ಗುರುವಿನ ಗುರುತರ ಹೊಣೆಗಾರಿಕೆ

ಶೇರ್ ಮಾಡಿ

ಗುರು ಎಂದರೆ ಸಂಸ್ಕೃತದಲ್ಲಿ ಕತ್ತಲೆಯನ್ನು ದೂರ ಮಾಡುವವನು ಎಂದು ಅರ್ಥ. ನಮ್ಮೊಳಗಿರುವ ಜ್ಞಾನವನ್ನು, ತಿಳಿವಳಿಕೆಯನ್ನು ಕೂಡ ಗುರು ಎನ್ನುತ್ತೇವೆ. ಈ ಅರಿವೇ ಗುರು ಎಂಬ ಅರಿವು ಬರಲು ಗುರುವಿನ ಆವಶ್ಯಕತೆ ಇದೆ. ವಿಶಾಲ ವ್ಯಾಪ್ತಿಯಲ್ಲಿ ನೋಡುವುದಾದರೆ ಗುರು ಎಂದರೆ ಆಧ್ಯಾತ್ಮಿಕ ಸಾಧನೆಗೆ ದಾರಿ ತೋರುವವ ಎಂಬ ಅರ್ಥ ಬರುತ್ತದೆ. ಈ ಅರ್ಥದ ವ್ಯಾಪ್ತಿಯನ್ನು ಕಿರಿದುಗೊಳಿಸಿದರೆ ಶಾಲಾ ಕಾಲೇಜುಗಳಲ್ಲಿ ಪಾಠ ಮಾಡುವವರು ಗುರುಗಳೇ ತಾನೆ? ಒಂದಕ್ಷರ ಕಲಿಸಿದರೂ ಆತ ಗುರು ಎನ್ನುವ ಸಂಸ್ಕೃತಿ ನಮ್ಮದು. ಆಧ್ಯಾತ್ಮಿಕ ಗುರುವಿನ ಹುಡುಕಾಟ ಬದುಕಿನಲ್ಲಿ ಒಂದು ಹಂತ ತಲುಪಿದ ಮೇಲೆ. ಆದರೆ ಮಕ್ಕಳ ಭವಿಷ್ಯ ಮತ್ತು ಅವರ ಮೂಲಕ ದೇಶದ ಭವಿಷ್ಯ ರೂಪಿಸಲು ನಮ್ಮ ಶಾಲಾ ಕಾಲೇಜುಗಳಲ್ಲಿನ ಗುರುಗಳು ತಮಗೆ ತಿಳಿಯದೆಯೇ ಮಹತ್ತರ ಪಾತ್ರ ವಹಿಸುತ್ತಾರೆ.

