ಮುಸ್ಲಿಂ ಸ್ನೇಹಿತನ ಆರೋಗ್ಯ ಸುಧಾರಣೆಗೆ ಧರ್ಮಸ್ಥಳದಲ್ಲಿ ತುಲಾಭಾರ ಮಾಡಿಸಿದ ಹಿಂದೂ ವ್ಯಕ್ತಿ

ಶೇರ್ ಮಾಡಿ

ಅನಾರೋಗ್ಯಕ್ಕೀಡಾದ ಮುಸ್ಲಿಂ ಸಮುದಾಯಕ್ಕೆ ಸೇರಿದ ಪ್ರಾಣ ಸ್ನೇಹಿತನ ಆರೋಗ್ಯ ಸುಧಾರಣೆಗೆ ಹಿಂದೂ ವ್ಯಕ್ತಿಯೊಬ್ಬರು ಧರ್ಮಸ್ಥಳದ ಮಂಜುನಾಥ ದೇವಾಲಯದಲ್ಲಿ ತುಲಾಭಾರ ಮಾಡಿಸಿದ ಅಪರೂಪದ ಘಟನೆ ನಡೆದಿದೆ.

ಅನಿಸ್ ಪಾಷ ಹಾಗೂ ಅರುಣ್ ಕುಮಾರ್ ಇಬ್ಬರು ಹಲವು ವರ್ಷಗಳಿಂದ ಪ್ರಾಣ ಸ್ನೇಹಿತರು. ದಾವಣಗೆರೆ ನಗರದಲ್ಲಿ ವಕೀಲ ವೃತ್ತಿ ಮಾಡುತ್ತಿರುವ ಅನಿಸ್ ಪಾಷ ಅರುಣ್ ಅವರಿಗೆ ಸಂಬಂಧಿಸಿದ ಕೇಸ್ ವೊಂದನ್ನು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿ ಗೆದ್ದು ಬೀಗಿದ್ದರು. ದುರಂತ ಎಂದರೆ ಕೋವಿಡ್ ವೇಳೆ ಅನಿಸ್ ಪಾಷ ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿದ್ದರು. ಇದರಿಂದ ಚಿಂತಿತರಾದ ಸ್ನೇಹಿತ ಅರುಣ್ ಕುಮಾರ್ ಪ್ರಾಣ ಸ್ನೇಹಿತ ಬಹುಬೇಗ ಗುಣಮುಖರಾಗಲಿ ಎಂದು ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿ, ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ತುಲಾಭಾರದ ಹರಕೆ ಹೊತ್ತಿದ್ದರು.

ಇದೀಗ ಪ್ರಾಣಸ್ನೇಹಿತ ಅನಿಸ್ ಪಾಷಾ ಗುಣಮುಖರಾಗಿದ್ದು, ಇದರ ಬೆನ್ನಲ್ಲೇ ಅರುಣ್ ಕುಮಾರ್ ಅನಿಸ್ ಪಾಷ ಅವರನ್ನು ಮೊದಲಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಕರೆದೊಯ್ದು ದರ್ಶನ ಮಾಡಿಸಿ, ಕಾಣಿಕೆ ಸಲ್ಲಿಸಿ, ಹರಕೆ ತೀರಿಸಿದ್ದಾರೆ. ಬಳಿಕ ಧರ್ಮಸ್ಥಳಕ್ಕೆ ಕರೆದೊಯ್ದು ಮಂಜುನಾಥನ ಸನ್ನಿಧಿಯಲ್ಲಿ ಅಭಿಷೇಕ ನಡೆಸಿ ಬಳಿಕ ಅಕ್ಕಿ, ಬೆಲ್ಲ, ಕೊಬ್ಬರಿ ಮೂಲಕ ತುಲಾಭಾರ ಮಾಡಿಸಿ ಹರಕೆ ತೀರಿಸಿದ್ದಾರೆ. ಈ ಘಟನೆ ಕೋಮು ಸೌಹಾರ್ದಕ್ಕೆ ಮಾದರಿಯಾಗಿದೆ.

