ಮಾಜಿ ಪತ್ನಿಯನ್ನೇ ಮರು ಮದುವೆಯಾದ ವ್ಯಕ್ತಿ; ಎಲ್ಲರನ್ನೂ ಭಾವುಕರನ್ನಾಗಿಸಿದ ಅಪರೂಪದ ಪ್ರೇಮಕಥೆ

ಶೇರ್ ಮಾಡಿ

ಪತಿ ಪತ್ನಿಯರ ಸಂಬಂಧ ಎನ್ನುವಂತಹದ್ದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಏನೇ ಆದರೂ ಈ ಸ್ವರ್ಗದಲ್ಲಿ ನಿಶ್ಚಯವಾಗಿರು ಸಂಬಂಧ ದೂರವಾಗುವುದಿಲ್ಲ ಎಂಬ ನಂಬಿಕೆಯಿದೆ. ನಮ್ಮ ಹಿರಿ ತಲೆಮಾರುಗಳನ್ನು ನೋಡಿದಾಗ ಅದು ನಿಜವೆಂದು ಅನ್ನಿಸುತ್ತದೆ. ಗಂಡ ಹೆಂಡತಿಯ ನಡುವೆ ಹುಸಿ ಮುನಿಸಿದ್ದರೂ ಅಥವಾ ಎಷ್ಟೇ ಮನಸ್ತಾಪಗಳಿದ್ದರೂ ಅದನ್ನೆಲ್ಲಾ ಮರೆತು, ನಮ್ಮ ಹಿರಿಯರು ಸುಖ ಸಂಸಾರ ನಡೆಸುತ್ತಿದ್ದರು. ಆದರೆ ಇಂದು ಆ ಚಿತ್ರಣವೇ ಬದಲಾಗಿದೆ. ನಾನು ನನ್ನಿಂದಲೇ ಎಲ್ಲಾ ಎನ್ನುವ ಅಹಂ ಮಾತಿನಿಂದ ಇಂದು ಅದೆಷ್ಟೋ ಸಂಬಂಧಗಳಲ್ಲಿ ಬಿರುಕು ಬೀಡುತ್ತಿದೆ. ಅಷ್ಟೇ ಯಾಕೆ, ಪತಿ ಪತ್ನಿಯರ ಸಂಬಂಧಲ್ಲಿ ಒಂದಿಷ್ಟು ಏರುಪೇರು ಕಂಡುಬಂದರೂ, ಇಬ್ಬರೂ ಕೂತು ಆ ಸಮಸ್ಯೆಯನ್ನು ಬಗೆ ಹರಿಸದೆ, ಆತುರದ ನಿರ್ಧಾರದಿಂದ ಕೋರ್ಟ್ ಮೆಟ್ಟಿಲೇರಿ, ವಿಚ್ಛೇದನ ಪಡೆಯುವ ಮೂಲಕ ಸುಂದರ ಸಂಬಂಧಕ್ಕೆ ಶಾಶ್ವತವಾಗಿ ತೆರೆ ಎಳೆದು ಬಿಡುತ್ತಾರೆ. ಅದೇ ರೀತಿ ಯಾವುದೋ ಕ್ಷುಲ್ಲಕ ಕಾರಣದಿಂದಾಗಿ ದುಡುಕಿ ವಿಚ್ಛೇದನ ಪಡೆದುಕೊಂಡಿದ್ದ ಜೋಡಿಯೊಂದು ಐದು ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಮರು ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಅಪರೂಪದ ಪ್ರೇಮಕಥೆಯನ್ನು ಕಂಡ ಹಲವರು ನಿಜವಾದ ಪ್ರೀತಿಗೆ ಎಂದಿಗೂ ಸಾವಿಲ್ಲ ಎಂದು ಹೇಳಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​​ನಲ್ಲಿ ನಡೆದಿದ್ದು, ಇಲ್ಲಿನ ವಿನಯ್ ಜೈಸ್ವಾಲ್ ಎಂಬವರು ತಮ್ಮ ಮಾಜಿ ಪತ್ನಿ ಪೂಜಾ ಚೌದರಿಯವರನ್ನು ವಿಚ್ಛೇದನ ಪಡೆದ ಐದು ವರ್ಷಗಳ ಬಳಿಕ ಮತ್ತೊಮ್ಮೆ ಮರು ಮದುವೆಯಾಗಿದ್ದಾರೆ. 2012 ನೇ ಇಸವಿಯಲ್ಲಿ ಇವರಿಬ್ಬರಿಗೂ ಮದುವೆಯಾಗಿತ್ತು. ಆದರೆ ಇವರಿಬ್ಬರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಹಾಗೂ ಕೆಲವೊಂದು ಮನಸ್ತಾಪಗಳ ಕಾರಣದಿಂದಾಗಿ 2018 ರಲ್ಲಿ ಇಬ್ಬರೂ ವಿಚ್ಛೇದನವನ್ನು ಪಡೆದುಕೊಂಡು ತಮ್ಮ ಪತಿ ಪತ್ನಿ ಸಂಬಂಧಕ್ಕೆ ಎಳ್ಳುನೀರು ಬಿಡುತ್ತಾರೆ. ಆದರೆ ಇದೀಗ ಐದು ವರ್ಷಗಳ ಬಳಿಕ ಡಿವೋರ್ಸ್ ಪಡೆದುಕೊಂಡಿದ್ದ ಈ ಜೋಡಿ, ಮತ್ತೊಮ್ಮೆ ಒಂದಾಗಿದ್ದಾರೆ. ವಿಧಿ ಯಾರು ಯಾರ ಜೊತೆ ಸೇರಬೇಕೆಂಬುದನ್ನು ಮೊದಲೇ ಬರೆದಿರುತ್ತೆ ಅಲ್ವಾ… ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಅದೇ ರೀತಿ ವಿಧಿಯ ಆಜ್ಞೆಗೆ ಅನುಗುಣವಾಗಿ ದೂರವಾಗಿದ್ದ ಈ ಜೋಡಿ ಇದೀಗ ಮತ್ತೊಮ್ಮೆ ಮರು ಮದುವೆಯಾಗಿದ್ದಾರೆ. ಈ ಅಪರೂಪದ ಪ್ರೇಮಕತೆಯನ್ನು ಸ್ವತಃ ವಿನಯ್ ಜೈಸ್ವಾಲ್ ಅವರು ತಮ್ಮ ಪೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ಪೋಸ್ಟ್​​ ಇಲ್ಲಿದೆ:

