ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಸೇವೆಯ ಮನೋಭಾವ, ಸಹಬಾಳ್ವೆಯ ರೂಪಿಸಿಕೊಳ್ಳಲು ಎನ್ಎಸ್ಎಸ್ ಶಿಬಿರ ಮಹತ್ವದ್ದಾಗಿದೆ

ಶೇರ್ ಮಾಡಿ

*ನೆಲ್ಯಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ನೆಲ್ಯಾಡಿ: ನಗರ ಜೀವನದ ಪರಿಣಾಮವಾಗಿ ಸಾಮಾಜಿಕ ಸಹಭಾಗಿತ್ವದ ಕೊರತೆಯಿಂದ ಸಹಬಾಳ್ವೆಯ ಬದುಕು ಎನ್ನುವುದು ಗ್ರಾಮೀಣ ಪ್ರದೇಶದಿಂದಲೂ ಕೂಡ ಮರೀಚಿಕೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಹಾಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಸೇವೆಯ ಮನೋಭಾವ ಮತ್ತು ಸಹಬಾಳ್ವೆಯ ಜೀವನಶೈಲಿಯನ್ನು ಮರಳಿ ರೂಪಿಸಿಕೊಳ್ಳಲು ಈ ಎನ್ಎಸ್ಎಸ್ ಶಿಬಿರದ ಅನುಭವವು ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಏಳು ದಿನಗಳು ಕೂಡ ಎಲ್ಲಾ ಶಿಬಿರಾರ್ಥಿಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳುವ ಮೂಲಕ ಉತ್ತಮ ಪರಿವರ್ತನೆ ಹೊಂದಲು ಇದೊಂದು ಅವಕಾಶವೆಂದು ಭಾವಿಸಿಕೊಳ್ಳುವುದರೊಂದಿಗೆ ಶಿಬಿರದ ಯಶಸ್ಸು ಸಾಧ್ಯ. ಕೇವಲ ವಿದೇಶಿ ಸಂಸ್ಕೃತಿಯಿಂದ ಜಡಗೊಂಡಿರುವ ಈ ಸಂದರ್ಭದಲ್ಲಿ ಸ್ಥಳೀಯ ಪಾರಂಪರಿಕ ಜ್ಞಾನಕೇಂದ್ರಿತ ವಿದ್ಯಾರ್ಜನೆಯ ಮಾರ್ಗಗಳನ್ನು ಮರು ರೂಪಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಈ ಶಿಬಿರವು ಯಶಸ್ವಿಯಾಗಲಿ ಎಂದು ಇಚಲಂಪಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶುಭಕರ ಹೆಗ್ಗಡೆ ಶುಭ ಹಾರೈಸಿದರು.