ಅಧ್ಯಾಪನ ವೃತ್ತಿಯನ್ನು ಕೆಲವರು ಇಷ್ಟಪಟ್ಟು ಮತ್ತೆ ಕೆಲವರು ಆಸಕ್ತಿ ಇಲ್ಲದಿದ್ದರೂ ಅದನ್ನು ಕೇವಲ ಒಂದು ಉದ್ಯೋಗವೆಂದು ಪರಿಗಣಿಸಿಯೂ ಆಯ್ಕೆ ಮಾಡುತ್ತಾರೆ. ಇಚ್ಛೆ ಇಲ್ಲದೆ ಬಂದ ಕೆಲವರು ಕ್ರಮೇಣ ಆಸಕ್ತಿಯನ್ನು ಬೆಳೆಸಿಕೊಂಡು ಉತ್ತಮ ಶಿಕ್ಷಕರಾಗಬಹುದು. ಆದರೆ ಉಳಿದ ಕೆಲವರು ಆಸಕ್ತಿಯೂ ಇಲ್ಲದೆ, ಆಸಕ್ತಿಯನ್ನು ಬೆಳೆಸಿಕೊಳ್ಳವ ಪ್ರಯತ್ನವನ್ನೂ ಮಾಡದೆ, ಕಾಟಾಚಾರಕ್ಕೆ ಈ ವೃತ್ತಿಯಲ್ಲಿ ಮುಂದುವರಿಯುತ್ತಾರೆ. ಇಂಥವರು ತುಂಬಾ ಅಪಾಯಕಾರಿಗಳು. ಕೇಳಲು ಇದು ಸಣ್ಣ ವಿಷಯವೆನಿಸಬಹುದು. ಆದರೆ ಅದರ ಪ್ರಭಾವ ಮಾತ್ರ ತುಂಬಾ ಗಾಢವಾಗಿದೆ.
ಹೆಚ್ಚು ಕಡಿಮೆ 18 ವರ್ಷ ಅಂದರೆ ದ್ವಿತೀಯ ಪಿಯುಸಿ ಮುಗಿಯುವ ತನಕ ವಿದ್ಯಾರ್ಥಿಗಳೆಲ್ಲ ಮಕ್ಕಳೆ. ಅವರ ಮೇಲೆ ಶಿಕ್ಷಕರು ಅಪಾರ ಪ್ರಭಾವ ಬೀರುತ್ತಾರೆ. ಎಷ್ಟೋ ವರ್ಷದ ಹಿಂದೆ ತಯಾರಿಸಿದ ನೋಟ್ಸ್‌ ಅನ್ನು ತರಗತಿಗೆ ತೆಗೆದುಕೊಂಡು ಬಂದು, ಯಾಂತ್ರಿಕವಾಗಿ ಕಲಿಸುವ ಅಧ್ಯಾಪಕರಿಂದ ವಿದ್ಯಾರ್ಥಿಗಳಿಗೆ ಪಾಠದ ಬಗ್ಗೆ ಆಸಕ್ತಿ ಮೂಡುವುದಾದರೂ ಹೇಗೆ? ಮಾಡುವ ಪಾಠದಲ್ಲೂ ಪದೇ ಪದೆ ತಪ್ಪುಗಳು ಕಂಡು ಬಂದರೆ ಅಂತಹ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಿಗೆ ಗೌರವ ಮೂಡಲು ಸಾಧ್ಯವೇ?, ಸಣ್ಣ ಸಣ್ಣ ತಪ್ಪಿಗೂ 10 ಸಲ ಬರೆದುಕೊಂಡು ಬನ್ನಿ ಎಂದು ಇಂಫೋಸಿಶನ್‌ ಶಿಕ್ಷೆ ವಿಧಿಸುವ ಅಧ್ಯಾಪಕರ ಮೇಲೆ ಪ್ರೀತಿ ಮೂಡಲು ಸಾಧ್ಯವೇ? ತರಗತಿಯಲ್ಲಿ ಪಕ್ಷಪಾತ ಮಾಡುವ ಶಿಕ್ಷಕರನ್ನು ವಿದ್ಯಾರ್ಥಿಗಳು ಇಷ್ಟಪಡುವರೇ? ಹಾಗೆಂದು ವಿದ್ಯಾರ್ಥಿಗಳೆಲ್ಲ ಸಂಭಾವಿತರು ಎಂದಲ್ಲ. ಇಂದಿನ ವಿದ್ಯಾರ್ಥಿಗಳು ಅತೀ ಭಯಂಕರರಾಗಿರುತ್ತಾರೆ. ಅವರನ್ನು ಸೂಕ್ಷ್ಮವಾಗಿ ನಿಭಾಯಿಸುವುದು ಒಂದು ಕಲೆ.

ಪ್ರಾಥಮಿಕ ಶಾಲೆಗಳಲ್ಲಿ ಸ್ವಲ್ಪಮಟ್ಟಿಗೆ ದಂಡನೆಯು ಬೇಕಾಗಬಹುದು. ಆದರೆ ಇದು ಕೊನೆಯ ಅಸ್ತ್ರವಾಗಿದ್ದರೆ ಒಳ್ಳೆಯದು. ಅವರ ಜತೆ ಒರಟಾಗಿ ವರ್ತಿಸಿ, ಕೇವಲ ಶಿಕ್ಷೆ ವಿಧಿಸಿ ಅವರನ್ನು ತಿದ್ದುವುದಕ್ಕಿಂತ, ಅವರ ಮನಃಪರಿವರ್ತನೆ ಮಾಡಿ ಅವರನ್ನು ಸರಿದಾರಿಗೆ ತರುವುದು ಹೆಚ್ಚು ಸೂಕ್ತ. ಇದು ಒಬ್ಬ ಉತ್ತಮ ಶಿಕ್ಷಕನಿಂದ ಆಗಬೇಕಾದದ್ದು.

