ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಮುಸ್ಲಿಂಮರ ವ್ಯಾಪಾರ ನಿಷೇಧ ವಿವಾದದ ಬೆನ್ನಲ್ಲೇ ಮತ್ತೆ ಬಹಿರಂಗ ಹರಾಜು ಪ್ರಕ್ರಿಯೆ ಆರಂಭ

ಶೇರ್ ಮಾಡಿ

ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಮುಸ್ಲಿಂಮರ ವ್ಯಾಪಾರ ನಿಷೇಧ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಭಾರೀ ವಿವಾದದ ಬೆನ್ನಲ್ಲೇ ಮತ್ತೆ ಬಹಿರಂಗ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಮುಸ್ಲಿಂ ವ್ಯಾಪಾರಿಗಳು ಭಾಗವಹಿಸಿದ್ದಾರೆ. ಹೌದು, ಮಂಗಳಾದೇವಿ ದೇವಸ್ಥಾನದ ರಥಬೀದಿಯಲ್ಲಿ ಸ್ಟಾಲ್ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಒಟ್ಟು 97 ಸ್ಟಾಲ್ ಗಳ ಪೈಕಿ ಸದ್ಯ 60 ಸ್ಟಾಲ್ ಗಳ ಹರಾಜು ಪ್ರಕ್ರಿಯೆ ಆಗಿದೆ. ಉಳಿದ 37 ಸ್ಟಾಲ್ ಗಳ ಹರಾಜು ಪ್ರಕ್ರಿಯೆ ನಡೆಸಲು ದೇವಸ್ಥಾನದ ಆಡಳಿತಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸೂಚನೆ ನೀಡಿತ್ತು.

ಪೊಲೀಸ್ ಭದ್ರತೆಯೊಂದಿಗೆ ನಡೆಯುತ್ತಿರುವ ಹರಾಜು ಪ್ರಕ್ರಿಯೆ
ಹೌದು, ಮುಸ್ಲಿಂಮರ ವ್ಯಾಪಾರ ನಿಷೇಧ ವಿಚಾರ ವಿವಾದ ಭುಗಿಲೆದ್ದ ಬೆನ್ನಲ್ಲೇ ಕೊನೆಗೂ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಅಪರ ಜಿಲ್ಲಾಧಿಕಾರಿ ಜಿ.ಸಂತೋಷ್ ಕುಮಾರ್ ನೇತೃತ್ವದಲ್ಲಿ ನಿನ್ನೆ(ಅ.13) ಸಂಜೆ ಸಭೆ ಮಾಡಿದ ಬಳಿಕ ಅಂತಿಮ ನಿರ್ಧಾರ ಕೈಗೊಂಡು, ಎಲ್ಲಾ ಧರ್ಮದ ವ್ಯಾಪಾರಿಗಳನ್ನು ಸೇರಿಸಿ ಹರಾಜು ಪ್ರಕ್ರಿಯೆ ನಡೆಸಲು ಸೂಚನೆ ನೀಡಲಾಗಿತ್ತು. ಅದರಂತೆ ಹರಾಜು ಪ್ರಕ್ರಿಯೆ ಪೊಲೀಸ್ ಭದ್ರತೆಯೊಂದಿಗೆ ನಡೆಯುತ್ತಿದ್ದು, ಬೆರಳೆಣಿಕೆಯ ವ್ಯಾಪಾರಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಸ್ಟಾಲ್ ನಂಬರ್ 65 ಮತ್ತು 66ರನ್ನು ಅಬ್ದುಲ್ ಖಾದರ್ ಎಂಬುವವರು ಹರಾಜಿನಲ್ಲಿ ಪಡೆದಿದ್ದಾರೆ.

ಕೋಮು ಸೂಕ್ಷ್ಮ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಹಿಂದೂ ದೇವಾಲಯಗಳ ಜಾತ್ರಾ ಮಹೋತ್ಸವಕ್ಕೆ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧಿಸಲಾಗಿತ್ತು. ಈ ಕುರಿತು ದಕ್ಷಿಣ ಕನ್ನಡ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯು ಮಂಗಳಾದೇವಿ ದೇವಸ್ಥಾನದ ನವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧಿಸಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿತ್ತು. ಮುಜುರಾಯಿ ಇಲಾಖೆ ವ್ಯಾಪ್ತಿಗೆ ಬರುವ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವವು ಅಕ್ಟೋಬರ್ 15 ರಿಂದ 24 ರ ವರೆಗೆ ನಡೆಯಲಿದೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿಯುವ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ನಿರಾಕರಿಸಿತ್ತು. ನಿನ್ನೆ ವಿವಾದದ ಬಳಿಕ ಅವಕಾಶ ನೀಡಲಾಗಿದೆ.

Leave a Reply

error: Content is protected !!