

ವಿಟ್ಲ: ದೂರು ನೀಡಲು ಬಂದ ವೃದ್ಧರೊಬ್ಬರ ಮೇಲೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ನಾಯಿ ದಾಳಿ ನಡೆಸಿದ ಘಟನೆ ವಿಟ್ಲದಲ್ಲಿ ನಡೆದಿದೆ.
ಕರೋಪಾಡಿ ಗ್ರಾಮದ ಲಕ್ಷ್ಮಣ ಎಂಬವರು ಪೊಲೀಸ್ ಠಾಣೆಗೆ ಯಾವುದೋ ವಿಚಾರಕ್ಕೆ ದೂರು ನೀಡಲು ಬಂದಿದ್ದ ವೇಳೆ, ಠಾಣೆಯ ಮುಂಭಾಗದಲ್ಲಿ ಹತ್ತಿರವಿದ್ದ ಸಾಕು ನಾಯಿ ಅವರ ಮೇಲೆ ಏಕಾಏಕಿ ದಾಳಿ ಮಾಡಿದೆ. ನಾಯಿ ಅವರ ಕಾಲಿನ ಮೂರು ಕಡೆ ಕಚ್ಚಿ ಗಾಯಗೊಳಿಸಿದ್ದು, ತಕ್ಷಣವೇ ಅವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ಸ್ಥಳೀಯರ ಪ್ರಕಾರ, ಈ ನಾಯಿ ಹಲವು ಸಮಯಗಳಿಂದ ಠಾಣಾ ಆವರಣದಲ್ಲಿ ಓಡಾಡುತ್ತಿದ್ದು, ಕೆಲ ದಿನಗಳ ಹಿಂದೆ ಮತ್ತೊಬ್ಬ ನಾಗರಿಕನ ಮೇಲೆ ಸಹ ದಾಳಿ ನಡೆಸಿತ್ತು. ಈ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.