ಅಧ್ಯಾಪನ ವೃತ್ತಿಯಲ್ಲಿರುವವರು ಸದಾ ಅಧ್ಯಯನ ಶೀಲರಾಗಿರಬೇಕು. ಬೆರಳ ತುದಿಯಲ್ಲಿ ಬೇಕಾದ ಮಾಹಿತಿ ಸಿಗುವ ಈ ಕಾಲದಲ್ಲಿ, ವಿದ್ಯಾರ್ಥಿಗಳಲ್ಲಿ ಮೂಡುವ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಕೊಡಲು ಶಕ್ತರಿರಬೇಕು. ಪಾಠ ಮಾಡು ವಾಗ ತಪ್ಪುಗಳಾಗದಂತೆ ತರಗತಿಗೆ ಹೋಗುವ ಮೊದಲು ಸರಿಯಾದ ತಯಾರಿ ನಡೆಸಿರಬೇಕು. ಇದು ಅವರ ಉದ್ಯೋಗಕ್ಕೆ ಅವರು ಕೊಡುವ ಗೌರವ. ಒಂದುವೇಳೆ ತಪ್ಪುಗಳಾದರೂ ಅದನ್ನು ಒಪ್ಪಿಕೊಂಡು ಮುಂದಿನ ತರಗತಿಯಲ್ಲಿ ಅದರ ಸರಿಯಾದ ವಿವರಣೆ ನೀಡಬೇಕು. ಶಾಲಾ ಪಾಠದ ಜತೆಗೆ ಮಕ್ಕಳಿಗೆ ನೀತಿ ಪಾಠವನ್ನು ಸಂದರ್ಭಕ್ಕೆ ಅನುಗುಣ ವಾಗಿ ಕಲಿಸಬೇಕು. ಶಾಲಾ ಪರೀಕ್ಷೆಗೆ ಮುಖ್ಯ ವಾದುದನ್ನು ಮಾತ್ರ ಗಣನೆಗೆ ತೆಗೆದು ಕೊಳ್ಳದೇ ಬದುಕಿನ ಪರೀಕ್ಷೆಗೆ ಬೇಕಾದ್ದನ್ನು ಕಲಿಸಬೇಕು.

ಯಾರಿಂದಲೂ ಕದಿಯಲಾಗದ ಸಂಪತ್ತು ವಿದ್ಯೆ ಎಂದು ಮಕ್ಕಳ ಮನದಲ್ಲಿ ಮೂಡುವಂತೆ ಮಾಡಬೇಕು. ವಿದ್ಯಾರ್ಥಿಗಳ ಕೌಟುಂಬಿಕ ಹಿನ್ನೆಲೆ, ಬುದ್ಧಿಮಟ್ಟ, ಮುಂತಾದವುಗಳನ್ನು ಗಮನಿಸದೇ ಎಲ್ಲ ವಿದ್ಯಾರ್ಥಿಗಳನ್ನು ಸಮಾನ ಭಾವದಿಂದ ಕಾಣಬೇಕು. ಮಕ್ಕಳು ಕೇಳಿ ತಿಳಿಯುವುದಕ್ಕಿಂತ ಹೆಚ್ಚಾಗಿ ನೋಡಿ ಕಲಿಯುತ್ತಾರೆ. ಹಾಗಾಗಿ ಶಿಕ್ಷಕರು ತಾವು ಸ್ವತಃ ಮಕ್ಕಳಿಗೆ ಆದರ್ಶ ಪ್ರಾಯರಾಗಿರಬೇಕು. ತಾವು ಪಾಠ ಮಾಡುವ ವಿಷಯದ ಮೇಲೆ ಸಂಪೂರ್ಣ ಹಿಡಿತ ಹೊಂದಿರಬೇಕು. ಮಕ್ಕಳ ಜತೆ ಆತ್ಮೀಯವಾಗಿ ಬೆರೆಯಬೇಕು. ವಿದ್ಯಾರ್ಥಿ ದೆಸೆ ಯಲ್ಲಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವುದು ಪ್ರತಿಯೊಬ್ಬ ಗುರುವಿನ ಕರ್ತವ್ಯ.

