

ಕಡಬ: ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಮತಯಂತ್ರದ (EVM) ಮೂಲಕ ನೂತನ ವಿಧಾನದಲ್ಲಿ ನಡೆಯಿತು.
ಚುನಾವಣಾ ಪ್ರಕ್ರಿಯೆಯನ್ನು ನೆಲ್ಯಾಡಿ ಬೆಥನಿ ಐಟಿಐ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕರಾದ ಸುನಿಲ್ ಜೋಸೆಫ್ ಮಾರ್ಗದರ್ಶನದೊಂದಿಗೆ ನಡೆಸಲಾಯಿತು. ವಿದ್ಯಾರ್ಥಿಗಳಲ್ಲಿ ಪ್ರಜ್ಞೆ ಮತ್ತು ಪ್ರಾಮಾಣಿಕ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕ್ರಮ ಎತ್ತಿಗೈಯ್ಯಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಮರಿಯ ಲೂಯಿಸಾ ವಹಿಸಿದ್ದರು. ಚುನಾವಣಾಧಿಕಾರಿಯಾಗಿ ಕುಸುಮಾಧರ ಹೆಚ್ ನಿರ್ವಹಿಸಿದರು. ವಿವಿಧ ಶಿಕ್ಷಕ ಸಿಬ್ಬಂದಿಗಳ ಸಹಕಾರದಿಂದ ಮತದಾನ ಪ್ರಕ್ರಿಯೆ ಶಿಸ್ತಿನಿಂದ ಮತ್ತು ಯಶಸ್ವಿಯಾಗಿ ಪೂರ್ಣಗೊಂಡಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ರುತಿ ರೈ ಆಯ್ಕೆಯಾಗಿದ್ದು, ಉಪಾಧ್ಯಕ್ಷರ ಸ್ಥಾನಕ್ಕೆ ಪ್ರಜ್ಯೋತ್ ಎನ್.ಕೆ ಆಯ್ಕೆಯಾದರು. ಕಲಾ ಸಂಘದ ಅಧ್ಯಕ್ಷರಾಗಿ ಸ್ನೇಹ ರಾವ್ ಹಾಗೂ ಕ್ರೀಡಾ ಸಂಘದ ಅಧ್ಯಕ್ಷರಾಗಿ ಭವಿತ್ ಬಿ ತಮ್ಮ ಸ್ಥಾನಕ್ಕೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದರು.
ಚುನಾವಣೆಯ ಮೂಲಕ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮೂಲತತ್ವಗಳನ್ನು ಅನುಭವಿಸಿ ಕಲಿತುಕೊಳ್ಳುವ ಅಪರೂಪದ ಅವಕಾಶ ಸಿಕ್ಕಿತು ಎಂಬುದು ವಿಶೇಷ.










