![](https://i0.wp.com/nesaranewsworld.com/wp-content/uploads/2024/05/02KN-Udane-scaled.jpeg?resize=1110%2C411&ssl=1)
ಉದನೆ: ಸಹ್ಯಾದ್ರಿಯ ತಪ್ಪಲು ಪ್ರದೇಶದ ಕರಾವಳಿ ತೀರದ ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ ಎಂಬ ಸುಂದರ ಗ್ರಾಮ. ರಾಜ್ಯ ರಾಜಧಾನಿಯಾದ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮಗ್ಗುಲಲ್ಲಿ ಕಾಣುವ ಚಿಕ್ಕ ಸುಂದರ ಪ್ರದೇಶವೇ ಉದನೆ. ಇಲ್ಲಿ ರಾರಾಜಿಸುವ ಭವ್ಯವಾದ ದೇವಾಲವೇ ಸಂತ ತೋಮಸರ ದೇವಾಲಯ. ಈ ದೇವಾಲಯವು ಇಂದು ಕೇವಲ ಕ್ರೈಸ್ತ ವಿಶ್ವಾಸಿಗಳ ಆಶಾಕೇಂದ್ರವಾಗಿರದೆ ಈ ಹೆದ್ದಾರಿ ಮಾರ್ಗವಾಗಿ ಸಂಚರಿಸುವ ಸಾವಿರಾರು ಭಕ್ತರ ಆಶಾಕೇಂದ್ರವಾಗಿದೆ.
ಇತಿಹಾಸ:
1947 ರಿಂದ 55ರ ಒಳಗೆ ಸುಮಾರು 60 ಕುಟುಂಬಗಳು ಶಿರಾಡಿಯ ವಿವಿಧ ಭಾಗಗಳಲ್ಲಿ ಬಂದು ನೆಲೆಗೊಂಡರು. ಆರಂಭದಲ್ಲಿ ಇವರ ಪೂರ್ವಜರು ಬಡತನದಲ್ಲಿದ್ದರು, ಅವರ ಮುಂದಿನ ತಲೆಮಾರುಗಳು ಹತ್ತು ಹಲವು ಆಯಾಮಗಳಲ್ಲಿ ಬೆಳೆದು, ಶೈಕ್ಷಣಿಕವಾಗಿ, ಭೌತಿಕವಾಗಿ, ಆಧ್ಯಾತ್ಮಿಕವಾಗಿ, ಸಾಂಸ್ಕಾರಿಕವಾಗಿ ಹಾಗೂ ನಾಡಿನ ಅಭಿವೃದ್ಧಿಗಾಗಿ ಹಲವು ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಠಿಣ ಪರಿಶ್ರಮಿಗಳಾದ ಪೂರ್ವಜರು ನಿಸ್ವಾರ್ಥ ಪ್ರಯತ್ನದಿಂದ ಸಂತ ತೋಮಸರ ಅನುಯಾಯಿಗಳೆಂದು ಕರೆಯಲ್ಪಡುವ ಈ ಮಾರ್ ತೋಮಾ ಕ್ರೈಸ್ತರು ಇಂದು ಆರ್ಥಿಕವಾಗಿ ಸದೃಢರಾಗಿದ್ದಾರೆ.
ದಿವ್ಯ ಬಲಿ ಪೂಜೆಗೆ ಕೊಕ್ಕಡ ಸಂತ ಜೋನರ ಚರ್ಚಿಗೆ ಕಾಲ್ನಡಿಗೆ:
ಆರಂಭ ಕಾಲದಲ್ಲಿ ಈ ಜನರು ತಮ್ಮ ಪ್ರಾರ್ಥನಾ ಅವಶ್ಯಕತೆಗಳಿಗಾಗಿ ಮುಳಿಹುಲ್ಲಿನ ಚಾವಣಿಯ ದೇವಾಲಯವನ್ನು ನಿರ್ಮಿಸಿದ್ದರು. ದಿವ್ಯ ಬಲಿ ಪೂಜೆಗೆ ಕೊಕ್ಕಡ ಸಂತ ಜೋನರ ಚರ್ಚಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಕಾಲಕ್ರಮೇಣ ಕೊಕ್ಕಡದ ಧರ್ಮ ಗುರುಗಳು ಉದನೆಗೆ ಬಂದು ಪೂಜಾ ವಿಧಿಗಳನ್ನು ನೆರವೇರಿಸಿದ್ದರು. ಕ್ರಮೇಣ ಈ ದೇವಾಲಯ ಹಂತ ಹಂತವಾಗಿ ಬೆಳೆದು ಬಂದು ಇದೀಗ ಐದನೇ ಹಂತದಲ್ಲಿ ಸುಸಜ್ಜಿತ ಭವ್ಯ ದೇವಾಲಯವಾಗಿ ಉದನೆ ಮುಕುಟಮಣಿಯಂತೆ ರಾರಾಜಿಸುತ್ತಾ ಇಂದು ಉದ್ಘಾಟನೆಗೆ ಸಜ್ಜಾಗಿದೆ.
ಬೆಳ್ತಂಗಡಿ ಧರ್ಮಪಾಂತ್ಯ ಅಧೀನದಲ್ಲಿ:
ಈ ದೇವಾಲಯವು ಬೆಳ್ತಂಗಡಿ ಧರ್ಮಪಾಂತ್ಯ ಅಧೀನದಲ್ಲಿ ಇದೆ. ಪ್ರಭು ಯೇಸುಕ್ರಿಸ್ತರ ಕೃಪಾಶೀರ್ವಾದದಿಂದಲೂ ಸಂತ ತೋಮಸರ ಮಧ್ಯಸ್ಥಿಕೆಯಿಂದಲೂ ಹಾಗೂ ಉದಾರ ದಾನಿಗಳ ಸಹಕಾರದಿಂದಲೂ ಉದನೆಯಲ್ಲಿ ನವೀಕರಣಗೊಳ್ಳುತ್ತಿರುವ ಚರ್ಚಿನ ಜೀರ್ಣೋದ್ಧಾರ ಕಾರ್ಯವು ಪೂರ್ಣಗೊಂಡಿದೆ.
