

ನೆಲ್ಯಾಡಿ: ಶಾಂತಿಮೊಗರು–ಆಲಂಕಾರು ರಸ್ತೆ ಕಳೆದ ಹಲವು ದಿನಗಳಿಂದ ಹದಗೆಟ್ಟು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆ ಸಂಪೂರ್ಣವಾಗಿ ಹೊಂಡಗಳಿಂದ ಕೂಡಿದ್ದು, ದಿನನಿತ್ಯ ಈ ಮಾರ್ಗದಿಂದ ಸಂಚರಿಸುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಹೊಂಡಕ್ಕೆ ಬಿದ್ದು ಅಪಘಾತಕ್ಕೀಡಾಗುವ ಘಟನೆಗಳು ಹಲವು ಬಾರಿ ಸಂಭವಿಸಿದ್ದವು.
ಸಂಬಂಧಪಟ್ಟ ಇಲಾಖೆಯವರು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಕೈಕಟ್ಟಿ ಕುಳಿತಿರುವುದನ್ನು ಕಂಡು ಸ್ಥಳೀಯ ಯುವಕರು ಮುಂದಾಗಿದ್ದಾರೆ. ಗಿರೀಶ್ ನಾಡ್ತಿಲ, ಶಶಿಧರ, ಹರೀಶ ಕೊಂಡಾಡಿ ಕೊಪ್ಪ, ಹರೀಶ ಹಾಗೂ ಚಂದ್ರ ಏಂತಡ್ಕ ಎಂಬ ಐದು ಮಂದಿ ಯುವಕರ ತಂಡ ತಾವು ತಾವೇ ಮುಂದಾಗಿ ರಸ್ತೆ ಮಧ್ಯದಲ್ಲಿದ್ದ ಹೊಂಡಗಳನ್ನು ಕಲ್ಲು, ಮಣ್ಣು ಹಾಗೂ ಕಲ್ಲುಗಳಿಂದ ತುಂಬಿ ತಾತ್ಕಾಲಿಕವಾಗಿ ಮುಚ್ಚುವ ಕಾರ್ಯ ಕೈಗೊಂಡಿದ್ದಾರೆ.
ಸವಾರರಿಗೆ ಆಗುತ್ತಿದ್ದ ಅಪಾಯ ಹಾಗೂ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ಈ ಸಾಮಾಜಿಕ ಕಾರ್ಯ ಮಾಡಿದ ಯುವಕರಿಗೆ ಸ್ಥಳೀಯರು ಪ್ರಶಂಸೆ ವ್ಯಕ್ತವಾಗಿದೆ.






