![](https://i0.wp.com/nesaranewsworld.com/wp-content/uploads/2023/12/prajavani_import_sites_pv_files_article_images_2020_12_25_file6zgpxj7snnsgmcexgil01608861570.webp?resize=765%2C1024&ssl=1)
ಡಿಸೆಂಬರ್ 25 ರಂದು ಜಗತ್ತಿನಾದ್ಯಂತ ಇರುವ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಅತೀ ಸಂಭ್ರಮದಿಂದ ಆಚರಿಸುತ್ತಾರೆ. ನಮ್ಮ ರಕ್ಷಕರಾಗಿ ಈ ಧರೆಗೆ ಬಂದ ಪ್ರಭು ಯೇಸುಕ್ರಿಸ್ತರು ಜನಿಸಿದ ಹಬ್ಬವೇ ಕ್ರಿಸ್ಮಸ್. ಕನ್ಯಾಮರಿಯಮ್ಮ ಹಾಗೂ ಸಂತ ಜೋಸೆಫ್ ಪ್ರಭು ಯೇಸು ಕ್ರಿಸ್ತರ ಮಾತಾ ಪಿತರು. ಸಂತ ಜೋಸೆಫರಿಗೆ ಕನ್ಯಾಮರಿಯಮ್ಮನರೊಂದಿಗೆ ವಿವಾಹ ಆಗಿರಲಿಲ್ಲ, ಕೇವಲ ನಿಶ್ಚಿತಾರ್ಥ ಮಾತ್ರ ಆಗಿತ್ತು. ಆದರೆ ದೇವದೂತರು ಸಂತ ಜೋಸೆಫರಿಗೆ ಕನಸಿನಲ್ಲಿ ಬಂದು ‘ಕನ್ಯಾಮರಿಯಮ್ಮನವರನ್ನು ನಿನ್ನ ಸಂಗಡ ಕರೆತರಲು ಹೆದರಬೇಡ, ಯಾಕೆಂದರೆ ಅವರು ಪವಿತ್ರಾತ್ಮರ ಕೃಪೆಯಿಂದ ಗರ್ಭವತಿ ಆಗುತ್ತಾರೆ’ ಎಂದು ಹೇಳುತ್ತಾರೆ. ಆಗ ದೇವದೂತರು ಹೇಳಿದಂತೆ ಸಂತ ಜೋಸೆಫರು ಮಾಡುತ್ತಾರೆ. ಹೀಗೆ ದೇವರ ಪುತ್ರರಾಗಿ ಪ್ರಭು ಯೇಸುಕ್ರಿಸ್ತರು ಒಂದು ಸಾಮಾನ್ಯ ಗೋದಲಿಯಲ್ಲಿ ಜನಿಸುತ್ತಾರೆ. ಯಾಕೆಂದರೆ ಯಾರ ಮನೆಯಲ್ಲಿಯೂ/ಯಾವ ಛತ್ರದಲ್ಲಿಯೂ ಅವರಿಗೆ ಜಾಗ ಸಿಗಲಿಲ್ಲ. ”ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ ಸಮಾಧಾನ” (ಲೂಕ 2:14) ಎಂಬ ಗಾಯನವನ್ನು ದೇವದೂತರು ಪ್ರಭು ಯೇಸುಕ್ರಿಸ್ತ ಜನಿಸಿದಾಗ ಹಾಡುತ್ತಾರೆ. ಈ ಮೂಲಕ ಕ್ರಿಸ್ತನ ಜನನದ ಸಂದೇಶ ಎಲ್ಲರಿಗೂ ತಿಳಿಯಪಡಿಸುತ್ತಾರೆ.
