ದ.ಕ.: ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಶೇರ್ ಮಾಡಿ

ದಕ್ಷಿಣ ಕನ್ನಡ ಸಹಿತ ರಾಜ್ಯದ 22 ಜಿಲ್ಲೆಗಳಿಗೆ ಅನ್ವಯಿಸುವಂತೆ ರೈತರ ಬೆಳೆ ವಿಮೆ ನೋಂದಣಿ ಅವಧಿಯನ್ನು ಕೇಂದ್ರ ಸರಕಾರ ಆಗಸ್ಟ್‌ 7ರ ತನಕ ವಿಸ್ತರಿಸಿದೆ.

ಬೆಳೆ ವಿಮೆ ನೋಂದಣಿಗೆ ಈ ಮೊದಲು ಜುಲೈ 31ರ ತನಕ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ರಾಜ್ಯದ ರೈತರು ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ 22 ಜಿಲ್ಲೆಗಳ ನೋಂದಣಿ ಅವಧಿಯನ್ನು ಒಂದು ವಾರದ ಮಟ್ಟಿಗೆ ವಿಸ್ತರಿಸಲಾಗಿದೆ.

ದಕ್ಷಿಣ ಕನ್ನಡ, ಗದಗ, ವಿಜಯನಗರ, ಬೆಂಗಳೂರು ನಗರ, ಶಿವಮೊಗ್ಗ, ಕೊಪ್ಪಳ, ಬಾಗಲಕೋಟೆ, ಯಾದಗಿರಿ, ಬಳ್ಳಾರಿ, ಉತ್ತರ ಕನ್ನಡ, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಮೈಸೂರು, ರಾಯಚೂರು, ಕಲಬುರಗಿ, ಬೀದರ್‌, ಕೊಡಗು, ಚಿಕ್ಕಬಳ್ಳಾಪುರ, ಬೆಳಗಾವಿ ಮತ್ತು ಹಾವೇರಿಯ ಜಿಲ್ಲೆಗಳಿಗೆ ಈ ವಿನಾಯಿತಿ ಅನ್ವಯವಾಗಲಿದೆ.

ಬೆಳೆ ವಿಮೆ ನೋಂದಣಿಗೆ ಕಡಿಮೆ ಸಮಯ ಸಿಕ್ಕಿದ್ದು, ರೈತರ ನೋಂದಣಿ ಪ್ರಮಾಣ ಕಡಿಮೆ ಇದ್ದಿದ್ದು, ಇಫ್ಕೋ ಟೊಕಿಯೋ ಹೊರತುಪಡಿಸಿ ಉಳಿದ ವಿಮೆ ಕಂಪೆನಿಗಳು ಸಮಯ ವಿಸ್ತರಣೆಗೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.

Leave a Reply

error: Content is protected !!