

ಸೌತಡ್ಕ: ದಕ್ಷಿಣ ಕನ್ನಡದ ಜನಭಕ್ತಿಯಲ್ಲಿ ಆಳವಾಗಿ ನೆಲೆಸಿರುವ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರವು ತನ್ನ ವೈಶಿಷ್ಟ್ಯದಿಂದ ರಾಜ್ಯವ್ಯಾಪಿ ಖ್ಯಾತಿ ಪಡೆದಿದೆ. ತೆರೆದ ಬಯಲು ಪ್ರದೇಶದಲ್ಲಿರುವುದರಿಂದ ಈ ಕ್ಷೇತ್ರವನ್ನು ‘ಬಯಲು ಆಲಯ ಗಣಪತಿ’ ಎಂದೂ, ಪ್ರತಿದಿನ ಮೊಳಗುವ ದೈವೀಘಂಟೆಯ ಕಾರಣಕ್ಕೆ ಭಕ್ತರು ಆತ್ಮೀಯವಾಗಿ ‘ಗಂಟೆ ಗಣಪತಿ’ ಎಂದೂ ಕರೆಯುತ್ತಾರೆ. ಭಕ್ತರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಈ ಪೀಠದಲ್ಲಿ ಪ್ರತಿವರ್ಷ ನಡೆಯುವ ಗಣೇಶೋತ್ಸವವು ಭಕ್ತಿ, ಸಂಸ್ಕೃತಿ ಮತ್ತು ಸಮುದಾಯ ಬಾಂಧವ್ಯದ ಮಹೋತ್ಸವವಾಗಿ ಪರಿಣಮಿಸುತ್ತಿದೆ. ಈ ಬಾರಿಯ ಶ್ರೀ ಗಣೇಶ ಚತುರ್ಥಿ ಮಹೋತ್ಸವವು ಬುಧವಾರದಂದು ಭಕ್ತರ ಭಾವಭರಿತ ಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ.
ಧಾರ್ಮಿಕ ಕಾರ್ಯಕ್ರಮಗಳು
ಬೆಳಿಗ್ಗೆ 108 ಕಾಯಿ ಗಣಹೋಮ, ರಂಗಪೂಜೆ ಹಾಗೂ ಮಹಾಪೂಜೆ ನೆರವೇರಲಿದ್ದು, ನಂತರ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಉತ್ಸವದ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿ ನಡೆಯುವ ಪ್ರಸಾದದ ಅಡುಗೆ ಸಿದ್ಧತೆ.
ಮೋದಕ ತಯಾರಿಕೆಯಲ್ಲಿ ದಾಖಲೆ ಮಟ್ಟದ ಅಬ್ಬರ
ಸೌತಡ್ಕ ಗಣೇಶೋತ್ಸವದ ಪರಿಚಯವೇ ಮೋದಕ ತಯಾರಿಕೆ. ಈ ಬಾರಿ ದಿನೇಶ್ ಮೆಹಂದಳೆ ಅವರ ನೇತೃತ್ವದಲ್ಲಿ ನೂರು ಮಂದಿಯ ಬಾಣಸಿಕರ ತಂಡ ಸೋಮವಾರ ಬೆಳಿಗ್ಗೆ 6ರಿಂದ ಸಂಜೆ 8ರವರೆಗೆ ಶ್ರಮಿಸಿ, 600 ತೆಂಗಿನ ಕಾಯಿ, 230 ಕೆಜಿ ಬೆಲ್ಲ, 50 ಲೀಟರ್ ತುಪ್ಪ ಹಾಗೂ 2.5 ಕ್ವಿಂಟಾಲ್ ಮೈದಾ ಬಳಸಿ 30 ಸಾವಿರ ಮೋದಕಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಸಲ್ಲಿಸಲಾಗಿದೆ.

