ಹಟ್ಟಿಯಲ್ಲಿ ಮಹಿಳಾ ಲ್ಯಾಬ್ ಟೆಕ್ನಿಶಿಯನ್ ಸುಟ್ಟ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಪ್ರಕರಣ: ಇಬ್ಬರ ಬಂಧನ, ಅನೈತಿಕ ಸಂಬಂಧ ಹತ್ಯೆಗೆ ಕಾರಣ

ಶೇರ್ ಮಾಡಿ

ಹಟ್ಟಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಲ್ಯಾಬ್ ಟೆಕ್ನಿಶಿಯನ್ ಸುಟ್ಟ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಪ್ರಕರಣದಲ್ಲಿ ಅದು ಆತ್ಮಹತ್ಯೆಯಲ್ಲ; ಕೊಲೆ ಅನ್ನೋದನ್ನ ಹಟ್ಟಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೊಲೆ ನಡೆದ 20 ದಿನಗಳ ಬಳಿಕ ಹಟ್ಟಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತ ಮಹಿಳೆಯು ಮಗನ ವಯಸ್ಸಿನ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಮಾಟ-ಮಂತ್ರ ಪರಿಹಾರದ ಪೂಜೆ ಅಂತ ಪುಸಲಾಯಿಸಿ, ನಡುರಾತ್ರಿ ಆ ಮಹಿಳೆಯನ್ನು ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಘಟನೆ ನಡೆದಿತ್ತು. ಸಮೀರ್ ಸೊಹೈಲ್(23) ಹಾಗೂ ಮೊಹಮ್ಮದ್ ಕೈಫ್(23)ಬಂಧಿತರು.

ಕಳೆದ ನವೆಂಬರ್ 26 ರಂದು ಮಂಜುಳಾ ಅನ್ನೋ ಲ್ಯಾಬ್ ಟೆಕ್ನಿಶಿಯನ್ ಭೀಕರ ಕೊಲೆಯಾಗಿತ್ತು. ಮೃತ ಮಂಜುಳಾ ಮಂಡಿ ನೋವು ಸೇರಿ ಇತರೆ ಖಾಯಿಲೆಗಳಿಂದ ಬಳಲುತ್ತಿದ್ದರು. ಈ ಹಿಂದೆ ಆಕೆ ಮನೆಯಲ್ಲಿದ್ದ ಚಿನ್ನಾಭರಣ, ನಗದು ಕಳುವಾಗಿತ್ತು. ಹೀಗಾಗಿ ಯಾರೋ ಮಾಟ-ಮಂತ್ರ ಮಾಡಿಸಿರೊ ಬಗ್ಗೆ ಆಕೆಗೆ ಅನುಮಾನವಿತ್ತು.

ಈ ಬಗ್ಗೆ ಘಟನೆ ನಡೆದ ದಿನ ಹಂತಕರು ನಡುರಾತ್ರಿ ಪೂಜೆ ಮಾಡೋಣ ಅಂತ ಕರೆಸಿಕೊಂಡಿದ್ದಾರೆ. ಹಣ, ಚಿನ್ನಾಭರಣಗಳಿಗೆ ಅರಿಶಿನ, ಕುಂಕುಮ ಸಿಂಪಡಿಸಿ ಪೂಜೆ ನೆಪದಲ್ಲಿ ಕೊಲೆ ಮಾಡಿಬಿಟ್ಟಿದ್ದಾರೆ. ಒಬ್ಬ ಹಂತಕ ಆರೋಪಿ ಸಮೀರ್ ಕೊಲೆ ಬಳಿಕ ಆಕೆಯನ್ನು ಆಕೆಯ ಮನೆಯ ಬಳಿಯೇ ಸುಟ್ಟು ಹಾಕಿದ್ದ. ಬಳಿಕ ಆಕೆಯ ಬಳಿಯಿದ್ದ 10 ಲಕ್ಷ ಹಣ ಹಾಗೂ ಚಿನ್ನಾಭರಣ ಪಡೆದು ಸ್ನೇಹಿತ ಮೊಹಮ್ಮದ್ ಕೈಫ್ ಜೊತೆ ಆತನ ಕಾರ್ ನಲ್ಲಿ ಎಸ್ಕೇಪ್ ಆಗಿದ್ದ.

ಇಬ್ಬರೂ ಆರೋಪಿಗಳಿಂದ 7,49 ನಗದು, 9.7 ಲಕ್ಷ ಮೌಲ್ಯದ 163 ಗ್ರಾಂ ಚಿನ್ನಾಭರಣ ಸೇರಿದಂತೆ ಕಾರು, ಬೈಕ್ ಸೇರಿ ಒಟ್ಟು 22 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ತನಿಖೆ ವೇಳೆ ಬೆಚ್ಚಿ ಬೀಳಿಸೊ ಸತ್ಯ ಬಾಯ್ಬಿಟ್ಟ ಹಂತಕ ಸಮೀರ್ ಸೋಹೈಲ್, ಮೃತ ಮಂಜುಳಾ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗಿ ಹೇಳಿದ್ದಾನೆ. ಹಟ್ಟಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Leave a Reply

error: Content is protected !!