









ನೆಲ್ಯಾಡಿ: ಕಳೆದ ಎರಡು ವರ್ಷಗಳಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನೆಲ್ಯಾಡಿ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿ ಗ್ರಾಹಕರ ವಿಶ್ವಾಸ ಹಾಗೂ ಪ್ರೀತಿ ಗಳಿಸಿದ್ದ ಪಂಕಜ್ ಕುಮಾರ್ ಅವರು ವರ್ಗಾವಣೆಯಾದ ಹಿನ್ನೆಲೆಯಲ್ಲಿ ನೆಲ್ಯಾಡಿಯ ಸಾರ್ವಜನಿಕರು, ಉದ್ಯಮಿಗಳು ಹಾಗೂ ಬ್ಯಾಂಕ್ ಗ್ರಾಹಕರು ಅವರನ್ನು ಸನ್ಮಾನಿಸಿ ಗೌರವಪೂರ್ವಕವಾಗಿ ಬೀಳ್ಕೊಟ್ಟರು.
ಕಾರ್ಯಕ್ರಮದಲ್ಲಿ ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲೆಯ ಅಧ್ಯಕ್ಷ ನಾಝೀಂ ಸಾಹೇಬ್ ಅವರು ಪಂಕಜ್ ಕುಮಾರ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಗಣೇಶ್ ಸ್ಟೋರ್ನ ಮಾಲಕರಾದ ದಿನೇಶ್ ಎಂ.ಟಿ. ಅವರು ಹಣ್ಣುಹಂಪಲು ನೀಡಿ ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ನಾಝೀಂ ಸಾಹೇಬ್ ಅವರು ಪಂಕಜ್ ಕುಮಾರ್ ತಮ್ಮ ಸೇವಾ ಅವಧಿಯಲ್ಲಿ ಗ್ರಾಹಕ ಸ್ನೇಹಿ ಸೇವೆ, ಸರಳ ವ್ಯಕ್ತಿತ್ವ ಹಾಗೂ ಕರ್ತವ್ಯನಿಷ್ಠೆಯ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ಪಂಕಜ್ ಕುಮಾರ್ ಅವರು ನೆಲ್ಯಾಡಿಯ ಜನತೆ ತೋರಿದ ಪ್ರೀತಿ, ಸಹಕಾರ ಮತ್ತು ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿ, ತಮ್ಮನ್ನು ಗೌರವಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಉದ್ಯಮಿಗಳಾದ ರಾಜಾ, ಉಸ್ಮಾನ್ ಬೈಲು, ಜಿ.ಕೆ. ಶರೀಫ್, ಮಸೂದ್ ಸಿಟಿ, ಮಂಜುನಾಥ್, ಲಕ್ಷ್ಮೀ ಮೊಬೈಲ್ ಮಾಲೀಕರು, ಕೃಷಿಕರಾದ ಬಾಲಕೃಷ್ಣ ತೋಟ, ಸುರಕ್ಷಾ ರವಿ, ರಝಾಕ್ ಪೈಂಟರ್, ಶಶಿ ಟೈಲರ್, ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಸನತ್ ಕುಮಾರ್, ಸಿಬ್ಬಂದಿಗಳಾದ ಮೋಹನ್ ಕುಮಾರ್, ಬಾಲಕೃಷ್ಣ, ತೋಮಸ್, ರಾಜೀವ್ ಉಪಸ್ಥಿತರಿದ್ದರು. ರಫೀಕ್ ಬೈಲು ಸ್ವಾಗತಿಸಿದರು.



