ಧರ್ಮಸ್ಥಳದಲ್ಲಿ 50ನೇ ವರ್ಷದ ಸಾಮೂಹಿಕ ವಿವಾಹ, ಹಸೆಮಣೆ ಏರಿದ 183 ಜೋಡಿ

ಶೇರ್ ಮಾಡಿ

ನೇಸರ ಎ.28: 50ನೇ ವರ್ಷದ ಈ ಉಚಿತ ಸಾಮೂಹಿಕ ವಿವಾಹ ಸಮಾರಂಭ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.

ಬುಧವಾರ ಸಂಜೆ ಗಂಟೆ 4.30ಕ್ಕೆ ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಬೀಡಿನಿಂದ ವಧು-ವರರು ಆಶೀರ್ವಾದವನ್ನು ಪಡೆದು ಮೆರವಣಿಗೆ ಮೂಲಕ ದೇವಳಕ್ಕೆ ಸುತ್ತು ಬಂದು, ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.
ಸಿಂಗರಿಸಿದ ಆನೆಗಳು, ಕೊಂಬು, ಕಹಳೆ, ಬ್ಯಾಂಡ್‌ ವಾದ್ಯಗಳ ಮೂಲಕ ಕ್ಷೇತ್ರದ ಪರವಾಗಿ ಸಾಂಪ್ರದಾಯಿಕವಾಗಿ ಮೆರವಣಿಗೆಯಲ್ಲಿ ವಧು-ವರರನ್ನು ಸ್ವಾಗತಿಸಲಾಯಿತು. ಡಾ. ಹೆಗ್ಗಡೆ ದಂಪತಿಗಳು, ರಾಜ್ಯ ಸರಕಾರದ ಕಂದಾಯ ಸಚಿವ ಆರ್. ಅಶೋಕ್, ಚಲನ ಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್, ಶಾಸಕ ಹರೀಶ್ ಪೂಂಜ, ಹೇಮಾವತಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್ ಮತ್ತು ಅತಿಥಿಗಣ್ಯರು ವಧುವಿಗೆ ಮಂಗಳ ಸೂತ್ರ ವಿತರಿಸಿ, ಆಯಾ ಜಾತಿ-ಸಂಪ್ರದಾಯದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವೈದಿಕರ ಮಂಗಳ ವೇದಘೋಷ, ವಾದ್ಯಘೋಷಗಳ ನಡುವೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 183 ಜೋಡಿ ವಧು-ವರರು ಬುಧವಾರ ಸಂಜೆ 6.50ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನೂತನ ದಂಪತಿಗಳಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟರು.
ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 1972ರಲ್ಲಿ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ಪ್ರಾರಂಭಿಸಿದ್ದು, ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತದೆ. ಇಂದು 50ನೇ ವರ್ಷವನ್ನು ಪೂರೈಸಿದ್ದು, ಇದುವರೆಗೆ ಒಟ್ಟು 12,576 ಜೋಡಿ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ಬುಧವಾರ ಮಂಗಲ ಮುಹೂರ್ತದಲ್ಲಿ ವಧು-ವರರಾಗಿ ಪವಿತ್ರ ಬಾಂಧವ್ಯವನ್ನು ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ, ಕಾಮಗಳಲ್ಲಿ ಸಹಚರರಾಗಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಹಾಗೂ ಯಾವೂದೇ ದುರಭ್ಯಾಸಗಳಿಗೆ ತುತ್ತಾಗದೆ ಬದುಕುತ್ತೇವೆ ಎಂಬುದಾಗಿ ಭಗವಾನ್‌ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣ ವಚನಕ್ಕೆ ಬದ್ಧರಾಗುತ್ತಿದ್ದೇವೆ ಎಂದು ನೂತನ ದಂಪತಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಪ್ರಾರಂಭವಾದ ವರ್ಷ 1972ರಲ್ಲಿ ಮದುವೆಯಾದ ಪಕಿರ ಪೂಜಾರಿ ಮತ್ತು ಸೋಮನಾಥ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು.

ವೀಕ್ಷಿಸಿ SUBSCRIBERS ಮಾಡಿ

🔆 ಜಾಹೀರಾತು 🔆

Leave a Reply

error: Content is protected !!