ್ನು ವಸೂಲಿ ಮಾಡಲಾಗುತ್ತಿದೆ.ಕುಡಿಯುವ ನೀರಿನ ಸೌಲಭ್ಯಕ್ಕೆ 30 ವರ್ಷಗಳ ಹಿಂದಿನ ಪೈಪ್‌ಲೈನ್, ಬೋರ್‌ವೆಲ್‌ಗಳನ್ನು ದುರಸ್ಥಿ ಮಾಡಲೇ ಇಲ್ಲ.ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ವಿದ್ಯುತ್ ದೀಪ ವಿಸ್ತರಿಸಿಲ್ಲ.ಕೋಡಿಂಬಾಳ ಗ್ರಾಮದ ಗುರಿಯಡ್ಕ, ಎಳಿಯೂರು,ದೊಡ್ಡ ಕೊಪ್ಪ,ಅಡ್ಡ ಗದ್ದೆ,ಪಾಲೋಳಿ,ಪಿಜಕ್ಕಳ,ಕಳಾರ,ಪಣೆಮಜಲು ಕಡಬದಿಂದ ದೂರವಿರುವ ಹಳ್ಳಿಗೂ ಅಲ್ಲಿಯ ಭೂಮಿಯನ್ನು ಮಾರಾಟ ಮಾಡುವುದಕ್ಕೆ ಗ್ರಾಮೀಣ ಭಾಗವಾದರೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೆಚ್ಚಿನ ದರ ವಿಧಿಸುತ್ತಾರೆ.
ಪಟ್ಟಣ ಪಂಚಾಯ್ತಿ ಗಡಿ ಗುರುತು ಮಾಡಿ ಸಮಸ್ಯೆ ಪರಿಹರಿಸಬಹುದಾದರೂ ಪಟ್ಟಣ ಪಂಚಾಯ್ತಿ ಗಮನ ಹರಿಸದೇ ಇರುವುದು ಅನ್ಯಾಯದ ಪರಮಾವಧಿಯಾಗಿದೆ.
ಕಡಬ ಪೇಟೆಯಲ್ಲಿ ರಿಕ್ಷಾ,ಕಾರು,ಪಿಕಪ್ – ಗೂಡ್ಸ್ ಬಸ್ಸುಗಳಿಗೆ ನಿಲುಗಡೆ ವ್ಯವಸ್ಥೆಯಿಲ್ಲ. ಉದ್ಯೋಗ ಖಾತರಿ ಯೋಜನೆ ಅನುಷ್ಠಾನವಾಗುತ್ತಿಲ್ಲ.ಕಡಬ ಪೇಟೆಯ ಸಾರ್ವಜನಿಕ ಶೌಚಾಲಯ ಶುಚಿತ್ವದಿಂದ ಹೊರತಾಗಿದೆ.ಪಟ್ಟಣ ಪಂಚಾಯಿತಿ ವ್ಯಾಪ್ತಿಯ 960 ಕ್ಕಿಂತಲೂ ಹೆಚ್ಚು ಅಕ್ರಮ ಸಕ್ರಮ ಕಡತಗಳು ವಿಲೇವಾರಿಯಾಗದೇ ಬಾಕಿ ಇವೆ.ಈಗಾಗಲೇ ಅರ್ಜಿ ನೀಡಿರುವ ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.ನಮ್ಮ ಮನವಿಗೆ ಸ್ಪಂದನೆ ದೊರೆಯದಿದ್ದಲ್ಲಿ ಮುಂದೆ ಕಡಬ ಪೇಟೆ ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಹೋರಾಟ ಸಮಿತಿ ಪ್ರಮುಖ ಜನಾರ್ಧನ ಗೌಡ ಪಣೆಮಜಲು ಮಾತನಾಡಿ, ಕಡಬ ಪಟ್ಟಣ ಪಂಚಾಯಿಂದ ಇಷ್ಟೊಂದು ಅನ್ಯಾಯವಾಗುತ್ತಿದ್ದರೂ,ಇಂತಹ ಜ್ವಲಂತ ಸಮಸ್ಯೆ ಇದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ತಮ್ಮ ಹಕ್ಕುಗಳನ್ನು ಕೇಳಬೇಕಾದ ಜನ ಸುಮ್ಮನಿದ್ದಾರೆ.ಎಲ್ಲೋ ಅಂಗಡಿಯಲ್ಲೋ,ಬಸ್‌ ತಂಗುದಾಣದಲ್ಲೋ ಮಾತನಾಡುವುದನ್ನು ಬಿಟ್ಟು ಪ್ರತಿಭಟನೆಯಲ್ಲಿ ಭಾಗಿಯಾಗಿ ಎಂದು ಪ್ರತಿಭಟನೆಯನ್ನು ಅಣಕಿಸುವವರಿಗೆ ಟಾಂಗ್ ನೀಡಿದರು.
ಹಿರಿಯ ಮಹಿಳೆ ಬೊಳ್ಳೆಚ್ಚಿ ಮಾತನಾಡಿ,ಅಕ್ರೋಶ ವ್ಯಕ್ತಪಡಿಸಿದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫಕೀರ ಮೂಲ್ಯ ಅವರ ಮುಖಾಂತರ ಸರಕಾರಕ್ಕೆ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಉದ್ಯಮಿ ತೋಮ್ಸನ್ ಕೆ.ಟಿ, ಚಂದ್ರಶೇಖರ ಗೌಡ ಕೋಡಿಬೈಲ್, ಶಿವರಾಮ್ ಗೌಡ ಕಲ್ಕಾಲ, ಪ್ರಮುಖರಾದ ವಿವೇಕಾನಂದ ಬೊಳ್ಳಾಜೆ, ರಮ್ಲಾ ಕಳಾರ, ಸಯ್ಯದ್ ಕಳಾರ, ಫಿಲೋಮಿನ ಸ್ಕರಿಯಾ, ಹಾರೀಸ್ ಕಳಾರ, ಉಮ್ಮರ್ ಮುಸ್ಲಿಯಾರ್ ಪನ್ಯ, ಹಿರಿಯ ಕಾಂಗ್ರೇಸ್ ಮುಖಂಡ ರಾಯ್ ಅಬ್ರಹಾಂ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!