ಈಗಿನ ಶಿಕ್ಷಣ ಪದ್ಧತಿಯಲ್ಲಿ ಪಾಠ ಮಾಡುವುದರ ಜತೆಜತೆಗೆ ಇರುವ ಅಸಂಖ್ಯಾತ ಇತರ ಜವಾಬ್ದಾರಿ ಗಳಿಂದ ಅಧ್ಯಾಪಕ ಹೈರಾಣಾಗಿರುವುದು ನಿಜ. ಆದರೂ ಸಿಕ್ಕ ಸಮಯದಲ್ಲಿ ಆದರ್ಶ ವಿದ್ಯಾರ್ಥಿ ಗಳನ್ನು ರೂಪಿಸುವಲ್ಲಿ ಪ್ರಯತ್ನಿಸುವುದು ಪ್ರತಿ ಯೊಬ್ಬ ಶಿಕ್ಷಕನ ಜವಾಬ್ದಾರಿ. ಹಾಗೆಯೇ ಒಬ್ಬ ಆದರ್ಶ ಶಿಕ್ಷಕ ಮಕ್ಕಳ ಜತೆ ಸ್ವಲ್ಪ ಅಂತರ ಕಾಪಾಡಿ ಕೊಳ್ಳಬೇಕಾಗುತ್ತದೆ. ಪ್ರತಿಯೊಂದು ವೃತ್ತಿಗೂ ಅದರದೇ ಆದ ಘನತೆ ಇರುತ್ತದೆ. Once a teacher always a teacher. ಹಾಗಾಗಿ ಇಷ್ಟಪಟ್ಟೋ, ಕಷ್ಟಪಟ್ಟೋ ಒಮ್ಮೆ ಒಂದು ವೃತ್ತಿಯನ್ನು ಆರಿಸಿದ ಅನಂತರ ಅದಕ್ಕೆ ನ್ಯಾಯ ಒದಗಿಸಲೇಬೇಕು. ಅದರಲ್ಲೂ ಶಿಕ್ಷಕ ವೃತ್ತಿಯ ಜವಾಬ್ದಾರಿ ಒಂದು ತೂಕ ಹೆಚ್ಚೆ. ಶಿಕ್ಷಕರು ಶಾಲೆಯ ಒಳಗೂ ಹೊರಗೂ ತಮ್ಮ ನಡತೆಯಲ್ಲಿ ಒಂದು ಘನತೆಯನ್ನು ಕಾಪಾ ಡಿಕೊಳ್ಳಬೇಕಾಗುತ್ತದೆ.

ದೇಶದ ಮುಂದಿನ ಭವಿಷ್ಯವಾದ ಒಂದು ಪೀಳಿಗೆಯು ತಯಾರಾಗುವುದು ಈ ಶಾಲಾ ಕಾಲೇಜುಗಳಲ್ಲಿ. ಅಲ್ಲಿಯೇ ಅವರಿಗೆ ಬೇಕಾದ ಸತ್ವ ದೊರಕಿದರೆ, ಮುಂದೆ ಅವರು ಒಂದು ಉತ್ತಮ ನಾಡು ಕಟ್ಟುವುದರಲ್ಲಿ ಸಂಶಯವಿಲ್ಲ. ದೇಶದಲ್ಲಿ ಒಂದು ಆದರ್ಶ ಶಿಕ್ಷಕ ವೃಂದ ತಯಾರಾಗಲಿ ಮತ್ತು ಅವರಿಂದ ಒಂದು ಸದೃಢ ಯುವ ಪೀಳಿಗೆಯ ನಿರ್ಮಾಣವಾಗಲಿ ಎಂದು ಹಾರೈಸೋಣ.