ಅವರು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ನೇರ್ಲ-ಇಚಲಂಪಾಡಿ ಎಂಬಲ್ಲಿ ಆಯೋಜಿಸಲಾಗಿದ್ದ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಎನ್ಎಸ್ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಇಚಲಂಪಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶುಭಕರ ಹೆಗ್ಗಡೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲ,ರಾಜ್ಯ ಪ್ರಶಸ್ತಿ ವಿಜೇತ ಡಾ.ಜಯಕುಮಾರ್ ಶೆಟ್ಟಿ ಅವರು ರಾಷ್ಟ್ರೀಯ ಸೇವಾ ಯೋಜನೆಯ ಅನುಭವವು ಸಾಮಾಜಿಕ ಜೀವನದ ತೊಡಗುವಿಕೆಯ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಧನಾತ್ಮಕ ಸಂಚಲನವನ್ನು ಉಂಟುಮಾಡುತ್ತದೆ. ಹಾರೆ, ಪಿಕಾಸು ಹಿಡಿದು ಕೆಲಸ ಮಾಡಿದ ಅನುಭವವೇ ಇಲ್ಲದ ಅನೇಕ ವಿದ್ಯಾರ್ಥಿಗಳು ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಶ್ರಮದಾನದ ಮಹತ್ವವನ್ನು ಅನುಭವದ ಮೂಲಕ ಅರಿತುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಗ್ರಾಮದಲ್ಲಿ ಶಾಲೆಯ ಭೌತಿಕ ವಾತಾವರಣದ ಬದಲಾವಣೆಯೊಂದಿಗೆ ಆ ಗ್ರಾಮ,ಶಾಲೆಯ ಹೃದಯವನ್ನು ಗೆಲ್ಲುತ್ತಾರೆ. “ಶಾಲೆಯ ಅಂಗಳವನ್ನು ವಿಸ್ತರಣೆ ಮಾಡುವುದರೊಂದಿಗೆ ಎಲ್ಲರ ಹೃದಯವನ್ನು ಗೆದ್ದು ಹೃದಯಂಗಣವನ್ನು ವಿಸ್ತರಣೆ ಮಾಡುತ್ತಾರೆ” ಇದು ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಪ್ರತಿಫಲ. ಕಾಲೇಜಿನ ನಾಲ್ಕು ಗೋಡೆಗಳ ಮಧ್ಯ ಅಷ್ಟೇ ಅಲ್ಲದೆ ಗ್ರಾಮಕ್ಕೆ ಬಂದು ಆ ಗ್ರಾಮದ ಶಾಲೆಯ ಅಭಿವೃದ್ಧಿಯಲ್ಲಿ ತಮ್ಮ ಶ್ರಮದಾನದ ಹಂಚಿಕೆಯಿಂದ ಗ್ರಾಮೀಣ ಪ್ರದೇಶದ ಸಾಮಾಜಿಕ ಸೇವೆಯ ಭಾಗವಾಗುವುದು ವಿದ್ಯಾರ್ಥಿ ಜೀವನದ ಶ್ರೇಷ್ಠ ಕ್ಷಣಗಳಾಗಿವೆ. ಶಿಬಿರದಲ್ಲಿ ತೊಡಗುವಿಕೆಯಿಂದ ಹಣವನ್ನು ವ್ಯರ್ಥ ಮಾಡದೇ ಸದ್ವಿನಿಯೋಗ ಮಾಡುವ ರೀತಿಯನ್ನು ಕಲಿಯುವುದರ ಜೊತೆಗೆ ಸಾಮಾಜಿಕ ಸೇವೆಯ ಮೂಲಕ ದೊರಕುವ ಪುಣ್ಯದ ಫಲವೇ ಶಾಶ್ವತವಾದದ್ದು ಹಾಗಾಗಿ “ನನಗೆ ಸಂತೋಷ ಬೇಕು” ಎಂದಾದರೆ ಈ ವಾಕ್ಯದಲ್ಲಿರುವ ‘ನನಗೆ’ ಮತ್ತು ‘ಬೇಕು’ ಎನ್ನುವ ಪದಗಳು ಅಳಿಸಿ ಹಾಕಬೇಕು, ಹಾಗಾದಲ್ಲಿ ಖಂಡಿತ ಸಂತೋಷದ ಜೀವನ ನಮ್ಮದಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿರುವ “ನನಗಲ್ಲ ನಿನಗೆ” ಎನ್ನುವ ಘೋಷ ವಾಕ್ಯದ ಸಾರ್ಥಕತೆಯು ಈ ರೀತಿಯಾಗಿ ಫಲಪ್ರದವಾಗುತ್ತದೆ ಎಂದರು.

ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರು, ಈ ಶಿಬಿರದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರು ಆಗಿರುವ ಭಾಸ್ಕರ ಎಸ್. ಗೌಡ ಮಾತನಾಡಿ ಈ ಶಾಲೆಯು ಅಭಿವೃದ್ಧಿ ಹೊಂದುತ್ತಿರುವ ಶಾಲೆ. ಈ ಅಭಿವೃದ್ಧಿಗೆ ಶಾಲೆಯ ಆಡಳಿತ ಮಂಡಳಿಯ ಜೊತೆ ಗ್ರಾಮದ ಎಲ್ಲರ ಸಹಕಾರ ಸದಾ ಜೊತೆಗಿರುತ್ತದೆ. ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಈ ಶಿಬಿರದ ಮೂಲಕ ಈ ಶಾಲೆಯ ಪರಿಸರದ ಉತ್ತಮ ಅಭಿವೃದ್ಧಿಗೆ ಅವಕಾಶ ದೊರೆತಂತಾಗಿದೆ, ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿ ಈ ಶಿಬಿರದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷನಾಗಿ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಏಳು ದಿನಗಳು ಕೂಡ ಎಲ್ಲರೊಂದಿಗೆ ಇದ್ದು ಸಹಕರಿಸಿ ಯಾವುದೇ ತೊಂದರೆಗಳಾಗದೆ ಶಿಬಿರದ ಯಶಸ್ವಿಗೆ ನಾವೆಲ್ಲರೂ ಜೊತೆಯಾಗಿರೋಣ ಮತ್ತು ಶಿಬಿರಾರ್ಥಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಶೈಲಿಯನ್ನು ಗಮನಿಸಿದಾಗ ನಮಗೂ ಸಂತಸದೊಂದಿಗೆ ಸಹಕಾರ ನೀಡಲು ಮನಸ್ಸಾಗಿದೆ. ಹಾಗಾಗಿ ಗ್ರಾಮದ ಎಲ್ಲರ ಸಹಕಾರ ಮತ್ತು ಶಾಲೆಯ ಆಡಳಿತ ಮಂಡಳಿ ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿ ಮತ್ತು ಶಿಬಿರಾರ್ಥಿಗಳ ಸಹಕಾರದಿಂದ ಈ ಯಶಸ್ಸು ಸಾಧ್ಯವಾಗುತ್ತದೆ, ಒಗ್ಗಟ್ಟಿನಿಂದ ಈ ಶಿಬಿರವನ್ನು ಯಶಸ್ವಿಗೊಳಿಸೋಣ ಎಂದರು.

