

ಕೊಕ್ಕಡ: ಸೌತಡ್ಕ ಕಾಮಧೇನು ಗೋಶಾಲೆಗೆ ಕೊಯಿಲ ಜಾನುವಾರು ಸಂವರ್ಧನ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕರಾದ ಡಾ.ಪ್ರಸನ್ನ ಹೆಬ್ಬಾರ್ ಅವರು ಬುಧವಾರದಂದು ಭೇಟಿ ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ವೇಳೆ ಗೋಶಾಲೆಯ ಗೋಸಾಕಣೆ, ಪೋಷಣಾ ವಿಧಾನಗಳು ಹಾಗೂ ಪರಂಪರೆಯ ಆಧುನಿಕ ಪ್ರಯೋಗಗಳ ಕುರಿತು ವಿವರಿಸಿದರು.
ಅವರು ವಿಶೇಷವಾಗಿ ಗೋ ಅರ್ಕ ಮತ್ತು ತುಳಸಿ ಗೋಅರ್ಕ ತಯಾರಿ ವಿಧಾನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಪ್ರಸ್ತುತ ಕೊಯಿಲ ಜಾನುವಾರು ಸಂವರ್ಧನ ಕೇಂದ್ರದಲ್ಲಿ ತುಳಸಿ ಗೋಅರ್ಕ ತಯಾರಿಸಲಾಗುತ್ತಿದ್ದು, ಅದರ ಉತ್ಪಾದನೆಗೆ ಕ್ಷೇತ್ರದಲ್ಲಿ ದೇವರಿಗೆ ಅರ್ಪಿಸಿದ ತುಳಸಿ ತುದಿಗಳು ಹಾಗೂ ಹಾರಗಳನ್ನು ಉಪಯೋಗಿಸಲು ಸಾಧ್ಯವಿದೆ ಈ ಹಿನ್ನೆಲೆಯಲ್ಲಿ ದೇವಾಲಯದಿಂದ ಸಹಕಾರ ನೀಡುವಂತೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ಗಣೇಶ್ ಕಾಶಿ, ಸೌತಡ್ಕ ದೇವಸ್ಥಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಪ್ರಶಾಂತ್ ರೈ ಆರಂತಬೈಲು, ಗೋಳಿತೊಟ್ಟು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.











