


ನೆಲ್ಯಾಡಿ : ಬೆಳ್ತಂಗಡಿ ಧರ್ಮಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರವಾದ ನೆಲ್ಯಾಡಿಯಲ್ಲಿ ವಾರ್ಷಿಕ ಮಹೋತ್ಸವವು ಭಕ್ತಿ, ಭಾವ ಮತ್ತು ವರ್ಣರಂಜಿತ ಸಂಭ್ರಮದೊಂದಿಗೆ ಧ್ವಜಾರೋಹಣದ ಮೂಲಕ ವಿಧಿವತ್ತಾಗಿ ಆರಂಭಗೊಂಡಿತು.
ಸಹನೆ ಮಾತೆ ಸಂತ ಅಲ್ಫೋನ್ಸರ ಭಾವಚಿತ್ರ ಹೊಂದಿದ ಧ್ವಜವನ್ನು ಚರ್ಚ್ ನ ಧರ್ಮಗುರು ವಂ.ಫಾ.ಶಾಜಿ ಮಾತ್ಯು, ಫಾ.ಅಲೆಕ್ಸ್ ಹಾಗೂ ಫಾ.ಇಮ್ಮಾನುವೆಲ್ ಅವರು ಸಂಯುಕ್ತವಾಗಿ ಆರೋಹಿಸುವ ಮೂಲಕ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ನವ ದಿನಗಳ ಕಾಲ ನಡೆಯಲಿರುವ ಈ ಮಹೋತ್ಸವವು ಭಕ್ತರಲ್ಲಿ ಧಾರ್ಮಿಕ ಉತ್ಸಾಹವನ್ನು ಮೂಡಿಸಿದೆ. ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಜ.24ರ ಶನಿವಾರ ವರ್ಣರಂಜಿತ ಹಾಗೂ ಆಕರ್ಷಕ ಶೋಭಾಯಾತ್ರೆ ನಡೆಯಲಿದ್ದು, ಅದೇ ದಿನ ವಿಸ್ಮಯ–2026 ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಹೋತ್ಸವದ ಸಮಾರೋಪವು ಜ.25ರ ಭಾನುವಾರ ವಿಧಿವತ್ತಾದ ರಾಸ ಬಲಿಪೂಜೆಯ ಮೂಲಕ ನಡೆಯಲಿದೆ.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಚರ್ಚ್ ನ ಪಾಲನಾ ಸಮಿತಿಯ ರೆಜಿ ಕೊಳಂಗರಾತ್, ರಾಜೇಶ್ ತೆಕ್ಕನಾಟ್ಟ್, ಜೋನ್ಸನ್ ಪುಳಿಕ್ಕಲ್, ಜೋಯ್ ಪುತ್ತೇನ್ ಪರಂಭಿಲ್ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ವಾರ್ಷಿಕ ಮಹೋತ್ಸವದ ಅಂಗವಾಗಿ ಪ್ರತಿದಿನ ಸಂಜೆ 4.30ರಿಂದ ಪೂಜಾ ವಿಧಿಗಳು ಆರಂಭಗೊಳ್ಳಲಿದ್ದು, ಭಕ್ತರಿಗಾಗಿ ಪ್ರತಿದಿನ ಹರಕೆಯ ಉಪಹಾರ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.






