ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು

ಶೇರ್ ಮಾಡಿ

ಮಂಗಳೂರು : ಹಳ್ಳದ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ರವಿವಾರ ಸಂಜೆ ನಗರದ ಪಡೀಲ್ ಅಳಪೆ ಪಡ್ಪು ರೈಲ್ವೇ ಬ್ರಿಡ್ಜ್ ಸಮೀಪ ನಡೆದಿರುವುದು ವರದಿಯಾಗಿದೆ.

ಅಳಪೆ ಪಡ್ಪುರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಎಚ್‌ಬಿ ಕಾಲನಿ ನಿವಾಸಿ ವೀಕ್ಷಿತ್ (28) ಮೃತಪಟ್ಟ ಯುವಕರು.

ವರುಣ್ ವೃತ್ತಿಯಲ್ಲಿ ಚಾಲಕನಾಗಿದ್ದರೆ, ದೀಕ್ಷಿತ್ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ರವಿವಾರ ಸಂಜೆ 5 ಗಂಟೆಯ ವೇಳೆ 6 ಮಂದಿ ಗೆಳೆಯರು ಒಟ್ಟಾಗಿ ಕ್ರಿಕೆಟ್ ಆಡಲು ತೆರಳಿದ್ದರು. ಈ ಸಂದರ್ಭ ವರುಣ್ ಮತ್ತು ವೀಕ್ಷಿತ್ ರೈಲ್ವೆಯ ಟ್ರಾಕ್ ಪಕ್ಕದ ಹಳ್ಳದ ದಡದಲ್ಲೇ ಕುಳಿತಿದ್ದರು. ಉಳಿದವರು ಕ್ರಿಕೆಟ್ ಮೈದಾನಕ್ಕೆ ತೆರಳಿದ್ದರು. ಇವರಿಬ್ಬರನ್ನೂ ಆಟಕ್ಕೆ ಬರುವಂತೆ ಒತ್ತಾಯಿಸಿದರೂ ಅವರು ಹೋಗಲಿಲ್ಲ ಎಂದು ತಿಳಿದುಬಂದಿದೆ. ಹಳ್ಳದ ದಡದಲ್ಲಿ ಕುಳಿತಿದ್ದ ಸಂದರ್ಭ ವರುಣ್ ನೀರಿಗೆ ಬಿದ್ದಿದ್ದು, ಇದನ್ನು ನೋಡಿದ ವೀಕ್ಷಿತ್ ಕೂಡಲೇ ಹಳ್ಳಕ್ಕೆ ಅವರನ್ನು ರಕ್ಷಿಸಲು ಧುಮಿಕಿದರು. ಆದರೆ ಹಳ್ಳದಲ್ಲಿ ಹೂಳು ತುಂಬಿದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣದಲ್ಲಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳದವರು ಬಂದು ಕಾರ್ಯಾಚರಣೆ ನಡೆಸಿದರು.

Leave a Reply

error: Content is protected !!