ಡಿ.ಎಫ್.ಓ ಮತ್ತು ಆ‌ರ್.ಎಫ್.ಓ., ಎ.ಸಿ.ಎಫ್. ವಿರುದ್ಧ ಹಕ್ಕು ಚ್ಯುತಿ ಮಂಡನೆ; ಶಾಸಕ ಹರೀಶ್ ಪೂಂಜ ಬೆಳಗಾವಿ ವಿಧಾನ ಸಭಾ ಅಧಿವೇಶನದಲ್ಲಿ ಸಭಾಧ್ಯಕ್ಷರಿಗೆ ಮನವಿ

ಶೇರ್ ಮಾಡಿ

ಬೆಳ್ತಂಗಡಿ: ಶಾಸಕರುಗಳ ಹಕ್ಕುಗಳಿಗೆ ಚ್ಯುತಿಯನ್ನು ಮಾಡಿದ ಡಿ.ಎಫ್.ಓ ಮತ್ತು ಆ‌ರ್.ಎಫ್.ಓ., ಎ.ಸಿ.ಎಫ್. ಇವರುಗಳ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುವಂತೆ ಶಾಸಕ ಹರೀಶ್ ಪೂಂಜ ಡಿ.5ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

2023 ಅ.4ರಂದು ಕಳೆಂಜ ಗ್ರಾಮದ ದೇವಣ್ಣ ಗೌಡರು ತಮ್ಮ ಹಳೆಯ ಮನೆಯ ಬದಲಾಗಿ ನೂತನ ಮನೆ ನಿರ್ಮಾಣಕ್ಕೆ ಪಂಚಾಂಗ ಹಾಕಿದ್ದರು. ಇದನ್ನು ಅರಣ್ಯ ಇಲಾಖೆ ಜಾಗ ಎಂದು ಅಧಿಕಾರಿಗಳು ಕಿತ್ತು ಎಸೆದಿದ್ದರು. ಈ ವಿಷಯವನ್ನು ದೇವಣ್ಣ ಗೌಡರು ಶಾಸಕರಿಗೆ ತಿಳಿಸಿದ್ದರಿಂದ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆ ಸ್ಥಳವು ದಿಶಾಂಕ್ ನಲ್ಲಿ ಆರಣ್ಯದಿಂದ ಹೊರಗೆ ಇರುವುದು ಕಂಡು ಬಂದು ಹಾಗೂ ಅರಣ್ಯದ ಯಾವುದು ಗಡಿ ಗುರುತುಗಳು ಸುತ್ತಮುತ್ತ ಕಂಡು ಬರದ ಹಿನ್ನಲೆಯಲ್ಲಿ ಅವರಿಗೆ ತಕ್ಷಣ ತಾತ್ಕಾಲಿಕ ಮನೆ ನಿರ್ಮಿಸಲಾಯಿತು.

