

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಹಾಗೂ ಕಡಬ ತಾಲೂಕು ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ಇವರ ವತಿಯಿಂದ ಯೋಜನೆಯ ಪಾಲುದಾರ ಬಂಧುಗಳಿಗೆ ಉದ್ಯಮಶೀಲತಾ ತರಬೇತಿ ಯೋಜನೆಯಡಿ ಸಾರಿ ಫೋಲ್ಡಿಂಗ್ ಮತ್ತು ಮೆಹಂದಿ ಡಿಸೈನ್ ವಿಷಯಗಳ ಐದು ದಿನಗಳ ತರಬೇತಿಯನ್ನು ಫೆ.10 ರಿಂದ 14ರ ವರೆಗೆ ರಾಮಕುಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.
ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಿ.ಆರ್.ಇ ಸಂಸ್ಥೆಯ ಪ್ರಾಂಶುಪಾಲ ರಮೇಶ್ ಮಾತನಾಡಿ, “ನಾವು ಮಾಡುವ ಕೆಲಸದ ಮೇಲಿನ ಪ್ರೀತಿಯೇ ಯಶಸ್ಸಿನ ಮೂಲ. ಸ್ವ ಉದ್ಯೋಗವು ಸ್ವಾಭಿಮಾನಿ ಬದುಕಿಗೆ ದಾರಿ. ಇಂತಹ ತರಬೇತಿ ಕಾರ್ಯಕ್ರಮಗಳು ಗ್ರಾಮೀಣ ಮಹಿಳೆಯರಿಗೆ ದಾರಿದೀಪವಾಗುತ್ತಿವೆ” ಎಂದು ಹೇಳಿದರು.
ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅವರು ಮಾತನಾಡಿ, “ಕಡಿಮೆ ಶ್ರಮದಲ್ಲಿ ಹೆಚ್ಚು ಲಾಭದಾಯಕತೆ ನೀಡಬಲ್ಲ ಉದ್ಯಮಗಳಲ್ಲಿ ಇದೂ ಒಂದು. ಯೋಜನೆಯ ಮೂಲಕ ಪಡೆಯುತ್ತಿರುವ ತರಬೇತಿಗಳನ್ನು ಬಳಸಿಕೊಂಡು ಸ್ವ ಉದ್ಯೋಗಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಹರ್ಷಿತಾ ತರಬೇತಿಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳ ತೊಡಗಿಸಿಕೊಂಡಿಕೆ ಮತ್ತು ಕಲಿಕೆಯ ಆಸಕ್ತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತರಬೇತಿದಾರರಾದ ಮಮತಾ, ಮಲ್ಲಿಕಾ, ದಿವ್ಯ, ವಸಂತಿ, ಅನಿತಾ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಜಾನವಿಕಾಸ ಸಮನ್ವಯಾಧಿಕಾರಿ ಚೇತನ ನಿರೂಪಿಸಿದರು. ಸಿ.ಆರ್.ಇ ಉಪನ್ಯಾಸಕ ಜನಾರ್ಧನ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಜಯಶ್ರೀ ಧನ್ಯವಾದ ಸಲ್ಲಿಸಿದರು. ಹರಿಣಿ ಪ್ರಾರ್ಥನೆ ಸಲ್ಲಿಸಿದರು. ಸೇವಾ ಪ್ರತಿನಿಧಿಗಳಾದ ಸುಮಲತಾ ಮತ್ತು ಪ್ರೇಮವತಿ ಕಾರ್ಯಕ್ರಮವನ್ನು ಸಂಘಟಿಸಿದರು. ಜಯಶ್ರೀ ಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







