

ನೆಲ್ಯಾಡಿ: ಪಡುಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 57ನೇ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶಿಬಿರವನ್ನು ದಕ್ಷಿಣ ಕನ್ನಡ ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ಮಂಗಳೂರು, ಅಶ್ವಿನ್ ಒಪ್ಟಿಕಲ್ಸ್ ಮತ್ತು ಕ್ಲಿನಿಕ್ಸ್ ಕಡಬ, ಲಯನ್ಸ್ ಕ್ಲಬ್ ಅಲಂಕಾರ ದುರ್ಗಾಂಬಾ, ರಾಮನಗರ ಫ್ರೆಂಡ್ಸ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಡುಬೆಟ್ಟು ಒಕ್ಕೂಟ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಉದ್ಘಾಟನೆಯನ್ನು ದೀಪ ಬೆಳಗಿಸಿ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯ ನಿವೃತ್ತ ಹಿರಿಯ ನೇತ್ರ ಪರಿವೀಕ್ಷಕರಾದ ಶಾಂತರಾಜ್ ಅವರು ನೆರವೇರಿಸಿ ಮಾತನಾಡುತ್ತಾ, “ಗ್ರಾಮೀಣ ಭಾಗಗಳಲ್ಲಿ ಜನರು ಕಣ್ಣಿನ ತೀವ್ರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೊಬೈಲ್, ಟಿವಿ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ದೃಷ್ಟಿ ದೋಷ ಹೆಚ್ಚುತ್ತಿದೆ. ಈ ಶಿಬಿರಗಳ ಮೂಲಕ ಜನರಿಗೆ ಪ್ರಾಮಾಣಿಕ ಸೇವೆಯನ್ನು ನೀಡುವ ಉದ್ದೇಶವಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಲಂಕಾರ ದುರ್ಗಾಂಬಾ ಅಧ್ಯಕ್ಷ ಲ.ಪದ್ಮಪ್ಪ ಗೌಡ ಅವರು ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷರಾದ ಸಲಾಂ ಬಿಲಾಲ್, ಕಣ್ಣಿನ ತಜ್ಞ ಡಾ.ವಿಕಾಸ್ ಎಸ್.ಎಂ, ಬಂಟರ ಸಂಘ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಪಡುಬೆಟ್ಟು ಒಕ್ಕೂಟ ಅಧ್ಯಕ್ಷ ಜೋನ್ ಮಂತೆರೋ, ರಾಮನಗರ ಫ್ರೆಂಡ್ಸ್ ಅಧ್ಯಕ್ಷ ಸುಶಾಂತ್ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಮಾಜಿ ಕಾರ್ಯದರ್ಶಿ ಮಹಮ್ಮದ್ ಹನೀಫ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಶಿಬಿರದಲ್ಲಿ ಒಟ್ಟು 125 ಜನರು ಕಣ್ಣಿನ ತಪಾಸಣೆಗೆ ಒಳಪಟ್ಟರು. ಈ ಪೈಕಿ 8 ಜನರನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ಸ್ಥಳದಲ್ಲಿಯೇ 100 ಜನ ಫಲಾನುಭವಿಗಳಿಗೆ ಅಶ್ವಿನ್ ಒಪ್ಟಿಕಲ್ಸ್ ಮತ್ತು ಕ್ಲಿನಿಕ್ಸ್ ಯೋಗಕ್ಷೇಮ ಸಂಕೀರ್ಣದ ಸಹಯೋಗದಿಂದ ಉಚಿತ ಕನ್ನಡಕಗಳನ್ನು ಹಿರಿಯ ನೇತ್ರ ಪರಿವೀಕ್ಷಕ ಶ್ರೀ ಶಾಂತರಾಜ್ ರವರು ವಿತರಿಸಿದರು.
ಸನ್ಮಾನ:
ಹಿರಿಯ ನೇತ್ರ ತಜ್ಞ ಡಾ. ಶಾಂತರಾಜ್ ರವರಿಗೆ ಶಾಲು ಹೊದಿಸಿ, ಹಾರಾರ್ಪಣೆ ಹಾಗೂ ಫಲಪುಷ್ಪಗಳೊಂದಿಗೆ ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ರಾಮನಗರ ಫ್ರೆಂಡ್ಸ್ ಅಧ್ಯಕ್ಷ ಸುಶಾಂತ್ ಶೆಟ್ಟಿ ವಂದಿಸಿದರು. ನೇತ್ರ ತಪಾಸಣೆಯಲ್ಲಿ ಕು.ಸವಿತಾ ಮತ್ತು ಕು.ಯಕ್ಷಿತ ಸಹಕಾರ ನೀಡಿದರು. ರಾಮನಗರ ಫ್ರೆಂಡ್ಸ್ ಯುವ ಸಂಘಟನೆಯ ಸದಸ್ಯರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.










