ಉಜಿರೆ: ಪ್ರಾಣಿಗಳ ದಾಹ ತಣಿಸುವ ‘ರಂಗಶಿವ’

ಶೇರ್ ಮಾಡಿ

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರೇರಣೆ, ಹೇಮಾವತಿ ವೀ.ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ರಂಗಶಿವಕಲಾ ಬಳಗವು ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡುತ್ತಿದೆ.

ರಜೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ, ನಾಟಕ, ಯಕ್ಷಗಾನ ಪ್ರದರ್ಶನದ ಮೂಲಕವೂ ರಂಜಿಸುತ್ತಿದೆ. ಕಲಾ ಬಳಗದ ಸದಸ್ಯರು ಪ್ರಾಣಿ, ಪಕ್ಷಿಗಳ ದಾಹ ತೀರಿಸಲು ಮುಂದಾಗಿದ್ದು, ಈ ಸೇವಾ ಕಾರ್ಯವನ್ನು ಧರ್ಮಸ್ಥಳದಲ್ಲಿ ಅನುಷ್ಠಾನಗೊಳಿಸಿದ್ದಾರೆ.

ಧರ್ಮಸ್ಥಳದಲ್ಲಿರುವ ಶಾಲೆ, ಉದ್ಯಾನ, ಹೆಲಿಪ್ಯಾಡ್, ಹಲವು ಮನೆಗಳಲ್ಲಿ ಪ್ರಾಣಿ–ಪಕ್ಷಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಸುಮಾರು ನೂರು ಕಡೆ ಮಡಕೆಗಳಲ್ಲಿ ನೀರು ಇಡಲಾಗಿದೆ. ಪಕ್ಷಿಗಳಿಗೆ ಮರಗಳಲ್ಲಿ ಹಾಗೂ ನಾಯಿ, ಮಂಗಗಳಿಗೆ ನೆಲದ ಮೇಲೆ ಮಣ್ಣಿನ ಪಾತ್ರೆಗಳಲ್ಲಿ ನೀರನ್ನು ಇಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಪರಿಶೀಲಿಸಿ, ನೀರು ಖಾಲಿಯಾಗಿದ್ದರೆ ಮತ್ತೆ ತುಂಬಿಸಿ ಇಡಲಾಗುತ್ತದೆ. ರಂಗಶಿವ ಕಲಾಬಳಗದ ಅಧ್ಯಕ್ಷ ರಾಜೇಂದ್ರ ದಾಸ್, ಸುನಿಲ್ ಕಲ್ಕೊಪ್ಪ, ಹರ್ಷಜೈನ್, ನಿತಿನ್ ಗಾಣಿಗ, ಯುಗಂಧರ್, ಸಂದೇಶ್, ಬದ್ರಿನಾಥ್, ರಂಜಿತ್ ಈ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

ಈ ಕಾರ್ಯದಿಂದ ಪ್ರೇರಿತರಾದ ಹಲವು ಮಕ್ಕಳೂ ಮನೆಗಳಲ್ಲಿ ಹಾಗೂ ಮನೆಯ ಪರಿಸರದಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರೂ ಈ ಸೇವಾಕಾರ್ಯ ಅನುಷ್ಠಾನಗೊಳಿಸಲು ನಿರ್ಧರಿಸಿದ್ದಾರೆ. ಧರ್ಮಸ್ಥಳದ ತೋಟಗಾರಿಕಾ ವಿಭಾಗ ಬಿದಿರಿನ ಹೋಳುಗಳನ್ನು ರೂಪಿಸುತ್ತಿದ್ದು, ಇರದಲ್ಲಿಯೂ ನೀರು ತುಂಬಿಸಿ ಇಡಲು ಉದ್ದೇಶಿಸಲಾಗಿದೆ.

Leave a Reply

error: Content is protected !!