ಹುಲಿ ಉಗುರು: ದರ್ಶನ್​ ವಿರುದ್ಧ ದೂರು ನೀಡಿದವರಿಗೆ ಅಭಿಮಾನಿಗಳಿಂದ ಕೊಲೆ ಬೆದರಿಕೆ

ಶೇರ್ ಮಾಡಿ

ನಟ ದರ್ಶನ್​ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಹುಲಿ ಉಗುರು ಲಾಕೆಟ್​ ಧರಿಸಿದ ಆರೋಪ ಅವರ ಮೇಲಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿಇರುವ ಅವರ ಮನೆಯಲ್ಲಿ ಈಗಾಗಲೇ ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ದರ್ಶನ್​ ವಿರುದ್ಧ ವಂದೇ ಮಾತರಂ ಸಂಘಟನೆಯ ಮುಖಂಡ ಶಿವಕುಮಾರ್​ ಅವರು ದೂರು ನೀಡಿದ ನಂತರ ಇಷ್ಟೆಲ್ಲ ಬೆಳವಣಿಗೆ ನಡೆದಿದೆ. ಈಗ ದರ್ಶನ್​ ಅಭಿಮಾನಿಗಳಿಂದ ಶಿವಕುಮಾರ್​ಗೆ ಕೊಲೆ ಬೆದರಿಕೆ ಬಂದಿದೆ. ಇದರಲ್ಲಿ ದರ್ಶನ್​ ಅವರ ಕೈವಾಡ ಇದೆ ಎಂದು ಶಿವಕುಮಾರ್​ ಆರೋಪಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ಅಕ್ಟೋಬರ್​ 25ರಂದು ದರ್ಶನ್​ ವಿರುದ್ಧ ಅರಣ್ಯಾಧಿಕಾರಿಗೆ ದೂರು ಕೊಟ್ಟಿದ್ದೆವು. ದೂರು ನೀಡಿದ್ದಕ್ಕೆ ನಮಗೆ ಬೆದರಿಕೆ ಕರೆಗಳು ಬರುತ್ತಿವೆ. ಅವರ ಅಭಿಮಾನಿಗಳು ನಿನ್ನೆ ನನ್ನ ಕಾರನ್ನು ಹಿಂಬಾಲಿಸಿ ಟಚ್ ಮಾಡಿದ್ದಾರೆ. ದರ್ಶನ್​ ತಪ್ಪು ಮಾಡಿಲ್ಲ ಎಂಬುದಾದರೆ ಅಭಿಮಾನಿಗಳು ಯಾಕೆ ಈ ರೀತಿ ಮಾಡುತ್ತಿದ್ದಾರೆ? ದರ್ಶನ್ ಅಭಿಮಾನಿಗಳ ಸಂಘದವರೇ ಈ ಕೆಲಸ ಮಾಡುತ್ತಿದ್ದಾರೆ. ಬೆದರಿಕೆ ಕರೆ ಹಿಂದೆ ಶೇಕಡಾ 100ರಷ್ಟು ದರ್ಶನ್​ ಅವರ ಕೈವಾಡವಿದೆ’ ಎಂದು ಶಿವಕುಮಾರ್​ ಹೇಳಿಕೆ ನೀಡಿದ್ದಾರೆ.

ದರ್ಶನ್​ ಅವರು ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದಾರೆ ಮತ್ತು ವಿನಯ್​ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಕುಮಾರ್​ ದೂರು ನೀಡಿದ್ದರು.

ದರ್ಶನ್​ ಅಭಿಮಾನಿಗಳಿಂದ ಕೊಲೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶಿವಕುಮಾರ್​ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್​ ಬಿ. ದಯಾನಂದ್​ಗೆ ಶಿವಕುಮಾರ್ ದೂರು ನೀಡಿದ್ದಾರೆ. ಆಡಿಯೋ ಮತ್ತು ವಿಡಿಯೋ ಕಾಲ್​ ಮೂಲಕ ತಮಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸದ್ಯಕ್ಕಂತೂ ರಾಜ್ಯದಲ್ಲಿ ಹುಲಿ ಉಗುರಿನ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ.

ದಿನದಿಂದ ದಿನಕ್ಕೆ ಈ ಪ್ರಕರಣ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ.

Leave a Reply

error: Content is protected !!