ಅಪಾರ ಗೌರವ
ಗುರು ಅಥವಾ ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಅಪಾರವಾದ ಗೌರವವಿದೆ. ಕಾಲಚಕ್ರ ಉರುಳಿದಂತೆ ಶಿಕ್ಷಕ ವೃತ್ತಿ ಎನ್ನುವುದು ಇತರ ವೃತ್ತಿಗಳಂತಾಗಿ ಕೇವಲ ವೇತನ ಪಡೆಯಲೋಸುಗ ಒಂದು ಉದ್ಯೋಗ ಎಂದು ಪರಿಭಾವಿಸಲ್ಪಟ್ಟಿರಬಹುದು. ಆದರೆ ಇಂದಿಗೂ ಸಮಾಜದಲ್ಲಿ ಶಿಕ್ಷಕ ಎಂದರೆ ಪ್ರತಿಯೋರ್ವನಿಗೂ ಒಂದು ಅವ್ಯಕ್ತ ಭಯ, ಪ್ರೀತಿ, ಗೌರವ ಇದ್ದೇ ಇರುತ್ತದೆ. ಆದರೆ ಈ ಹಿಂದಿನಂತೆ ಆತ ಶಿಕ್ಷಕರ ಮೇಲಣ ತನ್ನ ಈ ಎಲ್ಲ ಭಾವನೆಗಳನ್ನು ಸಮಾಜದ ಮುಂದೆ ತೋರ್ಪಡಿಸಲಾರ. ಹಾಗೆಂದು ಆತನಿಗೆ ಶಿಕ್ಷಕರ ಮೇಲೆ ಆದರಾಭಿಮಾನ ಇಲ್ಲ ಎಂದಲ್ಲ.

ಅದರಲ್ಲೂ ಪ್ರಾಥಮಿಕ ಹಂತದಲ್ಲಿ ಕಲಿಸಿದ ಶಿಕ್ಷಕರೆಂದರೆ ಅವರ ಮೇಲೆ ಒಂದಿಷ್ಟು ಹೆಚ್ಚೇ ಗೌರವವಿರುತ್ತದೆ. ಎಳೆಯ ಮಕ್ಕಳ ಪುಂಡಾಟಗಳನ್ನೆಲ್ಲ ಸಹಿಸಿಕೊಂಡು ಅವರನ್ನು ತಿದ್ದಿತೀಡಿ, ವಿದ್ಯಾರ್ಜನೆಯ ಹಸಿವುಳ್ಳ ಓರ್ವ ವಿದ್ಯಾರ್ಥಿಯನ್ನು ರೂಪಿಸುವ ಹೊಣೆಗಾರಿಕೆ ಪ್ರಾಥಮಿಕ ಶಾಲಾ ಶಿಕ್ಷಕರದ್ದಾಗಿದ್ದರೆ ದೇಶದ ಭವಿಷ್ಯದ ಪೀಳಿಗೆಯನ್ನು ರೂಪಿಸುವ ಗುರುತರ ಜವಾಬ್ದಾರಿ ಪ್ರೌಢ ಮತ್ತು ಕಾಲೇಜು ಶಿಕ್ಷಕರದ್ದಾಗಿದೆ. ಹೀಗಾಗಿ ವಿದ್ಯಾರ್ಥಿಯ ಪ್ರತಿಯೊಂದೂ ಶೈಕ್ಷಣಿಕ ಹಂತದಲ್ಲೂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಎಲ್ಲ ಅಡೆತಡೆಗಳ ನಡುವೆ ತಮ್ಮ ಈ ಹೊಣೆಗಾರಿಕೆಯನ್ನು ಅರಿತುಕೊಂಡು ಶಿಕ್ಷಕರು ಕಾರ್ಯನಿರ್ವಹಿಸಿದಾಗ ಸಹಜವಾಗಿಯೇ ಸಮಾಜದಲ್ಲಿ ಅವರಿಗೆ ಹೆಚ್ಚಿನ ಗೌರವ ಸಿಗುತ್ತದೆ.

Leave a Reply

error: Content is protected !!