![](https://i0.wp.com/nesaranewsworld.com/wp-content/uploads/2023/07/images.jpeg?resize=630%2C353&ssl=1)
ಲೋಕಸಭೆ ಮತ್ತು ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಭಾರತೀಯ ಜನತಾ ಪಕ್ಷವು ಆಡಳಿತಾತ್ಮಕ ಬದಲಾವಣೆ ಮಾಡಿದೆ. ಪಕ್ಷವು ಇಂದು ಕೇಂದ್ರ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕರ್ನಾಟಕದ ಸಿ.ಟಿ ರವಿ ಅವರಿಗೆ ಕೊಕ್ ನೀಡಿದೆ.
ತೆಲಂಗಾಣದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಬಂಡಿ ಸಂಜಯ್ ಅವರನ್ನು ಇತ್ತೀಚೆಗೆ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಲಾಗಿತ್ತು.
ಇತರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೆಂದರೆ ಅರುಣ್ ಸಿಂಗ್, ಕೈಲಾಶ್ ವಿಜಯ್ ವರ್ಗೀಯ, ದುಷ್ಯಂತ ಕುಮಾರ್ ಗೌತಮ್, ತರುಣ್ ಚುಗ್, ವಿನೋದ್ ತಾವ್ಡೆ, ಸುನಿಲ್ ಬನ್ಸಲ್, ರಾಧಾಮೋಹನ್ ಅಗರ್ವಾಲ್.
ಬಿ.ಎಲ್ ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಶಿವ ಪ್ರಕಾಶ್ ಅವರನ್ನು ಮುಂದುವರಿಸಲಾಗಿದೆ.
ಸಿ.ಟಿ ರವಿಗೆ ರಾಜ್ಯಾಧ್ಯಕ್ಷ ಹುದ್ದೆ:
ಕೇಂದ್ರೀಯ ಪದಾಧಿಕಾರಿ ಹುದ್ದೆಯಿಂದ ರವಿ ಅವರನ್ನು ಕೆಳಗಿಳಿಸಿದ ಹಿಂದೆ ರಾಜ್ಯಾಧ್ಯಕ್ಷ ಹುದ್ದೆ ಕೊಡುವ ಇರಾದೆ ಎನ್ನಲಾಗಿದೆ. ಕಳೆದೆರಡು ತಿಂಗಳಿನಿಂದ ಚರ್ಚೆಯ ವಿಷಯವಾಗಿರುವ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಹುದ್ದೆ ಸಮಸ್ಯೆ ಸದ್ಯದಲ್ಲೇ ಬಗೆಹರಿಯುವ ಲಕ್ಷಣ ಗೋಚರಿಸುತ್ತಿದೆ.
ಸದ್ಯದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧಿಕೃತ ಅವಧಿ ಕಳೆದ ಸಪ್ಟೆಂಬರ್ ಗೆ ಅಂತ್ಯವಾಗಿದೆ. ಆದರೆ ಚುನಾವಣೆಯ ಹಿನ್ನೆಲೆಯಲ್ಲಿ ಅವರನ್ನೇ ಮುಂದುವರಿಸಲಾಗಿತ್ತು. ಇದೀಗ ಇದು ಚಿಕ್ಕಮಗಳೂರಿನ ಮಾಜಿ ಶಾಸಕರಿಗೆ ಒಲಿಯುವ ಸಾಧ್ಯತೆ ದಟ್ಟವಾಗಿದೆ.
![](https://i0.wp.com/nesaranewsworld.com/wp-content/uploads/2023/07/WhatsApp-Image-2023-06-20-at-6.14.07-PM-4.jpeg?resize=577%2C816&ssl=1)
![](https://i0.wp.com/nesaranewsworld.com/wp-content/uploads/2023/07/WhatsApp-Image-2023-07-25-at-14.10.35-2.jpg?resize=576%2C718&ssl=1)