ವಿಶ್ವವಿದ್ಯಾನಿಲಯ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಶ್ರೀಮತಿ ಉಷಾ ಅಂಚನ್ ಅವರು ಮಾತನಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಅನೇಕ ಕಾರ್ಯಕ್ರಮಗಳಲ್ಲಿ ಜೊತೆಯಾಗುವುದರೊಂದಿಗೆ ನಿರಂತರ ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಈ ವಾರ್ಷಿಕ ವಿಶೇಷ ಶಿಬಿರವು ತುಂಬಾ ಮಹತ್ವದ್ದಾಗಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ವ ರೀತಿಯ ಸವಲತ್ತುಗಳೊಂದಿಗೆ ಎನ್ಎಸ್ಎಸ್ ನಂತಹ ಸಾಮಾಜಿಕ ಸೇವಾ ಮನೋಭಾವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಶ್ರೇಷ್ಠ ಮನೋಧರ್ಮವನ್ನು ಹೊಂದುವುದು ಮಹತ್ವದ್ದಾಗಿದೆ. ಭಾರತೀಯ ಸಂಸ್ಕೃತಿಯ ಮಹತ್ವದ ಭಾಗಗಳಲ್ಲಿ ಆತಿಥ್ಯವು ಒಂದು ಶ್ರೇಷ್ಠವಾದ ಸಂಸ್ಕಾರ. ಇಂದಿನ ಯುವ ಸಮುದಾಯಗಳಲ್ಲಿ ಈ ರೀತಿಯ ನಡವಳಿಕೆಗಳನ್ನು ಜೀವಂತವಾಗಿಡಲು ಈ ಶಿಬಿರವು ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಈ ಶಿಬಿರವನ್ನು ಆಯೋಜಿಸಲು ಈ ಶಾಲೆಯ ಎಲ್ಲ ಶಿಕ್ಷಕರು ಹಾಗೂ ಜೊತೆಯಾಗಿ ನಿಂತು ಸಹಕಾರ ನೀಡುತ್ತಿರುವ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಿಗೂ, ಎಲ್ಲ ಗ್ರಾಮಸ್ಥರಿಗೂ ಕೃತಜ್ಞತೆಗಳನ್ನು ತಿಳಿಸುವುದರೊಂದಿಗೆ ಶಿಬಿರದ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಶಿಬಿರವು ಯಶಸ್ವಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಅವರು ಕಳೆದ ಒಂದು ತಿಂಗಳಿನಿಂದ ಶಿಬಿರಕ್ಕೆ ಈ ಶಾಲೆಯ ಆಯ್ಕೆಯಿಂದ ಉದ್ಘಾಟನೆ ಪ್ರಕ್ರಿಯೆಯವರೆಗೆ ಈ ಶಾಲೆಯ ಆಡಳಿತ ಮಂಡಳಿ, ಶಿಬಿರದ ಸ್ವಾಗತ ಸಮಿತಿ, ಕಾಲೇಜಿನ ಉಪನ್ಯಾಸಕರು ಹಾಗೂ ಶಿಬಿರಾರ್ಥಿಗಳ ಪರಿಶ್ರಮ ಬಹಳ ಇದೆ‌. ಎಲ್ಲರ ಸಹಕಾರದಿಂದ ಮಾತ್ರ ಈ ಹಾದಿ ಸುಗಮಗೊಂಡಿದೆ. ಸಹಕಾರ ನೀಡಿದ ಶಾಲೆಯ ಆಡಳಿತ ಮಂಡಳಿ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಿಗೂ ಹಾಗೂ ಸಮಸ್ತ ಗ್ರಾಮಸ್ಥರಿಗೆ ಕೃತಜ್ಞತೆಗಳನ್ನು ತಿಳಿಸುತ್ತಾ ವಿಶ್ವವಿದ್ಯಾನಿಲಯ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಈ ಶಿಬಿರವು ಮಹತ್ವದ ಪಾತ್ರವಹಿಸುತ್ತದೆ. ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಈ ಭಾಗದ ಎಲ್ಲಾ ಗ್ರಾಮಗಳು, ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು ಸಹಕಾರ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಹಾಗಾಗಿ ನಿಮ್ಮೆಲ್ಲರ ಸಹಕಾರದಿಂದ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ಇಂತಹ ಕಾರ್ಯಕ್ರಮಗಳಲ್ಲಿ ಈ ಶಿಬಿರವು ಮಹತ್ವದ್ದಾಗಿದ್ದು ಎಲ್ಲರೂ ಸೇರಿ ಯಶಸ್ವಿಗೊಳಿಸಲು ಅಣಿಯಾಗಿರುವುದಕ್ಕೆ ಸಂತೋಷವಾಗಿದೆ ಎಂದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ್ ಬಿಜೇರು ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್ಲಾ ವಿದ್ಯಾರ್ಥಿಗಳಲ್ಲಿ ಹಾಗೂ ನಮ್ಮೆಲ್ಲರಲ್ಲಿ ಈ ಸಾಮೂಹಿಕ ಕಾರ್ಯ ಚಟುವಟಿಕೆಗಳ ಮೂಲಕ ಧನಾತ್ಮಕವಾದ ಪರಿವರ್ತನೆ ವಿಸ್ತರಿಸಲಿ ಎಂದು ಶುಭ ಹಾರೈಸಿದರು. ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಶ್ರೀಮತಿ ಜಯಶ್ರೀ ಅವರು ಶಿಬಿರಾರ್ಥಿಗಳಿಗೆ ಶುಭ ಸಂದೇಶ ನೀಡುವ ಮೂಲಕ ಶುಭ ಹಾರೈಸಿದರು.

ಶಿಬಿರಾಧಿಕಾರಿ ಶ್ರೀಮತಿ ಶ್ರುತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಶ್ರೀಮತಿ ಚಂದ್ರಕಲಾ ಬಿ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ದಿವ್ಯಶ್ರೀ ಜಿ. ಹಾಗೂ ಶ್ರೀಮತಿ ಪಾವನ.ರೈ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷರಾದ ಶ್ರೀಮತಿ ನಂದಕುಮಾರಿ, ಸದಸ್ಯರಾದ ಶ್ರೀಮತಿ ಮಮತಾ, ಶ್ರೀಮತಿ ಅಕ್ಷತಾ, ಶ್ರೀಮತಿ ವಾಣಿ, ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರು, ವಿಶ್ವವಿದ್ಯಾನಿಲಯ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಶಿಬಿರಾರ್ಥಿಗಳು, ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

error: Content is protected !!