ನಂತರ ಸಚಿವರು ಎ.ಸಿ.ಎಫ್. ಮತ್ತು ಆರ್.ಎಫ್.ಓ. ಗಳಿಗೆ ದೂರವಾಣಿ ಮೂಲಕ ಮೌಖಿತ ಆದೇಶ ನೀಡಿ ಸರ್ವೆ ನಂ. 309 ಸ್ಥಳವನ್ನು ಜಂಟಿ ತನಿಖೆ ನಡೆಸಿದ ನಂತರವೇ ಕ್ರಮ ಕೈಗೊಳ್ಳಲು ಆದೇಶಿಸಿದರು. ಆದರೆ ಅ.9ರಂದು ಮತ್ತೆ ದೇವಣ್ಣಗೌಡರಿಗೆ ನಿರ್ಮಿಸಿದ ತಾತ್ಕಾಲಿಕ ಮನೆಯನ್ನು ತೆರವುಗಳಿಸಲು ಸಚಿವರ ಮೌಖಿಕ ಆದೇಶವನ್ನು ಉಲ್ಲಂಘಿಸಿ ಕೆ.ಎಸ್.ಆರ್.ಪಿ. ತುಕಡಿಗಳೊಂದಿಗೆ ಡಿ.ಎಫ್.ಓ.. ಆರ್.ಎಫ್.ಓ.. ಎ.ಸಿ.ಎಫ್. ರವರು ಸ್ಥಳಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಶಾಸಕರುಗಳಾದ ರಾಜೇಶ್ ನಾಯ್ಕ, ಭಾಗೀರಥಿ ಮುರುಳ್ಯ, ಉಮಾನಾಥ್ ಕೋಟ್ಯಾನ್, ಡಾ.ವೈ ಭರತ್‌ ಶೆಟ್ಟಿ, ಎಂ.ಎಲ್‌.ಸಿ. ಪ್ರತಾಪ್‌ಸಿಂಹ ನಾಯಕ್ ಆಗಮಿಸಿ, ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗಳಿಗೆ ಜಂಟಿ ಸರ್ವೆ ನಡೆಸಿ ಮನೆ ತೆರವುಗೊಳಿಸಲು ಸೂಚಿಸಲಾಯಿತು ಎಂದು ತಿಳಿಸಲಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಧಿಕ್ಕರಿಸಿ ಶಾಸಕರುಗಳ ಹಕ್ಕಿಗೆ ಚ್ಯುತಿ ಆಗುವಂತೆ ಸಾರ್ವಜನಿಕವಾಗಿ ಅರಣ್ಯ ಇಲಾಖೆಯ ಡಿ.ಎಫ್.ಓ. ಮತ್ತು ಆರ್.ಎಫ್.ಓ. ನಡೆದುಕೊಂಡಿರುತ್ತಾರೆ ಹಾಗೂ ಆದೇಶವನ್ನು ದಿಕ್ಕರಿಸಿ ಸ್ಥಳದಲ್ಲಿಯೇ ಸುಮಾರು 9 ಗಂಟೆಗಳ ಕಾಲ ಜನಪ್ರತಿನಿಧಿಗಳಾದ ನಮ್ಮನ್ನು ಯಾವುದೇ ಮಾಹಿತಿ ನೀಡದೇ ಮನೆ ತೆರವಿಗೆ ಬಲಾತ್ಕಾರದ ಪ್ರಯೋಗಗಳನ್ನು ಮಾಡಿದ್ದಾರೆ. ನಂತರ ಡಿ.ಎಫ್.ಓ. ರವರು ಆ ಕ್ಷೇತ್ರದ ಶಾಸಕನಾದ ನನ್ನ ಬಳಿಯೆ ಮುಚ್ಚಳಿಕೆ ಪತ್ರ ಬರೆದು ಕೊಡುವಂತೆ ತಿಳಿಸಿ, ಶಾಸಕನಾದ ನನ್ನ ಬಳಿಯೆ ಮುಚ್ಚಳಿಕೆಯನ್ನು ಬರೆಸಿಕೊಂಡು ನಂತರವೇ ಸ್ಥಳದಿಂದ ನಿರ್ಗಮಿಸಿದರು. ಇದು ಶಾಸಕರುಗಳಾದ ನಮ್ಮ ಅಧಿಕಾರ ವ್ಯಾಪ್ತಿಗೆ ಮಾಡಿದಂತಹ ಹಕ್ಕು ಚ್ಯುತಿಯಾಗಿರುತ್ತದೆ. ಸಾರ್ವಜನಿಕವಾಗಿ ಅಸಭ್ಯವರ್ತನೆ ಮಾಡಿದ ಡಿ.ಎಫ್.ಓ ಮತ್ತು ಆ‌ರ್.ಎಫ್.ಓ., ಎ.ಸಿ.ಎಫ್. ಇವರುಗಳ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ.

