





ಕೊಡಗು: ಜಿಲ್ಲೆಯ ಮಡಿಕೇರಿ ತಾಲೂಕಿನ ತಡಿಯಂಡಮೋಳ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಕೊನೆಗೂ ಪತ್ತೆ ಆಗಿದ್ದಾರೆ. ಆ ಮೂಲಕ ನಾಲ್ಕು ದಿನಗಳ ಕಾರ್ಯಾಚರಣೆ ಯಶಸ್ವಿ ಆಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ರಸ್ತೆ ಅರಿವಾಗದೆ ಪಾಳು ಬಿದ್ದ ಬಂಗಲೆಯೊಂದರಲ್ಲೇ ಶರಣ್ಯ ಉಳಿದುಕೊಂಡಿದ್ದರು. ಸ್ಥಳೀಯ ಜನಾಂಗದವರ ಸಹಾಯ ಬೆನ್ನಲ್ಲೇ ಇದೀಗ ಯುವತಿ ಪತ್ತೆ ಆಗಿದ್ದಾರೆ.
ಕೇರಳದಿಂದ ಕೊಡಗು ಜಿಲ್ಲೆಗೆ ಚಾರಣಕ್ಕಾಗಿ ಬಂದು ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಯುವತಿ ಶರಣ್ಯ ಕೊನೆಗೂ ಪತ್ತೆಯಾಗಿದ್ದಾರೆ. ಸದ್ಯ ಯುವತಿಯನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ. ದಾರಿ ತಪ್ಪಿ ಕಾಡಿನಲ್ಲಿ ಕಳೆದುಹೋಗಿದ್ದ ಶರಣ್ಯಗಾಗಿ ಬುಡಕಟ್ಟು ಜನಾಂಗದ ಜೊತೆ ಅರಣ್ಯ ಸಿಬ್ಬಂದಿ 4 ದಿನದಿಂದ ನಿರಂತರ ಹುಡುಕಾಟ ನಡೆಸಿದ್ದರು.
ಯುವತಿ ಶರಣ್ಯ ಕಾಡಿನಲ್ಲಿ ನಡೆದು ನಡೆದು ಪಾಳುಬಿದ್ದ ಬಂಗಲೆ ಸೇರಿದ್ದರು. ರಸ್ತೆ ಅರಿವಾಗದೆ ಅಲ್ಲೇ ಉಳಿದಿದ್ದರು. ಏಪ್ರಿಲ್ 2ರಿಂದ ಕಾಡಿನಲ್ಲಿ ಅಲೆದು ನಿತ್ರಾಣಗೊಂಡಿದ್ದ ಶರಣ್ಯರನ್ನು ಸದ್ಯ ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.
35 ವರ್ಷದ ಶರಣ್ಯ ಕೇರಳದ ಕೋಯಿಕ್ಕೋಡ್ ನಿವಾಸಿ. ಎರ್ನಾಕುಲಂನಲ್ಲಿ ಐಟಿ ಉದ್ಯೋಗಿ. ಗುರುವಾರ ಬೆಳಗ್ಗೆ ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದಕ್ಕೆ ಆಗಮಿಸಿದ್ದ ಈಕೆ ಬೆಳಗ್ಗೆ 8.30ರ ಸುಮಾರಿಗೆ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಹೋಗುವ ಅರಣ್ಯ ಇಲಾಖೆಯ ಚೆಕ್ಪೋಸ್ಟ್ಗೆ ಆಗಮಿಸಿದ್ದಾಳೆ. ಆದರೆ ಒಬ್ಬೊಬ್ಬರನ್ನೇ ಟ್ರೆಕ್ಕಿಂಗ್ ಬಿಡುವುದಿಲ್ಲ ಬೇರೊಂದು ಗ್ರೂಪ್ ಬಂದ ಬಳಿಕ ಅವರ ಜೊತೆ ಈಕೆಯನ್ನ ಕಳುಹಿಸಲಾಗಿತ್ತು.
ಮಧ್ಯಾಹ್ನ 1.30ರ ಸುಮಾರಿಗೆ ಈಕೆ ಇದೇ ಚೆಕ್ ಪೋಸ್ಟ್ ಬಳಿಗೆ ಹಿಂದಿರುಗಬೇಕಿತ್ತು. ಈಕೆಯನ್ನ ಕರೆತರಲೆಂದು ಹೋಮಸ್ಟೇ ಮಾಲಿಕ ನಂದ ತಮ್ಮ ಸ್ಕೂಟಿಯಲ್ಲಿ ಇಲ್ಲಿಗೆ ಬಂದು ಕರೆ ಮಾಡಿದಾಗ ನಾಟ್ ರೀಚೇಬಲ್ ಬಂದಿದೆ. ಮತ್ತೆರಡು ಬಾರಿ ಪ್ರಯತ್ನಿಸಿದಾಗ ಕರೆ ಸ್ವೀಕರಿಸಿದ ಆಕೆ ತಾನು ದಾರಿ ತಪ್ಪಿದ್ದೇನೆ ಎಂದು ಹೇಳಿದ್ದಳು. ಸಿಬ್ಬಂದಿ ಕಾರ್ಯಾಚರಣೇ ನಡೆಸಿದರೂ ಸುಳಿವೇ ಸಿಕ್ಕಿರಲಿಲ್ಲ.
ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ 40ಕ್ಕೂ ಅಧಿಕ ಸಿಬ್ಬಂದಿ, ಸ್ಥಳೀಯರು ಸೇರಿ ಮತ್ತೆ ಕಾರ್ಯಾಚರಣೆ ಮಾಡಿದ್ದರು. ಶ್ವಾನ ದಳವನ್ನೂ ಕರೆಸಿ ಬೆಟ್ಟದ ಮೇಲೆ ಆಕೆ ಎಲ್ಲಿ ಮಿಸ್ ಆಗಿದಳೋ ಅಲ್ಲೆಲ್ಲಾ ಹುಡುಕಾಟ ನಡೆಸಿದರೂ ಸುಳಿವೇ ಇರಲಿಲ್ಲ. ಶರಣ್ಯ ಸುರಕ್ಷಿತವಾಗಿ ಮರಳಿ ಬರಲೆಂದು ಬೆಟ್ಟ ಪ್ರದೇಶದಲ್ಲಿ ವಾಸಿಸುವ ಕುಡಿಯ ಜನಾಂಗ ಮಲೆ ತಮ್ಮಚ್ಚ ದೇವರಿಗೆ ಹರಕೆ ಕೂಡ ಹೊತ್ತಿದ್ದರು. ಇದೀಗ ನಿರಂತರ ಶೋಧ ಬೆನ್ನಲ್ಲೇ ಯುವತಿ ಪತ್ತೆ ಆಗಿದ್ದಾರೆ.