ಪ್ರಭು ಯೇಸುಕ್ರಿಸ್ತರು ಈ ಭೂಮಿಗೆ ಬಂದದ್ದು ಮನುಕುಲದ ಸಕಲ ಪಾಪವನ್ನು ಪರಿಹರಿಸುವುದಕ್ಕೋಸ್ಕರ. ತನ್ನ ಒಬ್ಬನೇ ಮಗನನ್ನು ದೇವರು ಈ ಭೂಮಿಗೆ ಧಾರೆ ಎರೆದು, ಅವರ ಮೂಲಕ ಇಡೀ ಜಗತ್ತಿಗೆ ಶಾಂತಿ ಹಾಗೂ ಪ್ರೀತಿಯ ಸಂದೇಶ ಸಾರುತ್ತಾರೆ. ಪವಿತ್ರ ಗ್ರಂಥ ಬೈಬಲ್ ನಲ್ಲಿ ಉಲ್ಲೇಖಿಸಿದಂತೆ ದೇವರು ‘ಇಮ್ಮಾನುವೆಲ್’. ಇಮ್ಮಾನುವೆಲ್ ಎಂದರೆ ದೇವರು ನಮ್ಮ ಜೊತೆ ಇದ್ದಾರೆ ಎಂದು ಅರ್ಥ. God is with us. ಇದು ಖಂಡಿತಾ ಹೌದು. ಅವರ ಕೃಪೆ ಅವರು ಆಶೀರ್ವಾದ ಅನೇಕ ವಿಧದಲ್ಲಿ ನಮಗೆ ಪ್ರಕಟಗೊಳ್ಳುತ್ತದೆ.
ಕಷ್ಟ ಸಂಕಷ್ಟದ ಸಮಯದಲ್ಲಿ ನಮ್ಮನ್ನು ಸದಾ ಅವರು ಕೈ ಹಿಡಿದು ಸದಾ ಮುನ್ನಡೆಸುತ್ತಾರೆ. ಇದಕ್ಕೆ ಪುಷ್ಟಿ ಎಂಬಂತೆ ‘ಯೇಸು’ ಅಥವಾ ಆಂಗ್ಲ ಭಾಷೆಯಲ್ಲಿ ‘ಜೀಸಸ್’ ಎಂದರೆ ‘ದೇವರು ರಕ್ಷಕರು’ ಎಂದು ಅರ್ಥ. ಸನಾತನ ಹಿಂದೂ ಧಾರ್ಮಿಕ ಗ್ರಂಥವಾದ ಋಗ್ವೇದದಲ್ಲಿ ಯೇಸು ಸ್ವಾಮಿಯ ಬಗ್ಗೆ ಸ್ಪಷ್ಟವಾದ ಉಲ್ಲೇಖವಿದೆ.
ದೇವರು ಮನುಷ್ಯರಾಗಿದ್ದಾರೆ ಹಾಗಾದರೆ ನಾವು ದೇವರಾಗಲು ಆಗುವುದಿಲ್ಲ. ಕನಿಷ್ಠ ಪಕ್ಷ ನಾವು ಒಳ್ಳೆಯ ಮನುಷ್ಯರಾಗಿ ಬದುಕಲು ಸಾಧ್ಯ ಅಲ್ವಾ? ಸತ್ಕರ್ಮ, ಸತ್ಚಿತ್ತ, ಸತ್ ಆಲೋಚನೆ ಅಂದರೆ ನಮ್ಮ ಒಳ್ಳೆಯ ಕೆಲಸ, ಉತ್ತಮ ಮನಸ್ಸು ಹಾಗೂ ಉತ್ತಮ ಆಲೋಚನೆಯ ಮೂಲಕ ಇನ್ನೊರ್ವ ಕ್ರಿಸ್ತ ನಾನು ಆಗಲು ಸಾಧ್ಯ. ನಮ್ಮ ನೆರೆಹೊರೆಯವರಿಗೆ, ಸಂಕಷ್ಟದಲ್ಲಿರುವವರಿಗೆ, ನಮ್ಮ ಸೋದರ ಸೋದರಿಯರು ಎಂಬ ಭಾವದಿಂದ ನೋಡಿದಾಗ ನಮ್ಮ ಕ್ರಿಸ್ಮಸ್ ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ. ಇನ್ನೊಬ್ಬರ ಬಾಳಿಗೆ ನೆರವಾಗುವ ಮೂಲಕ ದೇವರ ಪ್ರೀತಿ ನಮ್ಮಲ್ಲಿ ಸಾಕಾರಗೊಳ್ಳುವುದು. ಹಿಂದೂ ಧರ್ಮದಲ್ಲಿ ಉಲ್ಲೇಖಿಸಿದಂತೆ ‘ಸರ್ವೇ ಜನಾ ಸುಖೀನೋಭವಂತು’ ಎಂದರೆ ಇದೇ. ಕಷ್ಟದಲ್ಲಿರುವವರ ಸೇವೆ ಮಾಡಿದರೆ ಅದು ದೇವರಿಗೆ ಮಾಡಿದ ಸೇವೆಗೆ ಸಮ. ಕೋಲ್ಕೋತ್ತಾದ ಮದರ್ ತೆರೆಸಾರವರು ಮಾಡಿದ್ದು ಅದನ್ನೇ. ‘ನಾನು ಮಾಡುವುದು ರೋಗಿಗಳ ಸೇವೆಯನ್ನಲ್ಲ, ದರಿದ್ರ ನಾರಾಯಣ ಸೇವೆ’ ಎಂದು ಅವರು