ಕಾಯರ್ತಡ್ಕ ಶಾಲೆಯ ನೂತನ ಕೊಠಡಿ ಶಿಲಾನ್ಯಾಸ – ಸ್ಮಾರ್ಟ್ ಟಿವಿ ಉದ್ಘಾಟನೆ

ಶೇರ್ ಮಾಡಿ

ಕೊಕ್ಕಡ: ಕಳೆಂಜ-ಕಾಯರ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎರಡು ತರಗತಿ ಕೊಠಡಿಗಳ ಶಿಲಾನ್ಯಾಸ ಹಾಗೂ ಸ್ಮಾರ್ಟ್ ಟಿವಿ ಉದ್ಘಾಟನೆ ಕಾರ್ಯಕ್ರಮವು ಭಾನುವಾರ ನೆರವೇರಿತು.

ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಕಳೆದ ಅವಧಿಯಲ್ಲಿ ವಿವೇಕ ಶಾಲಾ ಕೊಠಡಿ ಯೋಜನೆಯಡಿ ಈ ಶಾಲೆಗೆ ಎರಡು ಕೊಠಡಿಗಳನ್ನು ಒದಗಿಸಲಾಗಿತ್ತು. ಇದೀಗ ಶತಮಾನೋತ್ಸವದ ಹಿನ್ನೆಲೆ ಹೆಚ್ಚುವರಿ ತರಗತಿ ಕೊಠಡಿಗಳ ಅಗತ್ಯ ಉಂಟಾಗಿದ್ದು, ಸರ್ಕಾರದಿಂದ ಅನುದಾನ ಸಿಗದ ಹಿನ್ನೆಲೆ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ನಿಧಿ ಮೂಲಕ ಸಂಸದರ ಸಹಕಾರದೊಂದಿಗೆ ಇನ್ನೂ ಎರಡು ಕೊಠಡಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಇದೇ ವೇಳೆ ಧರ್ಮಸ್ಥಳ ಧರ್ಮಾಧಿಕಾರಿಗಳ ಸಂಸದರ ನಿಧಿಯಿಂದ ತಾಲೂಕಿನ ಎಲ್ಲಾ ಶಾಲೆಗಳಿಗೆ ಸ್ಮಾರ್ಟ್ ಟಿವಿ ವಿತರಿಸಲಾಗುತ್ತಿದ್ದು, ಕಾಯರ್ತಡ್ಕ ಶಾಲೆಯೂ ಇದರ ಪ್ರಯೋಜನ ಪಡೆದಿದೆ. ಇದು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ವಲಯ ಮೇಲ್ವಿಚಾರಕ ರವೀಂದ್ರ, ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ, ಚಿಗುರು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ಅಂಗರಂಡ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಿಜಯ್ ಕೆ, ಕಾಯರ್ತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿಜಯಕುಮಾರ್ ಹೆಚ್, ಮುಖ್ಯ ಶಿಕ್ಷಕ ಕೃಷ್ಣಪ್ಪ, ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಮಂಜುನಾಥ್ ಗೌಡ ಹಾರಿತ್ತಕಜೆ, ನಿಕಟಪೂರ್ವ ಸದಸ್ಯ ಹರೀಶ್ ಕೊಯ್ಲ ಸೇರಿದಂತೆ ಅನೇಕ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಕೃಷ್ಣಪ್ಪ ಪ್ರಸ್ತಾವಿಕ ಭಾಷಣ ಮಾಡಿದರು. ಶಿಕ್ಷಕಿ ಲಾವಣ್ಯ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೋಸಾ ವಿ.ಟಿ. ವಂದಿಸಿದರು.

Leave a Reply

error: Content is protected !!