

ನೆಲ್ಯಾಡಿ: ಶಿರಾಡಿ ಗ್ರಾಮದ ಉದನೆ ಸೈಂಟ್ ಅಂಟನೀಸ್ ವಿದ್ಯಾ ಸಂಸ್ಥೆಗಳ ಸುವರ್ಣ ಮಹೋತ್ಸವ ಸುವರ್ಣ ಸಂಭ್ರಮ ಕಾರ್ಯಕ್ರಮ ಹಾಗೂ ಬಿಷಪ್ ಪೋಳಿಕಾರ್ಪಸ್ ಪಬ್ಲಿಕ್ ಸ್ಕೂಲ್ನ ವಾರ್ಷಿಕೋತ್ಸವ ಡಿ.27ರಂದು ನಡೆಯಲಿದೆ ಎಂದು ಶಾಲಾ ಸಂಚಾಲಕ ಫಾ.ಹನಿ ಜೇಕಬ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಧರ್ಮಪ್ರಾಂತ್ಯದ ಶಿರಾಡಿ ಘಾಟಿ ತಪ್ಪಲಿನ ಉದನೆಯಲ್ಲಿ ಹೈಸ್ಕೂಲ್ ಶಿಕ್ಷಣ ಎನ್ನುವುದು ಮರೀಚಿಕೆಯಾಗಿದ್ದ ಸಂದರ್ಭ 1975ರಲ್ಲಿ ಹೊನ್ನಾವರ ಧರ್ಮಗುರು ಫಾ. ಜಾರ್ಜ್ ಕೆ.ಜೆ.ಅವರು ಸೈಂಟ್ ಆಂಟನೀಸ್ ವಿದ್ಯಾ ಸಂಸ್ಥೆಯನ್ನು ಪ್ರಾರಂಭಿಸಿದರು. ಪೋತನ್ ಕೆ.ಟಿ.ಎಂಬವರ ಮನೆಯಲ್ಲಿ ಪ್ರಾರಂಭವಾದ ವಿದ್ಯಾ ಸಂಸ್ಥೆ 1980ರವರೆಗೆ ಇಲ್ಲೇ ಮುಂದುವರಿದು ಬಳಿಕ ಸ್ವಂತ ಕಟ್ಟಡದಲ್ಲಿ ನಡೆದುಕೊಂಡು ಬಂದು ವಿದ್ಯಾಸಂಸ್ಥೆಗೆ ಸ್ಥಾಪಕ ಮುಖ್ಯ ಶಿಕ್ಷಕರಾಗಿ ಚಾಕೋ ವರ್ಗೀಸ್ ಸೇವೆ ಸಲ್ಲಿಸಿದ್ದರು. 1978ರಲ್ಲಿ ಪ್ರಥಮ ಎಸ್ಸೆಸ್ಸೆಲ್ಸಿ ತಂಡವು ದಾಖಲೆಯ ಫಲಿತಾಂಶದೊಂದಿಗೆ ಹೊರಹೊಮ್ಮಿತು.
2012ರಲ್ಲಿ ಬಿಷಪ್ ಪೋಳಿಕಾರ್ಪಸ್ ಪಬ್ಲಿಕ್ ಸ್ಕೂಲ್ ಎಂಬ ಹೆಸರಿನಲ್ಲಿ ಸಹ ಸಂಸ್ಥೆಯಾಗಿ ಆಂಗ್ಲಮಾಧ್ಯಮ ಶಾಲೆ ಪ್ರಾರಂಭಗೊಂಡಿತು. ಸಂಸ್ಥೆಯ ಸ್ಥಾಪಕರು ನಿಧನದ ಬಳಿಕ ಯಾಕೂಬ್ ಮಾರ್ ಅಂತೋನೀಸ್ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿದರು ಎಂದು ಹನಿ ಜೆಕಬ್ ವಿವರಿಸಿದರು.
ಶಾಲಾ ಮುಖ್ಯ ಶಿಕ್ಷಕ ಶ್ರೀಧರ ಗೌಡ ಮಾತನಾಡಿ, ಡಿ.15ರಂದು ವಾರ್ಷಿಕ ಕ್ರೀಡಾಕೂಟ ನಡೆಯಲಿದ್ದು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾಮಚ್ಚನ್ ಎಂ. ಉದ್ಘಾಟಿಸಲಿದ್ದಾರೆ. 16ರಂದು ಪೋಷಕರ ಕ್ರೀಡಾಕೂಟ ನಡೆಯಲಿದೆ. 17 ರಂದು ಪೂರ್ವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಕ್ರೀಡಾಕೂಟ ನಡೆಯಲಿದೆ. ಡಿ.20ರಂದು ಪ್ರತಿಭಾ ಪುರಸ್ಕಾರ ಹಾಗೂ ಕ್ರಿಸ್ಮಸ್ ಆಚರಣೆ ನಡೆಯಲಿದೆ. ನೆಲ್ಯಾಡಿ ಬೆಥನಿ ವಿದ್ಯಾ ಸಂಸ್ಥೆಯ ಸಂಚಾಲಕ ಫಾ. ವರ್ಗೀಸ್ ಕೈಪನಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಡಿ.27ರಂದು ನಡೆಯುವ ಸುವರ್ಣ ಸಂಭ್ರಮ ಕಾಠ್ಯಕ್ರಮದಲ್ಲಿ ಹೊನ್ನಾವರ ಸೈಂಟ್ ಆಂಟನೀಸ್ ಎಜುಕೇಶನ್ ಸೊಸೈಟಿಯ ನಿರ್ದೇಶಕ ಬಿಷಪ್ ಯಾಕೋಬ್ ಮಾರ್ ಆಂತೊನಿಯೋಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಶಾಸಕ ಅಶೋಕ್ ರೈ, ಮತ್ತಿತರರು ಭಾಗವಹಿಲಿದ್ದಾರೆ, ಈ ಸಂದರ್ಭ 100ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಗುವುದು ಎಂದು ವಿವರ ನೀಡಿದರು. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿಮ್ಸ್ನ್ ಗುಂಡ್ಯ, ಕಾವ್ಯದರ್ಶಿ ವಿಶ್ವನಾಥ ಪೂಜಾರಿ ಹೂವಿನ ಮಜಲು, ಖಜಾಂಚಿ ಪ್ರವೀಣ್ ಕುಮಾರ್ ಅಡ್ಡಹೊಳೆ ಉಪಸ್ಥಿತರಿದ್ದರು.






