ಪೋಕ್ಸೋ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಬಂಧನವಾಗಲಿದೆ. ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ. ಸಿಟಿ ಸಿವಿಲ್ ಕೋರ್ಟ್ ಒಂದನೇ ತ್ವರಿತಗತಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಅನ್ನು ಜಾರಿಗೊಳಿಸಿದೆ.
ಯಡಿಯೂರಪ್ಪ ವಿರುದ್ಧ ಬಂಧನ ವಾರೆಂಟ್ ಕೋರಿ ಸಿಐಡಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು.
ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಪುತ್ರಿಗೆ ಯಡಿಯೂರಪ್ಪನವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಇದೇ ವರ್ಷ ಮಾರ್ಚ್ 14ರಂದು ಕೇಸ್ ದಾಖಲಿಸಿದ್ದರು. ಆ ಮಹಿಳೆಯು ಮೇ 26ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈಗ ಸಂತ್ರಸ್ತೆಯ ಸೋದರ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಹೈಕೋರ್ಟ್ ಮೊರೆ ಹೋಗಿದ್ದ ಸಂತ್ರಸ್ತೆಯ ಸೋದರ
ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿಯಾಗುತ್ತಿಲ್ಲ ಎಂದು ಎಂದು ಸಂತ್ರಸ್ತೆಯ ಅಣ್ಣ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಹಿರಿಯ ವಕೀಲ ಬಾಲನ್ ಅವರ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಇದುವರೆಗೆ ಯಾವುದೇ ಪ್ರಗತಿ ಆಗಿಲ್ಲ, ಪಂಚನಾಮೆ, ಸಾಕ್ಷ್ಯ ಸಂಗ್ರಹ ಮಾಡಿಲ್ಲ. ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸಲು ಪೊಲೀಸ್ ಆಯುಕ್ತರು ಹಾಗೂ ಸಿಐಡಿ ಇನ್ಸ್ಪೆಕ್ಟರ್ ಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಮಾರ್ಚ್ 14 ರಂದು ದೂರು ನೀಡಲಾಗಿದೆ. ಬಿಎಸ್ ವೈ ಜೊತೆ ಮಾತನಾಡಿದ ವಿಡಿಯೋ ರೆಕಾರ್ಡಿಂಗ್ ಇದೆ. ಎಸಿಎಂಎಂ 25ರ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ 164 ಅಡಿ ಹೇಳಿಕೆ ದಾಖಲಿಸಿದ್ದಾರೆ. ಸಂತ್ರಸ್ತೆ ತಾಯಿಯಿಂದ ಮಹಿಳಾ ಆಯೋಗದ ಅಧ್ಯಕ್ಷರಿಗೆ, ಎಡಿಜಿಪಿಗೆ ಪತ್ರ ಬರೆಯಲಾಗಿದೆ. ಆದರೂ ಪ್ರಕರಣದಲ್ಲಿ ಈವರೆಗೂ ಯಾವುದೇ ಪ್ರಗತಿಯಾಗಿಲ್ಲ. ಸಿಐಡಿ ಈವರೆಗೂ ಯಾವುದೇ ಪಂಚನಾಮೆ ಮಾಡಿಲ್ಲ, ಸಾಕ್ಷ್ಯ ಸಂಗ್ರಹಿಸಿಲ್ಲ. ದಾಖಲೆ ಸೀಜ್ ಮಾಡಿಲ್ಲ, ಪೊಕ್ಸೋ ಕಾಯ್ದೆಯಡಿ ನೋಟಿಸ್ ನೀಡಿಲ್ಲ. ಬಿಎಸ್ ವೈ ಬಂಧಿಸಿ ವಿಚಾರಣೆ ನಡೆಸಿ ಸತ್ಯಾಂಶ ಬಯಲಿಗೆ ತರಬೇಕು. ಸಿಸಿಟಿವಿ , ಮೆಮೊರಿ ಕಾರ್ಡ್, ಹಾರ್ಡ್ ಡಿಸ್ಕ್ ಗಳನ್ನ ಸೀಜ್ ಮಾಡಬೇಕು. ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸಲು ಸೂಚಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು.
ಕಾಲಾವಕಾಶ ಕೋರಿದ್ದ ಬಿಎಸ್ವೈ
ಇನ್ನು ವಿಚಾರಣೆಗೆ ಕಾಲಾವಕಾಶ ಕೋರಿ ಸಿಐಡಿಗೆ ಬಿಎಸ್ ವೈ ಪತ್ರ ಬರೆದಿದ್ದರು. ಜೂನ್ 17ನೇ ತಾರೀಖು ವಿಚಾರಣೆಗೆ ಹಾಜರಾಗುವುದಾಗಿ ಪತ್ರದಲ್ಲಿ ತಿಳಿಸಿದ್ದರು. ಪ್ರವಾಸ ನಿಮಿತ್ತ ಹೊರಗಡೆ ಇದ್ದೇನೆ. ಜೂನ್ 17ನೇ ತಾರೀಖು ಖುದ್ದು ಹಾಜರಾಗ್ತೀನಿ ಎಂದು ಹೇಳಿದ್ದರು.