ಕೋರಮೇರು ಆದಿಮನೆಯಲ್ಲಿ ನವೀಕೃತ ದೈವಸ್ಥಾನ: ಏಪ್ರಿಲ್ 22 ರಿಂದ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ

ಶೇರ್ ಮಾಡಿ

 

ಕೋರಮೇರು ಆದಿಮನೆಯಲ್ಲಿ ನವೀಕೃತ ದೈವಸ್ಥಾನ: ಏಪ್ರಿಲ್ 22 ರಿಂದ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ


ಕಡಬ: ಇಚ್ಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ ನೂತನವಾಗಿ ನವೀಕರಿಸಲ್ಪಟ್ಟ ದೈವಸ್ಥಾನದಲ್ಲಿ ಶ್ರೀ ಹಳ್ಳತ್ತಾಯ, ಶ್ರೀ ರುದ್ರಚಾಮುಂಡಿ, ಶ್ರೀ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾಪನಾ ಮಹೋತ್ಸವ ಮತ್ತು ನೇಮೋತ್ಸವವು ಏಪ್ರಿಲ್ 22ರಿಂದ 27ರವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.ವಾಸ್ತು ಶಿಲ್ಪಿಗಳಾದ ಶ್ರೀ ಪ್ರಸಾದ್ ಮುನಿಯಂಗಲ ಅವರ ಮಾರ್ಗದರ್ಶನದಲ್ಲಿ ಕಂಗೊಳಿಸುತ್ತಿರುವ ನೂತನ ದೈವಸ್ಥಾನದಲ್ಲಿ, ಪೆರಾಜೆ ಬ್ರಹ್ಮಶ್ರೀ ವೇದಮೂರ್ತಿ ವೇದವ್ಯಾಸ ತಂತ್ರಿಗಳ ವೈದಿಕ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಪ್ರಧಾನ ದೈವಗಳೊಂದಿಗೆ ಪರಿವಾರ ದೈವಗಳಾದ ವರ್ಣಾರ ಪಂಜುರ್ಲಿ, ಸತ್ಯದೇವತೆ, ಗುಳಿಗ, ಕಲ್ಲುರ್ಟಿ, ಭೂಮಿಯ ಪಂಜುರ್ಲಿ, ಬಿರ್ಮೆರ್, ಪುರುಷ ದೈವ, ಗಿಣೆರಾಮ ಹಾಗೂ ಕುಪ್ಪೆ ಪಂಜುರ್ಲಿ ದೈವಗಳ ಪ್ರತಿಷ್ಠಾಪನೆ ನೆರವೇರಲಿದೆ.

ಕಾರ್ಯಕ್ರಮದ ಮೊದಲ ದಿನವಾದ ಏಪ್ರಿಲ್ 22ರ ಬುಧವಾರ ಬೆಳಿಗ್ಗೆ 8:00ಕ್ಕೆ ನಾಗತಂಬಿಲದೊಂದಿಗೆ ಆರಂಭಗೊಂಡು ,ಸಂಜೆ 6:00 ಗಂಟೆಯಿಂದ ಆಲಯ ಪರಿಗ್ರಹ, ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಷಾಲ ಬಲಿ, ಬಿಂಬಾಧಿವಾಸ ರಕ್ಷೆ ಹಾಗೂ ರಾತ್ರಿ 9:00ಕ್ಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ.

ಏಪ್ರಿಲ್ 23ರ ಗುರುವಾರ ಬೆಳಿಗ್ಗೆ 8:00 ರಿಂದ ಗಣಹೋಮ ಮತ್ತು ಕಲಶಪೂಜೆ ಜರುಗಲಿದ್ದು, 8:27ರ ಶುಭ ವೃಷಭ ಲಗ್ನದಲ್ಲಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ತಂಬಿಲ ಸೇವೆ ನೆರವೇರಲಿದೆ. ಅಂದು ಸಂಜೆ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಆಲಯ ಪರಿಗ್ರಹ, ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಷಾಲ ಬಲಿ, ಬಿಂಬಾಧಿವಾಸ ರಕ್ಷೆ ಕಾರ್ಯಕ್ರಮಗಳು ಜರುಗಲಿವೆ.ಏಪ್ರಿಲ್ 24ರ ಶುಕ್ರವಾರ ಬೆಳಿಗ್ಗೆ ಗಣಹೋಮದ ಬಳಿಕ 8:23ರ ವೃಷಭ ಲಗ್ನದಲ್ಲಿ ದೈವಗಳ ಪ್ರತಿಷ್ಠೆ ಮತ್ತು ಕಲಶಾಭಿಷೇಕ ನಡೆಯಲಿದ್ದು, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಇರಲಿದೆ.

