
ಮಂಗಳೂರು: ಠಾಣೆಯಿಂದ ಸ್ಕೂಟರ್ ಬಿಡುಗಡೆಗೊಳಿಸಲು ಲಂಚ ಪಡೆದ ಆರೋಪದ ಮೇಲೆ ನಗರದ ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಷರೀಫ್ ಹಾಗೂ ಸಿಬ್ಬಂದಿ ಪ್ರವೀಣ್ ನಾಯ್ಕನನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಪೊಲೀಸರ ವಶದಲ್ಲಿದ್ದ ಸ್ಕೂಟರ್ ಬಿಡುಗಡೆಗೊಳಿಸಲು ನ್ಯಾಯಾಲಯವು ಆದೇಶ ಮಾಡಿತ್ತು. ಈ ಸಲುವಾಗಿ ದೂರುದಾರರು ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಷರೀಫ್ ಅವರನ್ನು ಭೇಟಿ ಮಾಡಿದ್ದರು. ಸ್ಕೂಟರ್ ಬಿಡುಗಡೆಗೊಳಿಸಲು ₹ 5ಸಾವಿರ ಲಂಚ ನೀಡುವಂತೆ ಷರೀಫ್ ಬೇಡಿಕೆ ಇಟ್ಟಿದ್ದರು. ಮೊತ್ತವನ್ನು ಕಡಿಮೆ ಮಾಡುವಂತೆ ಕೋರಿದಾಗ ಠಾಣಾ ಬರಹಗಾರರಾದ ನಾಗರತ್ನ ಅವರನ್ನು ಭೇಟಿ ಮಾಡಲು ತಿಳಿಸಿದ್ದರು. ಆಕೆಯ ಬಳಿ ಹೋದಾಗ, ಅವಾಚ್ಯವಾಗಿ ಬೈದು ₹ 3 ಸಾವಿರ ಲಂಚ ನೀಡುವಂತೆ ಹೇಳಿದ್ದರು. ಲಂಚ ನೀಡಲು ಮನಸ್ಸಿಲ್ಲದ ಕಾರಣ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಲೋಕಾಯುಕ್ತ ಪೊಲೀಸರರು ತಿಳಿಸಿದ್ದಾರೆ.
‘ದೂರುದಾರ ವ್ಯಕ್ತಿಯಿಂದ ಸೋಮವಾರ ₹ 3 ಸಾವಿರವನ್ನು ಪಡೆದ ತಕ್ಷಣ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ’ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ (ಪ್ರಭಾರ ) ನಂದಿನಿ ಬಿ.ಎನ್, ಡಿವೈಎಸ್ಪಿ ಗಾನ ಪಿ.ಕುಮಾರ್, ಇನ್ಸ್ಪೆಕ್ಟರ್ ಅಮಾನುಲ್ಲಾ.ಎ, ಚಂದ್ರಶೇಖರ್ ಕೆ.ಎನ್. ಮತ್ತು ಉಡುಪಿ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.






