







ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವತಿಯಿಂದ 12ನೇ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉಜಿರೆಯ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಹರ್ಷಿಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯೋಗವು ಮನಸ್ಸನ್ನು ಹತೋಟಿಯಲ್ಲಿ ಇಡಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗಿ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲೂ ಯೋಗ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಡಾ.ರಾಜೇಶ್ ಬಿ. ಮಾತನಾಡಿ, ವಿಶ್ವ ಯೋಗ ದಿನವು ಯೋಗದ ಮಹತ್ವವನ್ನು ನೆನಪಿಸುವ ದಿನ ಮಾತ್ರ. ಯೋಗದ ನಿಜವಾದ ಅನುಭವ ಮತ್ತು ಪ್ರಯೋಜನಗಳು ಪ್ರತಿನಿತ್ಯದ ಅಭ್ಯಾಸದಿಂದಲೇ ದೊರೆಯುತ್ತವೆ. ಆರೋಗ್ಯವಂತ ಜೀವನಕ್ಕಾಗಿ ಯೋಗ ಅತ್ಯಮೂಲ್ಯವಾದ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎನ್ಎಸ್ಎಸ್ ಸ್ವಯಂಸೇವಕ ಸಾಕೇತ್ ಯೋಗ ದಿನದ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್., ಸಹ ಯೋಜನಾಧಿಕಾರಿ ಶೋಭಾ ಪಿ. ಉಪಸ್ಥಿತರಿದ್ದರು.
ಬಳಿಕ ಉಜಿರೆ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಡಾ.ಅತುಲಾ, ಡಾ.ಶಿವರಾಜ್ ಹಾಗೂ ಡಾ. ವಿವೇಕ್ ಅವರು ಸ್ವಯಂಸೇವಕರಿಗೆ ಯೋಗಾಭ್ಯಾಸ ಶಿಬಿರ ನಡೆಸಿಕೊಟ್ಟು ವಿವಿಧ ಯೋಗಾಸನಗಳ ಮಹತ್ವ ಮತ್ತು ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೇಯ ಸ್ವಾಗತಿಸಿದರು. ಸುಪೇಕ್ಷಾ ನಿರೂಪಿಸಿದರು, ಅನ್ವಿತಾ ವಂದಿಸಿದರು.



