ಪುತ್ತೂರು: “ನೀನೊಂದು ಮುಗಿಯದ ಕವಿತೆ” ಕವನ ಸಂಕಲನ ಬಿಡುಗಡೆ ಮತ್ತು ಮುಗಿಯದ ಕವಿತೆಗೆ ಮನದ ಕವಿತೆ,ಕವಿಗೋಷ್ಠಿ

ಶೇರ್ ಮಾಡಿ

ಪುತ್ತೂರು:ಕಾವ್ಯ ಪರಂಪರೆ ಓದುಗರಿಗೆ ಹೊಸತನವನ್ನು ನೀಡುತ್ತದೆ. ಅನಾದಿ ಕಾಲದ ಜನರ ಸಂವಹನವೇ ಕಾವ್ಯ ಎಂದು ಹಿರಿಯ ಪತ್ರಕರ್ತರು, ವಾಗ್ಮಿ ಹಾಗೂ ಸಾಹಿತಿಗಳಾದ ಮನೋಹರ ಪ್ರಸಾದ್ ಹೇಳಿದರು.
ಅವರು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ಘಟಕ, ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗ ಹಾಗೂ ಸುದಾನ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸುದಾನ ವಿದ್ಯಾಸಂಸ್ಥೆಗಳ ಎಡ್ವರ್ಡ್ ಸಭಾಂಗಣದಲ್ಲಿ ಶ್ರೀಮತಿ ಶಶಿಕಲಾ ವರ್ಕಾಡಿಯವರ ನೀನೊಂದು ಮುಗಿಯದ ಕವಿತೆ ಕವನ ಸಂಕಲನ ಬಿಡುಗಡೆಗೊಳಿಸಿ ಕೃತಿ ಪರಿಚಯ ಮಾಡಿ ಮಾತನಾಡುತ್ತಿದ್ದರು.
ಕಾವ್ಯದ ಭಾಷೆ ಓದುಗರ ಮುಟ್ಟುವಂತಿರಬೇಕು. ಯಾವತ್ತೂ ನಡೆಯುವವನೇ ಎಡವುವುದಲ್ಲದೇ ಮಲಗಿದವನು ಎಡವುದಿಲ್ಲ ಎಂದು ನುಡಿದು, ಕೊನೆ ಎಂಬುದು ಆರಂಭದ ಹೆಜ್ಜೆಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಹಿರಿಯ ಸಾಹಿತಿಗಳು ಮತ್ತು ವಿವೇಕಾನಂದ ಮಹಾ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ.ಹೆಚ್.ಜಿ.ಶ್ರೀಧರ್ ಅವರು ಕಾವ್ಯದ ಶೈಲಿ ಬಗೆದಷ್ಟೂ ಆಳ. ಅದು ಎಂದಿಗೂ ಮುಗಿಯದ ಹರಿವು. ಜಗತ್ತಿಗೆ ಎಲ್ಲಾ ವಿಚಾರಗಳನ್ನು ಹೊಸತಾಗಿ ಕೊಡುವವನೇ ಕವಿ ಎಂದು ಹೇಳಿದರು. ಖ್ಯಾತ ನ್ಯಾಯವಾದಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ದುರ್ಗಾಪ್ರಸಾದ್ ರೈ ಕೃತಿಕಾರರ ಪರಿಚಯ ನೀಡಿದರು. ಮಾಜಿ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ, ಸುದಾನ ಶಾಲಾ ಸಂಚಾಲಕರಾದ ವಿಜಯ ಹಾರ್ವಿನ್, ದ.ಕ.ಜಿಲ್ಲಾ ಕ.ಸಾ.ಪ. ಗೌರವ ಕೋಶಾಧ್ಯಕ್ಷರಾದ ಐತ್ತಪ್ಪ ನಾಯ್ಕ್ ಕಾರ್ಯಕ್ರಮಕ್ಕೆ ಆಗಮಿಸಿ, ಉಪಸ್ಥಿತರಿದ್ದು ಶುಭ ನುಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಮನೋಹರ ಪ್ರಸಾದ್ ಹಾಗೂ ಕವನ ಸಂಕಲನದ ಮುಖಪುಟ ವಿನ್ಯಾಸಕಾರ ಜಾನ್ ಚಂದ್ರನ್ ಇವರನ್ನು ವಿಶೇಷವಾಗಿ ಗೌರವಿಸಲಾಯಿತು. ಚಿಗುರೆಲೆ ಸಾಹಿತ್ಯ ಬಳಗದ ಕುಮಾರಿ ಅಪೂರ್ವ ಕಾರಂತ್ ಪ್ರಾರ್ಥಿಸಿದರು. ನೀನೊಂದು ಮುಗಿಯದ ಕವಿತೆಯ ಕೃತಿಕಾರರಾದ ಶ್ರೀಮತಿ ಶಶಿಕಲಾ ವರ್ಕಾಡಿ ಸ್ವಾಗತಿಸಿ, ಚಿಗುರೆಲೆ ಸಾಹಿತ್ಯ ಬಳಗದ ಶ್ರೀಮತಿ ಸೌಮ್ಯ ರಾವ್ ಕಲ್ಲಡ್ಕ ವಂದಿಸಿದರು. ಯುವಸಾಹಿತಿ, ಕುಂಡಡ್ಕ ಗುಣಶ್ರೀ ವಿದ್ಯಾಲಯದ ಮುಖ್ಯಗುರುಗಳಾದ ರಾಜಾರಾಮ ವರ್ಮ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಕವನ ಸಂಕಲನ ಬಿಡುಗಡೆ ಬಳಿಕ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ನಾರಾಯಣ ಕುಂಬ್ರ ಇವರ ಸಂಯೋಜನೆಯಲ್ಲಿ ದಕ್ಷಿಣ ಕನ್ನಡ, ಬೆಂಗಳೂರು, ಕಾಸರಗೋಡು ಪರಿಸರದ ಸುಮಾರು ಮಂದಿ ಯುವಕವಿಗಳಿಂದ “ಮುಗಿಯದ ಕವಿತೆಗೆ ಮನದ ಕವಿತೆ” ಎಂಬ ಕವಿಗೋಷ್ಠಿ ನಡೆಯಿತು. ಶಿಕ್ಷಕಿ ಹಾಗೂ ಖ್ಯಾತ ಸಾಹಿತಿಗಳಾದ ಶ್ರೀಮತಿ ವಿಜಯಲಕ್ಷ್ಮಿ ಕಟೀಲು ಕವಿಗೋಷ್ಠಿಯ ಸರ್ವಾಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಶ್ರೀಮತಿ ಜೆಸ್ಸಿ. ಪಿ.ವಿ ಮತ್ತು ಶ್ರೀಮತಿ ಸುಪ್ರೀತಾ ಚರಣ್ ಪಾಲಪ್ಪೆ ಕವಿಗೋಷ್ಠಿಯ ನಿರೂಪಣೆಗೈದರು.

Leave a Reply

error: Content is protected !!