ಮೇ.4 ಶನಿವಾರದಂದು ಅಪರಾಹ್ನ ಗಂಟೆ 3:30ಕ್ಕೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರಾದ ಪರಮಪೂಜ್ಯ ಮಾರ್ ಲಾರೆನ್ಸ್ ಮುಕ್ಕುಯಿ ಇವರ ಯಾಜಕತ್ವದಲ್ಲಿ ನವನಿರ್ಮಿತ ದೇವಾಲಯದ ಉದ್ಘಾಟನೆ, ದೇವಾಲಯದ ಪವಿತ್ರೀಕರಣ, ದೇವಾಲಯ ಪ್ರತಿಷ್ಠಾಪನೆ, ವಿಜೃಂಭಣೆಯ ದಿವ್ಯ ಬಲಿಪೂಜೆ, ಸಭಾ ಕಾರ್ಯಕ್ರಮ, ಸಹಭೋಜನ ಗಾನ ಮೇಳ. ಮೇ.5ರಂದು ಭಾನುವಾರ ಸಂಜೆ 4ರಿಂದ ಧರ್ಮ ಗುರುಗಳ ನೇತೃತ್ವದಲ್ಲಿ ವಿಜೃಂಭಣೆಯ ದಿವ್ಯ ಬಲಿ ಪೂಜೆ, ಲದೀಞï ಹಾಗೂ ಭವ್ಯ ಮೆರವಣಿಗೆ, ಸಹಭೋಜನ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿರುವುದು.
– ಫಾ.ಸಿಬಿ ತೋಮಸ್ ಪನಚ್ಚಿಕ್ಕಲ್, ಚರ್ಚಿನ ಧರ್ಮ ಗುರುಗಳು
ಈ ದೇವಾಲಯದ ಇಂದಿನ ಬೆಳವಣಿಗೆಯ ಬಗ್ಗೆ ಹೇಳುವಾಗ ಯೇಸು ಸ್ವಾಮಿಯ ಕೃಪಾ ಕಟಾಕ್ಷ ಹಾಗೂ ನಮ್ಮ ಮಾರ್ಗದರ್ಶಕರಾದ ಸಂತತೋಮಸರ ಆಶೀರ್ವಾದವೂ, ದೈವೀಕ ಕರಸ್ಪರ್ಶವು ಸೀರೋ ಮಲಬಾರ್ ಮಕ್ಕಳ ಮೇಲೆ ಇತ್ತು ಎಂಬುದಕ್ಕೆ ಈ ದೇವಾಲಯವೇ ಸಾಕ್ಷಿ.
-ಎಲಿಜಬೆತ್ ತೋಮಸ್ ಎಂಬ್ರಾಂಡಿವಯಲಿಲ್, ಚರ್ಚಿನ ಸ್ಮರಣ ಸಂಚಿಕೆಯ ಸಂಪಾದಕಿ ಹಾಗೂ ಕಾರ್ಯದರ್ಶಿ
ಯೇಸು ಸ್ವಾಮಿಯ ಬೋಧನೆಯಂತೆ ತನ್ನಂತೆಯೇ ಪರರನ್ನು ಪ್ರೀತಿಸುವ ಹಾಗೂ ಕಷ್ಟದಲ್ಲಿ ಇರುವವರಿಗೆ ರೋಗಿಗಳಿಗೆ, ಅಶಕ್ತರಿಗೆ, ಸಮಾಜದಲ್ಲಿ ಹಿಂದುಳಿದವರಿಗೆ, ದೀನ ದಲಿತರಿಗೆ ತಮ್ಮಿಂದಾದಷ್ಟು ಸಹಾಯವನ್ನು ಮಾಡಲು ಈ ಜನತೆ ಸದಾ ಸಿದ್ಧರು, ಎಲ್ಲಕ್ಕಿಂತ ಮಿಗಿಲಾಗಿ ಈ ಊರಿನ ಎಲ್ಲಾ ಜನರೊಂದಿಗೂ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ.
– ಎ.ಕೆ.ವರ್ಗೀಸ್, ಚರ್ಚಿನ ಸದಸ್ಯ
![](https://i0.wp.com/nesaranewsworld.com/wp-content/uploads/2024/04/VC_PUC_Webnews_Poster_8x10.jpg?resize=819%2C1024&ssl=1)
![](https://i0.wp.com/nesaranewsworld.com/wp-content/uploads/2024/04/WhatsApp-Image-2023-06-19-at-2.49.48-PM-3.jpeg?resize=723%2C1024&ssl=1)
![](https://i0.wp.com/nesaranewsworld.com/wp-content/uploads/2024/01/WhatsApp-Image-2023-09-29-at-10.07.05.jpg?resize=724%2C1024&ssl=1)
![](https://i0.wp.com/nesaranewsworld.com/wp-content/uploads/2024/01/WhatsApp-Image-2024-01-20-at-2.32.04-PM-1.jpeg?resize=712%2C1024&ssl=1)
![](https://i0.wp.com/nesaranewsworld.com/wp-content/uploads/2024/02/muliya.jpg?resize=949%2C588&ssl=1)