ನೇಮೋತ್ಸವದ ವೈಭವ
ಕ್ಷೇತ್ರದ ದೈವಗಳ ನೇಮೋತ್ಸವವು ಏಪ್ರಿಲ್ 26ರ ಆದಿತ್ಯವಾರ ಅತ್ಯಂತ ಸಡಗರದಿಂದ ಆರಂಭವಾಗಲಿದೆ. ಬೆಳಿಗ್ಗೆ 9:00 ಗಂಟೆಗೆ ಶ್ರೀ ಹಳ್ಳತ್ತಾಯ ಮತ್ತು ಪರಿವಾರ ದೈವಗಳ ಭಂಡಾರ ಇಳಿಸಿ ನೇಮೋತ್ಸವಕ್ಕೆ ಚಾಲನೆ ನೀಡಲಾಗುವುದು. ಮಧ್ಯಾಹ್ನ 3:00 ಗಂಟೆಗೆ ಧರ್ಮದೈವ ಶ್ರೀ ರುದ್ರಚಾಮುಂಡಿ, ಗುತ್ತಿನ ದೈವ ಪಿಲಿಚಾಮುಂಡಿ ದೈವಗಳ ಭಂಡಾರ ಇಳಿಸುವ ಪ್ರಕ್ರಿಯೆ ನಡೆದು, ಸಂಜೆ 5:00 ಗಂಟೆಯಿಂದ ನೇಮೋತ್ಸವ ಆರಂಭವಾಗಲಿವೆ.

ಏಪ್ರಿಲ್ 27ರ ಸೋಮವಾರ ಮುಂಜಾನೆ 6:00 ಗಂಟೆಯಿಂದ ಧರ್ಮದೈವ ಶ್ರೀ ರುದ್ರಚಾಮುಂಡಿ ಮತ್ತು ಶ್ರೀ ಶಿರಾಡಿ ದೈವದ ನೇಮೋತ್ಸವ ಜರುಗಲಿದೆ. ಮಧ್ಯಾಹ್ನ 2:00 ಗಂಟೆಗೆ ಗುಳಿಗ ದೈವದ ನೇಮೋತ್ಸವದೊಂದಿಗೆ ಈ ಆರು ದಿನಗಳ ಧಾರ್ಮಿಕ ಉತ್ಸವಕ್ಕೆ ತೆರೆ ಬೀಳಲಿದೆ.ಎಲ್ಲಾ ದಿನಗಳಂದು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಭಕ್ತಾದಿಗಳು ಸಕುಟುಂಬಿಕರಾಗಿ ಆಗಮಿಸಿ ದೈವಗಳ ಗಂಧಪ್ರಸಾದ ಸ್ವೀಕರಿಸಬೇಕೆಂದು ಕೋರಮೇರು ಆದಿಮನೆಯ ಯಜಮಾನರಾದ ಶ್ರೀಮತಿ ಮತ್ತು ರಾಮಕೃಷ್ಣ ಗೌಡ, ಹಿರಿಯರಾದ ಲಿಂಗಪ್ಪ ಗೌಡ, ಸಮಸ್ತ ಕುಟುಂಬಸ್ಥರು ಹಾಗೂ ವ್ಯವಸ್ಥಾಪನಾ ಸಮಿತಿ ವಿನಂತಿಸಿದೆ.

 

Leave a Reply

error: Content is protected !!