ಇದೇ ವರ್ಷ 2023 ರಲ್ಲಿ ವಿನಯ್ ಅವರಿಗೆ ಹೃದಯಾಘಾತವಾಗಿತ್ತು, ಅಲ್ಲದೆ ಈ ಕಾರಣದಿಂದ ಅವರು ಓಪನ್ ಸರ್ಜರಿಗೂ ಕೂಡಾ ಒಳಗಾಗಿದ್ದರು. ಈ ವಿಷಯ ತಿಳಿದ ತಕ್ಷಣ ಮಾಜಿ ಪತ್ನಿ ಪೂಜಾ ತಮ್ಮ ಕೋಪತಾಪವನ್ನೆಲ್ಲಾ ಬದಿಗಿಟ್ಟು ಓಡೋಡಿ ಬಂದು ವಿನಯ್ ಅವರ ಕಷ್ಟಕಾಲದಲ್ಲಿ ಜೊತೆಯಾಗಿ ನಿಲ್ಲುತ್ತಾರೆ. ನಮ್ಮಿಬ್ಬರ ನಡುವಿನ ಮನಸ್ತಾಪದ ಗೋಡೆ ಮಂಜಿನಂತೆ ಕರಗಿ ಹೋಗಲು ಹೃದಯಾಘಾತ ಕೂಡಾ ಒಂದು ಮುಖ್ಯ ಕಾರಣ, ಈಗ ನಮ್ಮಿಬ್ಬರ ನಡುವೆ ಇದ್ದ ಮನಸ್ತಾಪಗಳೆಲ್ಲಾ ದೂರವಾಗಿ ಮನಸ್ಪೂರ್ವಕವಾಗಿ ಮರು ಮದುವೆಯಾಗಿದ್ದೇವೆ ಎಂದು ವಿನಯ್ ಬರೆದುಕೊಂಡಿದ್ದಾರೆ.

ಈ ವೈರಲ್ ಪೋಸ್ಟ್ ಅನ್ನು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಹಲವರು ಇವರ ವೈವಾಹಿಕ ಜೀವನಕ್ಕೆ ಶುಭ ಕೋರಿದ್ದಾರೆ. ಒಬ್ಬ ಬಳಕೆದಾರರು “ಇದನ್ನೇ ಮೇಡ್ ಫಾರ್ ಈಚ್ ಅದರ್ʼ ಎನ್ನುತ್ತಾರೆ, ನಿಮ್ಮ ಈ ಸುಂದರ ಬಾಂಧವ್ಯಕ್ಕೆ ಯಾವ ದೃಷ್ಟಿಯೂ ತಾಕದಿರಲಿʼ ಎಂದು ಶುಭ ಹಾರೈಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಬ್ಬಬ್ಬಾ ಎಂತಹ ಸುಂದರ ಕಥೆಯಿದುʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು “ಸಂಬಂಧದಲ್ಲಿ ಎಷ್ಟೇ ಬಿರುಗಾಳಿ ಎದ್ದರೂ, ನಿಜವಾದ ಪ್ರೀತಿಗೆ ಎಂದಿಗೂ ಸಾವಿಲ್ಲ, ನಿಮ್ಮ ಈ ಪ್ರೇಮಕಥೆ ನನ್ನ ಹೃದಯ ಗೆದ್ದಿತು. ದೇವರು ನಿಮ್ಮಿಬ್ಬರಿಗೂ ಸಂತೋಷ, ಸುಖ, ಶಾಂತಿಯನ್ನು ನೀಡಲಿ ಎಂದು ಹೃದಯಪೂರ್ವಕವಾಗಿ ಹಾರೈಸಿದ್ದಾರೆ.

Leave a Reply

error: Content is protected !!