


ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ ತಿಂಗಳ ಸಾಮಾನ್ಯ ಸಭೆ ಫೆ.18ರಂದು ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ ಪಾದೆ ಕಚೇರಿಯಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಜೆಸಿಐ ಕೊಕ್ಕಡ ಕಪಿಲಾ ಘಟಕದ ಅಧ್ಯಕ್ಷ ರಿತೇಶ್ ಎಂ. ಸ್ಟ್ರೆಲ್ಲಾ ಅವರು ವಹಿಸಿದರು.
ಸಭೆಯಲ್ಲಿ ವಿವಿಧ ಕಾರ್ಯಯೋಜನೆಯ ಬಗ್ಗೆ, ಭಾರತೀಯ ಯುವ ಜೆಸಿ ವಿಭಾಗದ ಪದಗ್ರಹಣ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಿಕಟಪೂರ್ವ ಅಧ್ಯಕ್ಷೆ ಡಾ. ಶೋಭಾ ಪಿ. ಅವರಿಗೆ ಸಂಘಟನೆಯಿಂದ ಅಭಿನಂದನೆಗಳು ಸಲ್ಲಿಸಲಾಯಿತು.
ಕೋಶಾಧಿಕಾರಿ ಪ್ರಜ್ವಲ್ ಲೋಬೊ ಅವರು ವಾರ್ಷಿಕ ಸದಸ್ಯತ್ವ ಶುಲ್ಕದ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು. ಪೂರ್ವಾಧ್ಯಕ್ಷ ಸಂತೋಷ್ ಜೈನ್ ಅವರನ್ನು ಯುವ ಜೆಸಿ ವಿಭಾಗದ ನಿರ್ದೇಶಕರಾಗಿ ಆರಿಸಲಾಯಿತು. ಮಾರ್ಚ್ ತಿಂಗಳಲ್ಲಿ ನಡೆಯಲಿರುವ ವಲಯ ಉಪಾಧ್ಯಕ್ಷರ ಅಧಿಕೃತ ಭೇಟಿಗಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಇತ್ತೀಚೆಗೆ ನಿಧನರಾದ ಖ್ಯಾತ ವೈದ್ಯ ಡಾ. ಟಿ.ವಿ. ಜೋಸೆಫ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಸಭೆಯಲ್ಲಿ ಮೌನ ಪ್ರಾರ್ಥನೆ ನೆರವೇರಿಸಲಾಯಿತು.
ಸಭೆಯಲ್ಲಿ ವಲಯ ಉಪಾಧ್ಯಕ್ಷ ಜಿತೇಶ್ ಎಲ್. ಪಿರೇರಾ, ಜಸ್ವಂತ್ ಪಿರೇರಾ, ರೇಷ್ಮಾ ಡಿ. ಅಲ್ಮೇಡಾ, ಜೋಸೆಫ್ ಪಿರೇರಾ, ಜೆಸಿಂತಾ ಡಿಸೋಜ, ದಕ್ಷಾ ಜೈನ್, ವಿಕ್ಟರ್ ಸುವಾರಿಸ್, ದೀಪಾ ವಿ., ಲೇಡಿ ಜೆಸಿ ಅಧ್ಯಕ್ಷೆ ರೇಶ್ಮಿ ಡಿಸೋಜ, ಯುವ ಜೆಸಿ ಅಧ್ಯಕ್ಷೆ ಆದ್ಯಾ ಜೈನ್, ಧನುಷ್ ಕುಮಾರ್ ಜೈನ್, ಅಕ್ಷತ್ ರೈ, ನಿತ್ಯಾನಂದ ರೈ, ವಿದ್ಯೇಂದ್ರ ಸೇರಿದಂತೆ ಅನೇಕರು ಚರ್ಚೆಯಲ್ಲಿ ಪಾಲ್ಗೊಂಡರು.
ಆಯುಷ್ ಜೈನ್ ಜೆಸಿ ವಾಣಿ ಮತ್ತು ಧ್ಯೇಯವಾಕ್ಯವನ್ನು ವಾಚಿಸಿದರು, ಕಾರ್ಯದರ್ಶಿ ಜೋಯಲ್ ಪಿರೇರಾ ವಂದಿಸಿದರು.





