ನೆಲ್ಯಾಡಿ: ಧಾರಾಕಾರ ಮಳೆಗೆ: ಗುಂಡ್ಯಹೊಳೆ ಪ್ರವಾಹ, ಕೃಷಿಭೂಮಿ ಜಲಾವೃತ

 

ನೆಲ್ಯಾಡಿ: ಧಾರಾಕಾರ ಮಳೆಗೆ: ಗುಂಡ್ಯಹೊಳೆ ಪ್ರವಾಹ, ಕೃಷಿಭೂಮಿ ಜಲಾವೃತ

ನೆಲ್ಯಾಡಿ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ತೋಡು, ಹಳ್ಳ-ತೊರೆಗಳು ಹಾಗೂ ಕುಮಾರಧಾರಾ ಮತ್ತು ಗುಂಡ್ಯಹೊಳೆಗಳು ತುಂಬಿ ಹರಿಯುತ್ತಿದ್ದು, ಗುಂಡ್ಯಹೊಳೆಯಲ್ಲಿ ಪ್ರವಾಹ ಉಕ್ಕಿ ಹರಿಯಲಾರಂಭಿಸಿದೆ. ಮಳೆಯ ರಭಸಕ್ಕೆ ಹಲವೆಡೆ ಸಮಸ್ಯೆಗಳು ಎದುರಾಗಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ.

ಶನಿವಾರ ದಿನವಿಡೀ ಸಂಪೂರ್ಣ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಧಾರಾಕಾರ ಮಳೆ ನಿರಂತರವಾಗಿ ಸುರಿದ ಪರಿಣಾಮ ನದಿ-ಹಳ್ಳಗಳು ಅಪಾಯದ ಮಟ್ಟ ತಲುಪಿವೆ. ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಎಚ್ಚರಿಕೆಯಿಂದ ಓಡಾಡುವಂತಾಗಿದೆ.

ಇಚಿಲಂಪಾಡಿ ಭಾಗದಲ್ಲಿ ಗುಂಡ್ಯಹೊಳೆ ಉಕ್ಕಿ ಹರಿಯುತ್ತಿದ್ದು, ನದಿ ನೀರು ಕುರಿಯಾಲ ಕೊಪ್ಪ, ಬೇರಿಕೆ ಹಾಗೂ ಇಚಿಲಂಪಾಡಿ ಭಾಗದ ಕೃಷಿಭೂಮಿಗಳಿಗೆ ನುಗ್ಗಿದೆ. ಪರಿಣಾಮವಾಗಿ ವಿವಿಧ ಬೆಳೆಗಳಿರುವ ಕೃಷಿ ಜಮೀನುಗಳು ಜಲಾವೃತಗೊಂಡಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ.

ಇದೇ ವೇಳೆ ಕಲ್ಲುಗುಡ್ಡೆ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ತಾತ್ಕಾಲಿಕ ತಡೆ ಉಂಟಾಗಿದೆ. ಪ್ರವಾಹದ ನೀರು ರಸ್ತೆಯ ಮೇಲೆ ಹರಿಯುತ್ತಿರುವ ಕಾರಣ ಸಾರ್ವಜನಿಕರು ಅನಗತ್ಯ ಸಂಚಾರವನ್ನು ತಪ್ಪಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಹವಾಮಾನ ಇಲಾಖೆ ಇನ್ನೂ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ನಿವಾಸಿಗಳು ಹಾಗೂ ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸ್ಥಳೀಯ ಆಡಳಿತ ಸೂಚಿಸಿದೆ.

 

Leave a Reply

error: Content is protected !!