

ಬಂಟ್ವಾಳ:ಬಿ.ಸಿ ರೋಡ್ನಲ್ಲಿ ಸಂಭವಿಸಿದ ಬೆಚ್ಚಿಬೀಳಿಸುವ ದಾಳಿ ಪ್ರಕರಣದಲ್ಲಿ, ಸೋಮಯಾಜಿ ಟೆಕ್ಸ್ ಟೈಲ್ಸ್ ಅಂಗಡಿಯ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ(45) ಮೇಲೆ ಅವರ ಪತ್ನಿಯೇ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ನ19ರ ಸಂಜೆ ಸಂಭವಿಸಿದೆ.
ಸಂಜೆ ಸುಮಾರು 7.00 ಗಂಟೆಗೆ ಅಂಗಡಿಯಲ್ಲಿದ್ದ ಕೃಷ್ಣ ಕುಮಾರ್ ಸೋಮಯಾಜಿ ಹಾಗೂ ಸೇಲ್ಸ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿರುವ ನಮಿತಾ(33) ರವರ ಮುಂದೆ, ಬುರ್ಕಾ ಧರಿಸಿ ಗ್ರಾಹಕರ ವೇಷದಲ್ಲಿ ಬಂದ ಮಹಿಳೆ ಇದ್ದಕ್ಕಿದ್ದಂತೆ ಕತ್ತಿಯಿಂದ ದಾಳಿ ನಡೆಸಿದ್ದಾಳೆ. ದಾಳಿ ನಡೆಸಿದ ಮಹಿಳೆ ಕೃಷ್ಣ ಕುಮಾರ್ ಸೋಮಯಾಜಿಯವರ ಪತ್ನಿ ಜ್ಯೋತಿ ಕೆ.ಟಿ ಎಂಬುದು ನಂತರ ಸ್ಪಷ್ಟವಾಗಿದೆ.
ದಾಳಿಯಿಂದ ಪಾರಾಗಲು ಪ್ರಯತ್ನಿಸಿದ ಗಾಯಾಳುವನ್ನು ನಮಿತಾ ತಕ್ಷಣವೇ ಆಟೋ ರಿಕ್ಷಾ ಮೂಲಕ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಬಳಿಕ ಮಂಗಳೂರಿನ ಎ.ಜೆ. ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಪತ್ನಿ ಜ್ಯೋತಿ ಕೆ.ಟಿ. ಈ ಹಿಂದೆ ಕೂಡ ಅಂಗಡಿಗೆ ಬಂದು ಪತಿಯ ಜೀವನಕ್ಕೆ ಬೆದರಿಕೆ ಹಾಕಿ ಹೋಗಿರುತ್ತಾರೆ. ಕುಟುಂಬ ಕಲಹ ಹಾಗೂ ಮನಸ್ತಾಪವೇ ಹಲ್ಲೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಗಂಡನನ್ನು ಕೊಲ್ಲುವ ನಿಟ್ಟಿನಲ್ಲಿ ಈ ದಾಳಿ ನಡೆಸಲಾಗಿದೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.






