
ನೆಲ್ಯಾಡಿ:ಬಿ.ಸಿ.ರೋಡ್ನಿಂದ ಅಡ್ಡಹೊಳೆವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ಜನಜೀವನಕ್ಕೆ ಗಂಭೀರ ಹಾನಿ ತಂದೊಡ್ಡುತ್ತಿರುವ ಬೆಳವಣಿಗೆಗಳು ಒಂದೊಂದು ಬಯಲಾಗುತ್ತಿವೆ. ಈಗಾಗಲೇ ಮಳೆಗಾಲದ ಆರಂಭವಾಗುತ್ತಿದ್ದಂತೆ ಗುಡ್ಡ ಕುಸಿತ, ಮರಗಳು ಧರೆಗುರುಳುವ ಘಟನೆಗಳು ಅನೇಕ ಕಡೆಗಳಲ್ಲಿ ಸಂಭವಿಸುತ್ತಿದ್ದು, ನಾಗರಿಕರಿಗೆ ಅಪಾಯದ ಘಂಟೆ ಮೊಳಗಿಸುತ್ತಿವೆ.

ರಸ್ತೆ ಅಗಲೀಕರಣದ ನೆಪದಲ್ಲಿ ವಿಜ್ಞಾನೋಚಿತ ನಿಲುವು ವಹಿಸದೇ, ಗುಡ್ಡಗಳನ್ನು ಕತ್ತರಿಸಿರುವ ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಇದರಿಂದಾಗಿ ಹಲವೆಡೆ ಗುಡ್ಡ ಕುಸಿತಗಳು ಸಂಭವಿಸುತ್ತಿದ್ದು, ಮಳೆ ಮತ್ತು ಗಾಳಿಗೆ ದೊಡ್ಡ ದೊಡ್ಡ ಮರಗಳು ಹೆದ್ದಾರಿ ಮೇಲೆ ಬಿದ್ದಿರುವ ದೃಶ್ಯಗಳು ನಿರಂತರ ಕಂಡುಬರುತ್ತಿವೆ.
ನೆಲ್ಯಾಡಿಯ ಮಣ್ಣಗುಂಡಿಯಲ್ಲಿ ಬೃಹತ್ ಗುಡ್ಡ ಕುಸಿತ:
ಮಂಗಳವಾರದಂದು ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು, ಹೆದ್ದಾರಿಯೆಲ್ಲ ಮಣ್ಣು ಹಾಗೂ ಮರಗಳಿಂದ ಮುಚ್ಚಿಹೋಯಿತು. ಈ ಪ್ರದೇಶದಲ್ಲಿ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ, ಅತ್ಯಂತ ಎತ್ತರದ ಗುಡ್ಡವನ್ನು ಯಾವುದೇ ಮುನ್ನೆಚ್ಚರಿಕೆಯ ಕ್ರಮವಿಲ್ಲದೆ ಕತ್ತರಿಸಲಾಗಿದೆ. ಪರಿಣಾಮವಾಗಿ ಮಳೆ ಬರುತ್ತಿದ್ದಂತೆ ಮಣ್ಣು ಸಡಿಲಗೊಂಡು ಕುಸಿದು, ಹೆದ್ದಾರಿ ಬಂದ್ ಆಗುವ ಸ್ಥಿತಿ ನಿರ್ಮಾಣವಾಗಿದೆ.
ದೊಡ್ಡ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರೆ, ಕೆಲವು ಸಣ್ಣ ವಾಹನಗಳು ಕಿರಿದಾದ ಜಾಗದಲ್ಲಿ ದೊಡ್ಡ ಶ್ರಮದಿಂದ ಸಾಗುವ ಚಿತ್ರಣ ಕಂಡುಬಂದಿತು. ದೈನಂದಿನ ಸಾಗಣೆಗೆ ಈ ರಸ್ತೆ ಅವಲಂಬಿಸಿರುವ ಸಾವಿರಾರು ಪ್ರಯಾಣಿಕರು ಹಾಗೂ ವಾಹನ ಸವಾರರು ಆತಂಕದಲ್ಲಿದ್ದಾರೆ. ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರಿಂದ ಮಣ್ಣನ್ನು ತೆರೆವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.
ಆಕ್ರೋಶದಲ್ಲಿ ಸಾರ್ವಜನಿಕರು :
ಈ ಮಾರ್ಗದ ಮೇಲೆ ನಿರಂತರವಾಗಿ ಅನಾಹುತಗಳು ನಡೆಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ. ಕಾಮಗಾರಿ ಗುಣಮಟ್ಟ, ಸುರಕ್ಷತಾ ಕ್ರಮಗಳ ಅವ್ಯವಸ್ಥೆ, ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಕುರಿತು ಸಾರ್ವಜನಿಕ ಆಕ್ರೋಶವು ತೀವ್ರಗೊಂಡಿದೆ.
ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, “ಹೆದ್ದಾರಿ ಕಾಮಗಾರಿಯ ಹೆಸರಲ್ಲಿ ನಮ್ಮ ಜೀವದ ಮೇಲೆಯೇ ಆಟ ಆಡುತ್ತಿದ್ದಾರೆ. ಪ್ರಾಣ ಹೋಗಿ ಹೋದ ನಂತರ ಮಾತ್ರ ಅಧಿಕಾರಿಗಳಿಗೆ ಎಚ್ಚರ ಬರುವುದೇ?” ಎಂಬ ತರಹದ ಪ್ರಶ್ನೆಗಳು ಎದ್ದಿವೆ.
ತುರ್ತು ಕ್ರಮದ ಅವಶ್ಯಕತೆ:
ಇದಾದ ಮೇಲೆ ಇನ್ನಷ್ಟು ಅನಾಹುತಗಳನ್ನು ತಪ್ಪಿಸಲು ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳೂ ಕೂಡ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.










