ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜುನಲ್ಲಿ ಅಂಬೇಡ್ಕರ್ ಜನ್ಮದಿನಾಚರಣೆ

ಶೇರ್ ಮಾಡಿ

ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಡಾ.ಅಂಬೇಡ್ಕರ್ ಅವರ 133ನೆ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸಚಿನ್ ಎನ್.ಟಿ ಅವರು ಮಾತನಾಡಿ ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದಿಂದ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೆಡ್ ಪದವಿ ಪಡೆದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಂತರರಾಷ್ಟ್ರೀಯ ಅರ್ಥಶಾಸ್ತ್ರಜ್ಞರಾಗಿ ಮಹತ್ವದ ಸಂಶೋಧನಾತ್ಮಕ ಅಧ್ಯಯನಗಳಿಂದ ಅರ್ಥಶಾಸ್ತ್ರ ಕ್ಷೇತ್ರಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ. ಇವರ ಸಂಶೋಧನಾತ್ಮಕ ಕೃತಿ “ಮ್ಯಾನೇಜ್ಮೆಂಟ್ ಆಫ್ ರೂಪೀ” ಯಲ್ಲಿ ಚಿನ್ನದ ಪರಿಮಿತಿ ಇಲ್ಲದೆ ಯಾವುದೇ ದೇಶಗಳು ಹಣವನ್ನು ಮುದ್ರಿಸಬಾರದು, ಚಿನ್ನದ ಪರಿಮಿತಿಯೊಳಗಿನ ಕರೆನ್ಸಿ ಮುದ್ರಣ ಮತ್ತು ಅದರ ಮಹತ್ವವನ್ನು ತಿಳಿಸಿದ್ದು, ಭಾರತದ ಸಾರ್ವಜನಿಕ ಹಣಕಾಸು ವಲಯವು ಇವರ ಸಂಶೋಧನಾ ವರದಿಯ ನಿಯಮಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಲ್ಲಿ ಮತ್ತು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಸುಧಾರಣೆಗಳಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಅಂಬೇಡ್ಕರ್ ಅವರ ಕಾರ್ಯಕ್ಷೇತ್ರಗಳ ಹರವು ವಿಶಾಲವಾಗಿದ್ದು ಅವರ ಜೀವನದ ಸಮಗ್ರ ಅವಲೋಕನದ ದೃಷ್ಟಿಕೋನದಿಂದ ಅವರ ಶ್ರೇಷ್ಠ ಸಾಧನೆಗಳನ್ನು ಅರಿತುಕೊಳ್ಳಲು ಸಾಧ್ಯ ಎಂದರು.

ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ನೂರಂದಪ್ಪ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಆನಂದ್ ಕೆ.ಪಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ವೆರೊಣಿಕಾ ಪ್ರಭಾ ವಂದಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

error: Content is protected !!