ಮೈಸೂರಿಗೆ ಕಳುಹಿಸಿಕೊಡಿ ಇಲ್ಲವೇ ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ; ಗೋಳಾಡಿದ ಮಾವುತ

ಶೇರ್ ಮಾಡಿ

ನನ್ನ ಆನೆಯನ್ನು ಮೈಸೂರಿಗೆ ಕಳುಹಿಸಿಕೊಡಿ. ಇಲ್ಲಾ ನನ್ನನ್ನು, ನನ್ನ ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ ಎಂದು ಮಾವುತರೊಬ್ಬರು ಕಣ್ಣೀರು ಹಾಕಿದ್ದು, ನೆರೆದವರ ಕಣ್ಣಂಚಲ್ಲಿಯೂ ನೀರು ತರಿಸುವಂತಿತ್ತು.

ಅರ್ಜುನನ ಅಂತಿಮ ದರ್ಶನ ಪಡೆದು ಮಾವುತ ವಿನು ಕಣ್ಣೀರಿಟ್ಟರು. ಅರ್ಜುನನ ಸೊಂಡಿಲನ್ನು ತಬ್ಬಿಕೊಂಡು ನನ್ನ ಆನೆಯನ್ನು ಬದುಕಿಸಿಕೊಡಿ. ನನ್ನ ಆನೆಯನ್ನು ಮೈಸೂರಿಗೆ ಕಳುಹಿಸಿಕೊಡಿ. ಇಲ್ಲವೇ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ. ಅರ್ಜುನ ಸತ್ತಿಲ್ಲ ಎಂದು ನನ್ನ ಹೆಂಡತಿ ಮಕ್ಕಳಿಗೆ ಹೇಳಿದ್ದೇನೆ. ಅರ್ಜುನನನ್ನು ನನ್ನ ಜೊತೆ ಕಳುಹಿಸಿಕೊಡಿ ಎಂದು ಮಾವುತ ಅರ್ಜುನನ ಎದುರು ರೋಧಿಸಿದ್ದಾರೆ.

ವಿನು ಅವರು ಅರ್ಜುನನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಇದೀಗ ಅರ್ಜುನನ ಸಾವಿನ ನೋವನ್ನು ಅರಗಿಸಿಕೊಳ್ಳಲಾಗದೆ ರೋಧಿಸುತ್ತಿದ್ದಾರೆ. ಮಂಗಳವಾರ ಅರ್ಜುನನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಚೇತರಿಸಿಕೊಂಡು ಬಂದಿದ್ದ ವಿನು ಅವರು ತನ್ನ ಪ್ರೀತಿಯ ಅರ್ಜುನನ್ನು ಕಂಡು ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದಾರೆ. ಇದು ನೋಡಗರ ಕಣ್ಣಲ್ಲಿ ನೀರು ತರಿಸುವಂತಿತ್ತು.

ಮಹಿಳೆಯೊಬ್ಬರು ಕೂಡ ಅರ್ಜುನನ ಅಂತಿಮ ದರ್ಶನ ಪಡೆದು ಬಾವೋದ್ವೇಗಕ್ಕೆ ಒಳಗಾದರು. ನಾಗಮ್ಮ ಎಂಬವರು ಅರ್ಜುನನ್ನು ಕಂಡು ಕಣ್ಣೀರಿಟ್ಟರು. ದೇವರೇ ಅರ್ಜುನನ್ನು ನಿನ್ನಲ್ಲಿ ಸೇರಿಸಿಕೊಳ್ಳು. ಅರ್ಜುನನಿಗೆ ಮುಕ್ತಿ ಕೊಡು ದೇವರೇ ಎಂದು ಕಣ್ಣೀರು ಹಾಕಿದರು.

ಇತ್ತ ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟ ಅಂಬಾರಿ ಹೊತ್ತ ಅರ್ಜುನನ ಅಂತಿಮ ದರ್ಶನಕ್ಕೆ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಮೈಸೂರಿನಿಂದ ಬಂದು ಜನ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮೃತ ಅರ್ಜುನನ ಕಳೇಬರಕ್ಕೆ ಹಾರ ಹಾಕಿ ನಮನ ಸಲ್ಲಿಕೆ ಮಾಡುತ್ತಿದ್ದಾರೆ. 8 ಬಾರಿ ಅಂಬಾರಿ ಹೊತ್ತು ಜನರ ಪ್ರೀತಿ ಪಾತ್ರವಾಗಿದ್ದ ಅರ್ಜುನ, ಕಾರ್ಯಾಚರಣೆ ವೇಳೆ ಹುತಾತ್ಮನಾದ. ಈ ಹಿನ್ನೆಲೆಯಲ್ಲಿ ದೂರದೂರುಗಳಿಂದ ಅರ್ಜುನನ ಅಂತಿಮ ದರ್ಶನಕ್ಕೆ ಜನ ಬರುತ್ತಿದ್ದಾರೆ.

Leave a Reply

error: Content is protected !!