ಡಾ.ಪ್ರಸನ್ನಕುಮಾರ ಐತಾಳಗೆ ಎ.ಶಾಮ ರಾವ್ ಸ್ಮಾರಕ ಉತ್ತಮ ಶಿಕ್ಷಕ ಪ್ರಶಸ್ತಿ

ಶೇರ್ ಮಾಡಿ

ಉಜಿರೆ : ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ಎ.ಶಾಮರಾವ್ ಫೌಂಡೇಷನ್ ವತಿಯಿಂದ ಕೊಡಲ್ಪಡುವ ಅಡ್ಕ ಶಾಮ ರಾವ್ ಸ್ಮಾರಕ ಉತ್ತಮ ಶಿಕ್ಷಕ ಪ್ರಶಸ್ತಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಪ್ರಸನ್ನಕುಮಾರ ಐತಾಳ್ ಇವರು ಆಯ್ಕೆಯಾಗಿದ್ದಾರೆ.
ಇವರ ಶೈಕ್ಷಣಿಕ ಸಾಧನೆಗಳನ್ನು ಪರಿಗಣಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷಾ ಬೋಧನೆ, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಂಸ್ಕೃತ ವಿದ್ಯಾರ್ಥಿವೇತನ ದೊರಕಿಸುವುದು ಹಾಗೇಯೇ ವಿವಿಧ ಪತ್ರಿಕೆಗಳಲ್ಲಿ ಲೇಖನಗಳ ಬರವಣಿಗೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಸಂಶೋಧನ ಲೇಖನಗಳ ಪ್ರಕಟನೆ, ವಿಚಾರಸಂಕಿರಣ ಹಾಗೂ ವಿಚಾರಗೋಷ್ಠಿಗಳಲ್ಲಿ ಸಂಶೋಧನ ಪ್ರಬಂಧಗಳ ಮಂಡನೆ, ಹದಿನೇಳು ಪುಸ್ತಕಗಳ ಪ್ರಕಟಣೆ, ನಾಟಕ, ಯಕ್ಷಗಾನ, ಗಮಕ ಪ್ರವಚನ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳುವಿಕೆ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ ಮಾಡಿದಂತಹ ಜನೋಪಯೋಗಿ ಕಾರ್ಯಗಳನ್ನು ಪರಿಗಣಿಸಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕೋಟೇಶ್ವರದ ದಿ.ಕೃಷ್ಣ ಐತಾಳ್ ಹಾಗೂ ಜಯಲಕ್ಷ್ಮೀ ಐತಾಳ್ ಇವರ ಪುತ್ರರಾಗಿರುವ ಇವರು ಶಿಕ್ಷಣ ತಜ್ಞ ಹಾಗೂ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸ್ಥಾಪಕರಾದ ಅಡ್ಕ ಶಾಮರಾವ್ ಇವರ ಹೆಸರಿನಲ್ಲಿ ಫೆ.14 ರಂದು ನಡೆಯುವ ಸ್ಥಾಪಕ ದಿನಾಚರಣೆಯ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಇವರು ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Leave a Reply

error: Content is protected !!