ನಿಮ್ಮ ಧರ್ಮವನ್ನು ಪ್ರೀತಿಸಿ ಬೇರೊಬ್ಬರ ಧರ್ಮವನ್ನು ಗೌರವಿಸಿ ಎಂದು ನಮ್ಮ ಇಸ್ಲಾಂ ಧರ್ಮ ಹೇಳುತ್ತದೆ. ಇದಲ್ಲದೆ ಅನಾಥ ಮಕ್ಕಳ ಮುಂದೆ ತಮ್ಮ ಮಕ್ಕಳನ್ನು ಮುದ್ದಾಡಬೇಡಿ ಎಂದು ಪ್ರವಾದಿಯವರು ಹೇಳುತ್ತರೆ. ಅದರಂತೆ ನನ್ನ ಧರ್ಮ, ಆಚರಣೆಗಳು ಬೇರೆಯಾದರೂ ಅರುಣ್ ಅವರ ಧಾರ್ಮಿಕ ನಂಬಿಕೆಗಳಿಗೆ ಯಾವುದೇ ಧಕ್ಕೆಯಾಗದಂತೆ ಹರಕೆ ನೆರವೇರಿಸಿದ್ದೇನೆ. ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ವಚನ, ಇನ್ನೊಬ್ಬರ ಭಾವನೆಗಳಿಗೆ ಧಕ್ಕೆಯಾಗದಂತೆ ಬದುಕುವುದೇ ನಿಜವಾದ ಧರ್ಮ ಎಂಬ ಖುರಾನ್ ಸಾಲುಗಳಂತೆ ನಾವು ಎಲ್ಲರೊಳಗೆ ಒಂದಾಗಿ ಬದುಕುತ್ತಿದ್ದೇವೆ ಎಂದು ಅನಿಸ್ ಪಾಷಾ ವಿವರಿಸಿದರು.

ಮೊದಲಿಗೆ ಅರುಣ್ ಕುಮಾರ್ ನನ್ನ ಕಕ್ಷಿದಾರ. ಬಳಿಕ ಅವನು ಕುಟುಂಬದ ಸ್ನೇಹಿತನಂತೆ ಇದ್ದಾನೆ. ಈ ವಕೀಲ ವೃತ್ತಿಯಲ್ಲಿ ಸಾಕಷ್ಟು ಕಕ್ಷಿದಾರರನ್ನು ಕಂಡಿದ್ದೇನೆ. ಆದರೆ ಪ್ರಕರಣವೊಂದರಿಂದ ಪರಿಚಿತರಾದ ಅರುಣ್ ಕುಮಾರ್ ತುಂಬಾ ಹತ್ತಿರವಾದರು. 2021ರಲ್ಲಿ ನನಗೆ ಎದೆ ನೋವು ಕಾಣಿಸಿಕೊಂಡು ರಕ್ತನಾಳ ಎರಡು ಕಡೆ ಬ್ಲಾಕ್ ಆಗಿದ್ದು ಸ್ಟಂಟ್ ಅಳವಡಿಸಿದ್ದರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಈ ಸಂದರ್ಭ ಗೆಳೆಯ ಅರುಣ್ ನನ್ನ ಆರೋಗ್ಯ ಸುಧಾರಣೆಗಾಗಿ ಹರಕೆ ಹೊತ್ತಿದ್ದರು. ಇತ್ತೀಚೆಗೆ ಧರ್ಮಸ್ಥಳಕ್ಕೆ ಒಟ್ಟಿಗೆ ತೆರಳಿ ಹರಕೆ ತೀರಿಸಿದ್ದಾರೆ ಎಂದು ಅನಿಸ್ ಪಾಷ ಮಾಹಿತಿ ನೀಡಿದರು.

Leave a Reply

error: Content is protected !!