ಅರಣ್ಯ ಪ್ರದೇಶ ಒತ್ತುವರಿಯಾದಾಗ ಕರ್ನಾಟಕ ಅರಣ್ಯ ಕಾಯ್ದೆ 1963 ರ 64ಎ ಸೆಕ್ಷನ್‌ನಂತೆ ಒತ್ತುವರಿ ಮಾಡಿಕೊಂಡ ವ್ಯಕ್ತಿಗೆ ನೋಟಿಸ್‌ ನೀಡಿ ದಾಖಲೆಗಳನ್ನು ಪಡೆದು ನಡವಳಿಗಳನ್ನು ದಾಖಲಿಸಿದ ನಂತರ ತೆರವು ಕಾರ್ಯ ಮಾಡಲು ಅವಕಾಶವಿದ್ದು, ಎಲ್ಲಾ ಕಾನೂನು ವಿಧಾನಗಳನ್ನು ನಡೆಸದೆ ಕಾನೂನು ಕಾರ್ಯ ವಿಧಾನಗಳನ್ನು ಮಾಡದೇ ಇರುವ ಬಗ್ಗೆ ಜನಪ್ರತಿನಿಧಿಯಾದ ನಾವು ಅವರ ಗಮನಕ್ಕೆ ತಂದರೂ ತೆರವುಗೊಳಿಸಲು ಮುಂದಾಗಿದ್ದಾರೆ, ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅರಣ್ಯದ ಗಡಿಗುರುತನ್ನು ಜನಪ್ರತಿನಿಧಿಗಳಿಗೆ ತೋರಿಸಲು ತಿಳಿಸಿದಾಗ ಜನಪ್ರತಿನಿಧಿಗಳಿಗೆ ಯಾವುದೇ ಗಡಿಗುರುತು ತೋರಿಸದೇ ಒತ್ತಾಯಪೂರ್ವಕವಾಗಿ ಮನೆ ತೆರವಿಗೆ ಮುಂದಾಗಿದ್ದಾರೆ, ವಿಧಾನ ಪರಿಷತ್ ಸದಸ್ಯರ ಮೇಲೆಯೇ ಎ.ಸಿ.ಎಫ್. ಅವರು ಕೈ ಮಿಲಾಯಿಸಲು ಮುಂದಾಗಿರುವುದು ಜನಪ್ರತಿಧಿಗಳ ಕರ್ತವ್ಯಕ್ಕೆ ಚ್ಯುತಿಯಾದಂತೆ. ಜಂಟಿ ಸರ್ವೆ ನಡೆಸಿ ತೆರವುಗೊಳಿಸಲು ಸೂಚಿಸಿದರೂ ಕೂಡ ದುರಹಂಕಾರದಿಂದ ಡಿ.ಎಫ್.ಓ., ಆ‌ರ್.ಎಫ್.ಓ. ರವರು ಮನೆ ತೆರವಿಗೆ ಮುನ್ನುಗುತ್ತಿದ್ದರು. ಈ ಎಲ್ಲಾ ಅಂಶಗಳಿಂದ ಶಾಸಕನಾದ ನನ್ನ ಮತ್ತು ಇತರ ಶಾಸಕರ ಕರ್ತವ್ಯಕ್ಕೆ ಚ್ಯುತಿ ಉಂಟಾಗಿದ್ದು ಶಾಸಕರಗಳ ಹಕ್ಕು ಚ್ಯುತಿಯನ್ನು ಮಾಡಿದ ಡಿ.ಎಫ್.ಓ ಅಂತೋನಿ ಮರಿಯಪ್ಪ ಆ‌ರ್.ಎಫ್.ಓ. ಜಯಪ್ರಕಾಶ್ ಎ.ಸಿ.ಎಫ್. ಸುಬ್ಬಯ್ಯ ನಾಯಕ್ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ.

ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಹಾಗೂ ಕಾನೂನು ನಿಯಮಗಳನ್ನು
ಪಾಲಿಸದೆ ದಬ್ಬಾಳಿಕೆ ನಡೆಸುತ್ತಿದ್ದ ಅರಣ್ಯ ಅಧಿಕಾರಿಗಳನ್ನು ಸಾರ್ವಜನಿಕರಿಗೆ ನ್ಯಾಯ ಕೊಡಿಸಲು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ ಕ್ರಮವನ್ನು ಕರ್ತವ್ಯಕ್ಕೆ ಅಡ್ಡಿ ಎಂದು ಸುಳ್ಳು ಪ್ರಕರಣ ದಾಖಲಿಸಿ ಜನಪ್ರತಿನಿಧಿಯ ಹಕ್ಕಿಗೆ ಚ್ಯುತಿ ಮಾಡಿರುವುದು. ಅಕ್ಷೇಪಾರ್ಹವಾಗಿರುತ್ತದೆ. ಸದರಿ ಅಧಿಕಾರಿಗಳನ್ನು ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡಿ ಶಾಸಕರುಗಳಿಗೆ ಉಂಟಾದ ತೊಂದರೆ ಮತ್ತು ಚ್ಯುತಿಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.

Leave a Reply

error: Content is protected !!