ಹೇಳಿಕೊಂಡಿದ್ದರು. ಅಶಕ್ತರು, ಬಡವರರು, ದೀನದಲಿತರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಿದರೆ ನಮ್ಮ ಕ್ರಿಸ್ಮಸ್ ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ. ನಮ್ಮ ಸರಳ ಜೀವನದ ಮೂಲಕ ನಾವು ಇತರರಿಗೆ ಮಾದರಿ ವ್ಯಕ್ತಿಗಳಾಗೋಣ. ನಮ್ಮ ಧರ್ಮವನ್ನು ಚೆನ್ನಾಗಿ ಪಾಲಿಸಿ, ಇತರರ ಧರ್ಮಕ್ಕೂ ಗೌರವ ಕೊಡುವ ವ್ಯಕ್ತಿಗಳಾಗೋಣ. ಈ ನಿಟ್ಟಿನಲ್ಲಿ ಅಂತರ್ ಧರ್ಮಿಯ ಸಂವಾದ ಕಾರ್ಯಕ್ರಮ, ಸಂಯುಕ್ತ ಹಬ್ಬಗಳ ಆಚರಣೆ ಪೂರಕವಾಗಿದೆ. ಯೇಸು ಕ್ರಿಸ್ತರ ಜೀವನ ಸಾರ್ವತ್ರಿಕ ಪ್ರೀತಿ ಹಾಗೂ ಸಹೋದರತೆಯನ್ನು ಸಾರಿ ಹೇಳುತ್ತದೆ. ದೇವರು ಪ್ರೀತಿ ಸ್ವರೂಪರಾಗಿದ್ದಾರೆ. ನಾವು ಕೂಡ ಎಲ್ಲರನ್ನು ಪ್ರೀತಿಸುವ ಕಲೆಯನ್ನು ಕಲಿಯಲು ನಮಗೆ ಆಹ್ವಾನ ನೀಡುತ್ತಾರೆ.
ದ್ವೇಷ ಬಿಡೋಣ, ಪರಸ್ಪರ ಪ್ರೀತಿ ಹಂಚೋಣ. ಮುಖ್ಯವಾಗಿ ಈ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಪ್ರಭು ಯೇಸು ಕ್ರಿಸ್ತರು ನಮ್ಮ ಹೃದಯದಲ್ಲಿ ಹುಟ್ಟಿ ಬರಲಿ. ಕ್ರಿಸ್ತರ ಜೀವನ ನಮಗೆ ಆದರ್ಶವಾಗಲಿ. ಸಮಾಜದಲ್ಲಿ ಶಾಂತಿ ನೆಲೆಗೊಳ್ಳಲು ಸದಾ ಪ್ರಾರ್ಥಿಸೋಣ. ನಮ್ಮ ಪರಿಸರದಲ್ಲಿ ಪ್ರೀತಿಯನ್ನು ಹಂಚುವ ವ್ಯಕ್ತಿಗಳಾಗೋಣ.
ಬರಹ: ಸುನಿಲ್ ಗೊನ್ಸಾಲ್ವಿಸ್, ಮಡಂತ್ಯಾರು
![](https://i0.wp.com/nesaranewsworld.com/wp-content/uploads/2023/12/SAMBHAVI-5-SEASON-25-LUCKY-SCHEME_page-0001-2.jpg?resize=336%2C431&ssl=1)
![](https://i0.wp.com/nesaranewsworld.com/wp-content/uploads/2023/12/WhatsApp-Image-2023-11-09-at-12.16.18-PM-2.jpeg?resize=724%2C1024&ssl=1)
![](https://i0.wp.com/nesaranewsworld.com/wp-content/uploads/2023/11/WhatsApp-Image-2023-09-29-at-10.07.05-1.jpg?resize=724%2C1024&ssl=1)
![](https://i0.wp.com/nesaranewsworld.com/wp-content/uploads/2023/09/WhatsApp-Image-2023-06-19-at-2.49.48-PM-1.jpeg?resize=723%2C1024&ssl=1)