ಅಪ್ಪ ಕಜ್ಜಾಯ, ಪಂಚಕಜ್ಜಾಯ – ಲಾಡುಗಳ ಭರ್ಜರಿ ಸಿದ್ಧತೆ
ಹಬ್ಬದ ದಿನದಂದು ವಿಶೇಷ ಪ್ರಸಾದವಾಗಿ 12 ಸಾವಿರ ಅವಲಕ್ಕಿ ಪಂಚಕಜ್ಜಾಯ ತಯಾರಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ 5,000 ತೆಂಗಿನಕಾಯಿ, 3,600 ಕೆಜಿ ಅವಲಕ್ಕಿ ಹಾಗೂ 1,200 ಕೆಜಿ ಬೆಲ್ಲ ಬಳಸಲಾಗುತ್ತಿದೆ. ಅಲ್ಲದೆ 60,000 ಅಪ್ಪ ಕಜ್ಜಾಯ ಇದಕ್ಕಾಗಿ 5 ಕ್ವಿಂಟಾಲ್ ಗೋಧಿ ಹಿಟ್ಟು, 5 ಕ್ವಿಂಟಾಲ್ ಬೆಲ್ಲ, 1 ಕ್ವಿಂಟಾಲು ಸಕ್ಕರೆ, 700 ತೆಂಗಿನಕಾಯಿ, 275 ಲೀಟರ್ ತುಪ್ಪ ಬಳಸಿ ಸುಮಾರು 15 ಮಂದಿ ಸೇರಿ ತಯಾರಿಸುತ್ತಾರೆ. ಜೊತೆಗೆ 4 ಕ್ವಿಂಟಾಲ್ ಕಡಲೆ ಪಂಚಕಜ್ಜಾಯ ಮತ್ತು 5,000 ಲಾಡುಗಳೂ ತಯಾರಿಸಲಾಗುತ್ತಿದೆ. ಅಲ್ಲದೆ, ಸುಮಾರು 7 ಸಾವಿರ ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಭಕ್ತರ ಸಂಖ್ಯೆ ಹೆಚ್ಚಾದರೂ ಅದಕ್ಕೆ ತಕ್ಕ ವ್ಯವಸ್ಥೆಗಳನ್ನೂ ಸಮಿತಿಯು ಮಾಡಿಟ್ಟಿದೆ.
ಸಮಿತಿಯ ಸಜ್ಜಿಕೆ – ಭಕ್ತರ ದಟ್ಟಣೆಗೆ ಸಕಲ ಸೌಲಭ್ಯ
ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ದೇವರ ದರ್ಶನಕ್ಕಾಗಿ ಆಗಮಿಸುವ ನಿರೀಕ್ಷೆಯಿದ್ದು, ಸಮಿತಿಯು ಎಲ್ಲಾ ಬಗೆಯ ಭದ್ರತಾ ಹಾಗೂ ವ್ಯವಸ್ಥಾಪನಾ ಕ್ರಮಗಳನ್ನು ಕೈಗೊಂಡಿದೆ.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಕೆ, ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ವಿಶ್ವನಾಥ ಕೆ ಕೊಲ್ಲಾಜೆ, ಪ್ರಮೋದ್ ಕುಮಾರ್ ಶೆಟ್ಟಿ, ಗಣೇಶ್ ಕಾಶಿ, ಪ್ರಶಾಂತ್ ಮಚ್ಚಿನ, ಹರಿಶ್ಚಂದ್ರ ಜಿ, ಲೋಕೇಶ್ವರಿ ವಿನಯಚಂದ್ರ, ಸಿನಿಗುರುದೇವನ್ ಹಾಗೂ ಕಾರ್ಯನಿರ್ವಹಣೆ ಅಧಿಕಾರಿ ಕೆ.ವಿ. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ಗಣೇಶೋತ್ಸವವು ಮೋದಕದ ಅಬ್ಬರ, ಪಂಚಕಜ್ಜಾಯದ ಸವಿರುಚಿ, ಅನ್ನಸಂತರ್ಪಣೆಯ ವೈಭವ, ಭಕ್ತರ ಮಹಾಪ್ರವಾಹ—ಇವೆಲ್ಲವನ್ನೂ ಸೇರಿಸಿಕೊಂಡು ಸೌತಡ್ಕ ಕ್ಷೇತ್ರವನ್ನು ಭಕ್ತಿ–ಭಾವನೆಗಳ ಮಹಾ ಜಾತ್ರೆಯಾಗಿ ರೂಪಾಂತರಗೊಳಿಸಲು ಸಜ್ಜಾಗಿದೆ. ಈ ಬಾರಿಯ ಭವ್ಯ ಕಾರ್ಯಕ್ರಮವು ಇನ್ನಷ್ಟು ವೈಶಿಷ್ಟ್ಯ ಪಡೆದುಕೊಳ್ಳಲಿದೆ.











