



ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿ ನಿವಾಸಿ ಕೆ.ಸಿ.ವರ್ಗೀಸ್(73ವ.)ಎಂಬವರು ಕಳೆದ ರಾತ್ರಿ(ಫೆ.8) ಸಾವನ್ನಪ್ಪಿದ್ದು ಇವರ ಸಾವಿನ ಹಿಂದೆ ಹಲವು ಸಂಶಯಾಸ್ಪದ ಊಹಾಪೋಹಗಳು ಕೇಳಿಬರುತ್ತಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳೂ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮೃತ ಕೆ.ಸಿ.ವರ್ಗೀಸ್ ಅವರಿಗೆ ಮೂವರು ಗಂಡುಮಕ್ಕಳಿದ್ದು ಈ ಪೈಕಿ ಇಬ್ಬರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಕಿರಿಯ ಪುತ್ರ ಕೆ.ವಿ.ತೋಮಸ್ ರಿಕ್ಷಾ ಚಾಲಕರಾಗಿದ್ದು ತಂದೆಯ ಮನೆಯಿಂದ ತುಸು ದೂರು ಪತ್ನಿ ಹಾಗೂ ಮಕ್ಕಳೊಂದಿಗೆ ಪ್ರತ್ಯೇಕ ವಾಸವಾಗಿದ್ದಾರೆ. ಕೆ.ಸಿ.ವರ್ಗೀಸ್ ಹಾಗೂ ಅವರು ಪತ್ನಿ ಎಸ್ತರಾ ವರ್ಗೀಸ್ ಇಬ್ಬರೇ ಕೊಪ್ಪ ಮಾದೇರಿಯ ಮನೆಯಲ್ಲಿ ವಾಸವಾಗಿದ್ದು ಮದ್ಯ ವ್ಯಸನಿಯಾಗಿದ್ದ ಕೆ.ಸಿ.ವರ್ಗೀಸ್ ಮದ್ಯ ಸೇವಿಸಿ ಬಂದು ಪ್ರತಿ ದಿನವೂ ಪತ್ನಿ ಜೊತೆಗೆ ಜಗಳ ಮಾಡುತ್ತಿದ್ದು ಫೆ.8ರಂದು ಹಗಲು ವೇಳೆ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಜಗಳದಲ್ಲಿ ಗಾಯಗೊಂಡ ಎಸ್ತರಾ ಅವರು ಮಗ ಕೆ.ವಿ.ತೋಮಸ್ ಅವರ ಮನೆಗೆ ತೆರಳಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ರಾತ್ರಿ ವೇಳೆ ಯಾರೋ ಮನೆಗೆ ಬಂದು ಹಲ್ಲೆ ನಡೆಸಿರಬಹುದು ಎಂಬ ಸಂಶಯದ ಮಾತು ಕೇಳಿಬರುತ್ತಿದೆ.

ಮಂಚದಿಂದ ಬಿದ್ದು ಗಾಯಗೊಂಡು ಸಾವು;
ರಾತ್ರಿ ಬಾಡಿಗೆ ಮುಗಿಸಿ ಇದೇ ರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ತಂದೆ ಕೆ.ಸಿ.ವರ್ಗೀಸ್ ಅವರ ಮನೆಯಲ್ಲಿ ಲೈಟ್ ಉರಿಯುತ್ತಿರುವುದನ್ನು ಗಮನಿಸಿ ಒಳಗೆ ಹೋಗಿ ನೋಡಿದಾಗ ತಂದೆ ಮಂಚದಿಂದ ಬಿದ್ದು ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಮೃತ ಕೆ.ಸಿ.ವರ್ಗೀಸ್ ಅವರ ಪುತ್ರ ಕೆ.ವಿ.ತೋಮಸ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪೊಲೀಸರಿಂದ ತನಿಖೆ;
ಕೆ.ಸಿ.ವರ್ಗೀಸ್ ಅವರ ಸಾವಿನ ಹಿಂದೆ ಹಲವು ಊಹಾಪೋಹ ಕೇಳುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೊರಗಿನಿಂದ ಮನೆಗೆ ಬಂದವರು ಹಲ್ಲೆ ನಡೆಸಿರುವುದರಿಂದಲೇ ಕೆ.ಸಿ.ವರ್ಗೀಸ್ ಸಾವನ್ನಪ್ಪಿರಬಹುದು ಎಂಬ ಮಾತು ಹರಿದಾಡುತ್ತಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದಾರೆ. ಕೆ.ಸಿ.ವರ್ಗೀಸ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳೂ ಭೇಟಿ ನೀಡಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಉಪ್ಪಿನಂಗಡಿ ಠಾಣಾ ಎಸ್.ಐ ಸುತೇಶ್ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದಾರೆ.





