


ಮಂಗಳೂರು: ನಗರದಲ್ಲಿನ ಲಾಲ್ಬಾಗ್ ಹ್ಯಾಟ್ ಹಿಲ್ ಪ್ರದೇಶದ ಅಪಾರ್ಟ್ಮೆಂಟ್ನಲ್ಲಿ ಕಳ್ಳರು ಸುಮಾರು ₹20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಣ ಹಾಗೂ ವಿದೇಶಿ ಕರೆನ್ಸಿ ಕಳ್ಳತನ ಮಾಡಿದ ಕೆಲವೇ ಗಂಟೆಗಳಲ್ಲಿ, ಮಂಗಳೂರು ಪೊಲೀಸರು ಅತ್ಯಂತ ವೇಗದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅ.19/20ರ ಮಧ್ಯರಾತ್ರಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮದ ಲಾಲ್ಬಾಗ್ ಹ್ಯಾಟ್ ಹಿಲ್ನಲ್ಲಿರುವ ಮೂರು ಫ್ಲ್ಯಾಟ್ಗಳಿಗೆ ಕಳ್ಳರು ನುಗ್ಗಿ ₹20 ಲಕ್ಷ ಮೌಲ್ಯದ ಚಿನ್ನಾಭರಣ, ₹5,000 ನಗದು, 3,000 ದಿರ್ಹಾಮ್ (ಸುಮಾರು ₹70,000 ಮೌಲ್ಯ) ಹಾಗೂ ಮೊಬೈಲ್ ಫೋನ್ ಕಳವು ಮಾಡಿದ್ದರು.
ಈ ಸಂಬಂಧ ರಿಯಾಜ್ ರಶೀದ್ ನೀಡಿದ ದೂರಿನ ಮೇರೆಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಅ.ಕ್ರ.104/2025 ಕಲಂ 331(4), 305(ಎ) ಬಿ.ಎನ್.ಎಸ್.–2023ರಂತೆ ಪ್ರಕರಣ ದಾಖಲಾಗಿತ್ತು.
ತನಿಖಾ ಪ್ರಕ್ರಿಯೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಠಾಣಾಧಿಕಾರಿ ಹಾಗೂ ಸಿಬ್ಬಂದಿ, ಶ್ವಾನ ದಳ ಮತ್ತು ಫಿಂಗರ್ಪ್ರಿಂಟ್ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕಳ್ಳರ ಪತ್ತೆಗೆ ನಿಖರವಾದ ತಂತ್ರೋಪಾಯ ರೂಪಿಸಿ ಕಾರ್ಯಾಚರಣೆ ಆರಂಭಿಸಿದರು.
20 ಗಂಟೆಯೊಳಗೆ ಬಂಧನ – ಚಿನ್ನಾಭರಣ ವಶ!
ಮಂಗಳೂರು ಪೊಲೀಸ್ರ ಶೀಘ್ರ ಕಾರ್ಯಾಚರಣೆಯಿಂದ ಕಳವು ನಡೆದ ಕೇವಲ 20 ಗಂಟೆಗಳೊಳಗೆ ಆರೋಪಿಗಳಾದ ಇಬ್ಬರು ಅಸ್ಸಾಂ ಮೂಲದ ಅಂತರರಾಜ್ಯ ಮನೆ ಕಳ್ಳರನ್ನು ಬೆಂಗಳೂರು ನಗರದಲ್ಲಿ ಅ.21 ಬೆಳಗಿನ ಜಾವ ದಸ್ತಗಿರಿ ಮಾಡಲಾಯಿತು.
ಪೊಲೀಸರು ಆರೋಪಿಗಳಿಂದ ಕಳವು ಮಾಡಿದ್ದ ಚಿನ್ನಾಭರಣ, ₹5,000 ನಗದು, ₹70,000 ಮೌಲ್ಯದ 3,000 ದಿರ್ಹಾಮ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆ ಪಾಂಚಗೋರಿ ನಿವಾಸಿ ಅಭಿಜಿತ್ ದಾಸ್(24) ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆ ಶ್ರೀ ದುರ್ಗಾ ಮಂದಿರ ಹತ್ತಿರ, ಮೆಹೆರ್ಪುರ್ ಗ್ರಾಮದ ದೇಬಾ ದಾಸ್(21) ಬಂಧಿತ ಆರೋಪಿಗಳು
ಪೊಲೀಸ್ ಮೂಲಗಳ ಪ್ರಕಾರ, ಅಭಿಜಿತ್ ದಾಸ್ ವಿರುದ್ಧ ಈಗಾಗಲೇ ಬೆಂಗಳೂರು ನಗರ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಹಲವು ಮನೆಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಮಂಗಳೂರು ಉರ್ವಾ ಪೊಲೀಸ್ ತಂಡವು ಬೆಂಗಳೂರು ನಗರ ಪೊಲೀಸ್ ಇಲಾಖೆಯ ಸಹಕಾರದಲ್ಲಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಇತರ ಪ್ರಕರಣಗಳಲ್ಲಿ ಅವರ ಪಾತ್ರವಿದೆವೆಂಬುದರ ತನಿಖೆ ಮುಂದುವರಿಯುತ್ತಿದೆ.
ಈ ಕಾರ್ಯಾಚರಣೆಯನ್ನು ಡಿ.ಸಿ.ಪಿ ಕ್ರೈಂ ಅವರ ಮೇಲ್ವಿಚಾರಣೆಯಲ್ಲಿ, ಕೇಂದ್ರ ಉಪವಿಭಾಗದ ಎಸಿಪಿ, ಉರ್ವಾ ಠಾಣೆಯ ಪಿ.ಐ ಹಾಗೂ ಸಿಬ್ಬಂದಿ ಯಶಸ್ವಿಯಾಗಿ ನೆರವೇರಿಸಿದ್ದಾರೆ.






