ತಂದೆಯ ಮರಣದ ಚಿಂತೆ-ಗೋಳಿತ್ತೊಟ್ಟು ಅನಾಲುನ ಯುವಕ ನೇಣಿಗೆ ಶರಣು

ಶೇರ್ ಮಾಡಿ

ನೆಲ್ಯಾಡಿ: ಮೂರು ವರ್ಷದ ಹಿಂದೆ ನಡೆದ ತಂದೆಯ ಮರಣದ ಚಿಂತೆಯಲ್ಲಿದ್ದ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಳಿತ್ತೊಟ್ಟು ಗ್ರಾಮದ ಅನಾಲು ಎಂಬಲ್ಲಿ ಮೇ.5ರಂದು ಮುಂಜಾನೆ ನಡೆದಿದೆ.

ಗೋಳಿತ್ತೊಟ್ಟು ಗ್ರಾಮದ ಅನಾಲು ನಿವಾಸಿ ದಿ.ವಾಸಪ್ಪ ಗೌಡರವರ ಪುತ್ರ ಶ್ರೀಹರ್ಷ ಗೌಡ(21ವ.)ಆತ್ಮಹತ್ಯೆ ಮಾಡಿಕೊಂಡವರು.

ಈತ ಮೇ.4ರಂದು ರಾತ್ರಿ ಮನೆ ಸಮೀಪ ಚಿಕ್ಕಪ್ಪ ಶೀನಪ್ಪ ಗೌಡರವರ ಮಗಳ ಮದುವೆ ಔತಣ ಕೂಟವಿದ್ದ ಹಿನ್ನೆಲೆಯಲ್ಲಿ ಸಂಜೆಯ ತನಕ ಅಲ್ಲಿ ಕೆಲಸ ಮಾಡಿ ವಾಪಾಸು ಮನೆಗೆ ಬಂದು ಗೋಳಿತೊಟ್ಟುವಿಗೆ ಹೋಗಿ ಹಂದಿಗೆ ಹಾಕಲು ವೆಸ್ಟೇಜ್‌ನ್ನು ಅಲ್ಲಿಂದ ಮನೆಗೆ ತಂದು ಜೌತಣ ಕೂಟಕ್ಕೆ ಹೋಗದೇ ಮನೆಯಲ್ಲಿಯೇ ಇದ್ದರು. ಈತನ ಸಹೋದರ ಹರ್ಷ ಮೇ.5ರಂದು ಬೆಳಗ್ಗಿನ ಜಾವ 2.30 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಹಂಚು ಛಾವಣಿಯ ಮನೆಯ ಮಾಡಿಗೆ ಶ್ರೀಹರ್ಷನು ನೈಲಾನ್ ಹಗ್ಗದಿಂದ ನೇಣು ಬಿಗಿದು ನೇತಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ನೈಲಾನ್ ಹಗ್ಗವನ್ನು ತುಂಡರಿಸಿ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಶ್ರೀಹರ್ಷನು ಬೆಳಿಗ್ಗೆ 3.30ಗಂಟೆಗೆ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತನ ತಂದೆ 3 ವರ್ಷದ ಹಿಂದೆ ಮೃತಪಟ್ಟಿದ್ದು ಅಂದಿನಿಂದ ತಂದೆಯವರ ಮರಣದ ಬಗ್ಗೆ ಚಿಂತೆಯಲ್ಲಿದ್ದವನು ಮನನೊಂದು ಮೇ.4 ರಂದು ರಾತ್ರಿ8-00 ಗಂಟೆಯಿಂದ ಮೇ.05ರಂದು ಬೆಳಗ್ಗೆ 02-30 ಗಂಟೆಯ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಣ್ಣ ಹರ್ಷಿತ್ ಗೌಡ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಮೃತ ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.

Leave a Reply

error: Content is protected !!