





ಕೊಕ್ಕಡ: ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಸರಕಾರಿ ಶಾಲೆಯ ಬಾವಿಯು ಬಲ್ಲೆ ಹಾಗೂ ಕೆಸರಿನಿಂದ ತುಂಬಿಕೊಂಡು ಬಳಕೆಗೆ ಅಸಾಧ್ಯವಾಗಿದ್ದ ಹಿನ್ನೆಲೆ, ಡಿವೈಎಫ್ಐ ತಂಡ ಶ್ರಮದಾನದ ಮೂಲಕ ಬಾವಿಯನ್ನು ಸ್ವಚ್ಛಗೊಳಿಸಿ ಮಾದರಿ ಕಾರ್ಯ ನಿರ್ವಹಿಸಿದೆ.
ಶಾಲೆಯ ಮುಖ್ಯಶಿಕ್ಷಕ ಶ್ರೀಧರ ಕೆ.ಎಸ್ ಅವರ ವಿನಂತಿಯ ಮೇರೆಗೆ ಭಾನುವಾರದಂದು ಡಿವೈಎಫ್ಐ ಕಾರ್ಯಕರ್ತರು ಶ್ರಮದಾನಕ್ಕೆ ಮುಂದಾಗಿ, ಬಾವಿಯಲ್ಲಿದ್ದ ಕೆಸರು ಹಾಗೂ ಕಸವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಈ ಕಾರ್ಯಕ್ಕೆ ಅಗತ್ಯವಿದ್ದ ಪರಿಕರಗಳನ್ನು ಬಾಬು ಮರುವಂತಿಲ ಹಾಗೂ ಚಂದ್ರಶೇಖರ ಗೌಡ ಅನಾರು ಒದಗಿಸಿದರು. ಶ್ರಮದಾನದಲ್ಲಿ ಬಾಬು ಮರುವಂತಿಲ, ಬಾಬು ಬಾಂತಿಮಾರು, ಮಾಧವ ಅಡ್ಯೈ, ಗುರುಪ್ರಸಾದ್ ಅಡ್ಯೈ ಹಾಗೂ ರಾಘವ ಅಡ್ಯೈ ಸಕ್ರಿಯವಾಗಿ ಪಾಲ್ಗೊಂಡರು.
ಇನ್ಸ್ಪೈರ್ ಸ್ಪೋರ್ಟ್ಸ್ ಕ್ಲಬ್ ಕೊಕ್ಕಡ ವತಿಯಿಂದ ಶ್ರಮದಾನಿಗಳಿಗೆ ತಂಪು ಪಾನೀಯ ಹಾಗೂ ಐಸ್ಕ್ರೀಂ ನೀಡಲಾಯಿತು. ಶಾಲಾ ಮುಖ್ಯಶಿಕ್ಷಕ ಶ್ರೀಧರ ಕೆ.ಎಸ್ ಉಪಾಹಾರ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಶ್ರೀಧರ ಕೆ.ಎಸ್, ಶಾಲಾ ಎಸ್ಡಿಎಂಸಿ ಅಧ್ಯಕ್ಷ ನವಾಜ್ ಎನ್.ಎಸ್, ಮಾಜಿ ಅಧ್ಯಕ್ಷ ಉಮ್ಮರ್ ಬೈಲಂಗಡಿ, ಶ್ಯಾಮರಾಜ್ ಪಟ್ರಮೆ, ಅನ್ಸರ್ ಹಳ್ಳಿಂಗೇರಿ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದು ಸಹಕಾರ ನೀಡಿದರು.




