ಪರೀಕ್ಷಾ ಪೇ ಚರ್ಚಾ -7 ಕಾರ್ಯಕ್ರಮದಲ್ಲಿ ವೈಜ್ಞಾನಿಕ ಮಾದರಿ ಪ್ರದರ್ಶಿಸಲು ದೆಹಲಿಗೆ ತೆರಳಿದ ಸುಳ್ಯದ ಅಚಲ್ ಬಿಳಿನೆಲೆ

ಶೇರ್ ಮಾಡಿ

ವಿದ್ಯಾರ್ಥಿಗಳಿಗೆ ಬಹಳ ಪ್ಕಾಮುಖ್ಯತೆಯನ್ನು ನೀಡುವ ದೇಶದ ಪ್ರಧಾನಿ ನರೇಂದ್ರ ಮೋದಿಯವರ ವಿನೂತನ ಕಾರ್ಯಕ್ರಮಗಳಲ್ಲಿ ಒಂದಾದ “ಪರೀಕ್ಷಾ ಪೇ ಚರ್ಚಾ-7” ಕಾರ್ಯಕ್ರಮದ ಸಂದರ್ಭದಲ್ಲಿ ವೈಜ್ಞಾನಿಕ ಮಾದರಿಯನ್ನು ಪ್ರದರ್ಶಿಸಲು ಜವಾಹರ್ ನವೋದಯ ವಿದ್ಯಾಲಯ ಮುಡಿಪು ಇಲ್ಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸುಳ್ಯದ ಅಚಲ್ ಬಿಳಿನೆಲೆ ಆಯ್ಕೆಯಾಗಿದ್ದಾರೆ.

ಜನವರಿ 29ರಂದು ನವದೆಹಲಿಯ ಭಾರತ್ ಮಂಟಪ (2023ರ G 20 ಶೃಂಗ ಸಭೆ ನಡೆದ ಸ್ಥಳ) ದಲ್ಲಿ ನಡೆಯುವ “ಪರೀಕ್ಷಾ ಪೇ ಚರ್ಚಾ -7“ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರೊಂದಿಗೆ ದೇಶದ ಆಯ್ದ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ನಿರ್ವಹಣೆಯ ಸಂವಾದದಲ್ಲಿ ಭಾಗವಹಿಸಲಿದ್ದು , ಇದೇ ಸಂದರ್ಭದಲ್ಲಿ “ಚಂದ್ರಯಾನ -3” ಇದರ ಕಾರ್ಯವೈಖರಿಯನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಯಾರಿಸಿದ ವೈಜ್ಞಾನಿಕ ಮಾದರಿಯನ್ನು ಅಚಲ್ ಬಿಳಿನೆಲೆ ಪ್ರಧಾನಿಯವರ ಮುಂದೆ ಪ್ರದರ್ಶಿಸಿ ವಿವರಿಸಲಿದ್ದಾರೆ.

ದೇಶದ 600ಕ್ಕೂ ಹೆಚ್ಚು ಜವಾಹರ್ ನವೋದಯ ವಿದ್ಯಾಲಯಗಳ ಪೈಕಿ ಎಂಟು ವಿದ್ಯಾಲಯಗಳಿಗೆ ಈ ಅವಕಾಶ ದೊರಕಿದ್ದು, ಇದರಲ್ಲಿ ಭಾಗವಹಿಸಲು ನವೋದಯ ವಿದ್ಯಾಲಯದ ಹೈದರಾಬಾದ್ ರೀಜನ್ ನ್ನು ಪ್ರತಿನಿಧಿಸುತ್ತಿರುವ ಅಚಲ್ ಬಿಳಿನೆಲೆಯವರು ಜನವರಿ 22ರಂದು ದೆಹಲಿ ತೆರಳಿದ್ದಾರೆ.

ಕರಾಟೆಯಲ್ಲಿ ಬ್ಲಾಕ್ ಬೆಲ್ಟ್, ಕೀಬೋರ್ಡ್ ನಲ್ಲಿ ಜೂನಿಯರ್ ಮುಗಿಸಿರುವ ಅಚಲ್ ಬಿಳಿನೆಲೆಯವರು ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರುಗಳಾದ ಚಂದ್ರಶೇಖರ ಬಿಳಿನೆಲೆ ಮತ್ತು ಡಾ. ಅನುರಾಧಾ ಕುರುಂಜಿಯರ ಪುತ್ರ. ರೋಟರಿ ಆಂಗ್ಲ ಮಾದ್ಯಮ ಶಾಲೆಯ ಹಿರಿಯ ವಿದ್ಯಾರ್ಥಿ.

ಹೀಗೊಂದು ಕಾಕತಾಳೀಯ: ಅಚಲ್ ಬಿಳಿನೆಲೆಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅಮ್ಮ ಮತ್ತು ಮಗ ಒಂದೇ ದಿನಾಂಕದಂದು ದೇಶದ ಪ್ರಧಾನಿಗಳನ್ನು ಭೇಟಿಯಾದ ಕಾಕತಾಳೀಯ ಘಟನೆಯೊಂದು ನಡೆದಿದೆ. 1999 ರಲ್ಲಿ ಎನ್ ಎಸ್ ಎಸ್ ನಿಂದ ಸುಳ್ಯದಿಂದ ನೂತನ ದಾಖಲೆಯೊಂದಿಗೆ
ಪ್ರಪ್ರಥಮ ಬಾರಿಗೆ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಅಚಲ್ ಬಿಳಿನೆಲೆಯವರ ತಾಯಿ ಡಾ. ಅನುರಾಧಾ ಕುರುಂಜಿಯವರಿಗೆ 29-01 – 1999ರಂದು ಅಂದಿನ ಪ್ರಧಾನಿ ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಇದೀಗ ಸರಿಯಾಗಿ 25 ವರ್ಷಗಳ ನಂತರ ಅದೇ ದಿನಾಂಕ (29-01-24) ದಂದು ಇಂದಿನ ಪ್ರಧಾನಿ ಮಾನ್ಯ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಅವಕಾಶ ಅಚಲ್ ಬಿಳಿನೆಲೆಯವರಿಗೆ ಸಿಕ್ಕಿರುವುದು ಗಮನಾರ್ಹ.

Leave a Reply

error: Content is protected !!