

ಕೊಕ್ಕಡ: ಶಿಶಿಲ ಗ್ರಾಮಕ್ಕೆ ಕಳೆದ ಐದು ದಶಕಗಳಿಂದ ಸೇವೆ ನೀಡುತ್ತಿದ್ದ ಮಂಗಳೂರು–ಶಿಶಿಲ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಇತ್ತೀಚೆಗೆ ಸ್ಥಗಿತಗೊಂಡಿದ್ದು, ಇದನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತೆ ಆರಂಭಿಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಶಿಶಿಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಧೀನ್ ಡಿ ಅವರು ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ ಘಟಕಕ್ಕೆ ಪತ್ರವೊಂದನ್ನು ರವಾನಿಸಿದ್ದಾರೆ. ಪ್ರತಿ ದಿನ ಸಂಜೆ 3 ಗಂಟೆಗೆ ಮಂಗಳೂರಿನಿಂದ ಹೊರಡುವ ಬಸ್ ಬಿ.ಸಿ.ರೋಡ್, ಉಪ್ಪಿನಂಗಡಿ, ನೆಲ್ಯಾಡಿ, ಕೊಕ್ಕಡ ಮಾರ್ಗವಾಗಿ ಶಿಶಿಲ ತಲುಪುತ್ತಿತ್ತು. ರಾತ್ರಿ ಅಲ್ಲಿ ತಂಗುತ್ತಿದ್ದ ಈ ಬಸ್ ಮರುದಿನ ಬೆಳಿಗ್ಗೆ 6.45ಕ್ಕೆ ಶಿಶಿಲದಿಂದ ಹೊರಟು ಬೆಳಿಗ್ಗೆ 10 ಗಂಟೆಗೆ ಮಂಗಳೂರು ತಲುಪುತ್ತಿತ್ತು. ನಂತರ 10.30 ಕ್ಕೆ ಮಂಗಳೂರಿನಿಂದ ಮರುಹೋಗಿ, ಮಧ್ಯಾಹ್ನ 2 ಗಂಟೆಗೆ ಶಿಶಿಲ ತಲುಪುತ್ತಿತ್ತು. ಅಲ್ಲಿಂದ ಮತ್ತೆ 2.45 ಕ್ಕೆ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಈ ಬಸ್ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ನಂಬಿಕೆಯ ಸಾರಿಗೆವಾಗಿತ್ತು.
ಇದು ಶಿಶಿಲ ಸೇರಿದಂತೆ ಹಲವಾರು ದ.ಕ.ಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಏಕೈಕ ಸರ್ಕಾರಿ ಸಾರಿಗೆ ಬಸ್ ಆಗಿದ್ದು, ಇದರ ಬದಲಿಗೆ ಯಾವುದೇ ಬಸ್ ಇಲ್ಲದ ಹಿನ್ನೆಲೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಅನುಕೂಲತೆಗಾಗಿ ಶೀಘ್ರದಲ್ಲೇ ಈ ಸೇವೆ ಪುನರಾರಂಭವಾಗಬೇಕೆಂಬ ಬೇಡಿಕೆಯನ್ನು ಪಂಚಾಯತಿ ಅಧ್ಯಕ್ಷರು ಮಾಡಿದ್ದು, ಗ್ರಾಮಸ್ಥರಲ್ಲಿ ಈ ಪತ್ರದ ಬಗ್ಗೆ ಆಶಾಭಾವನೆ ಮೂಡಿಸಿದೆ.












